Pages

ಸೋಮವಾರ, ಸೆಪ್ಟೆಂಬರ್ 13, 2010


ನಮ್ಮ `ಗೆಸ್ಟ್'..!

ಇನ್ನೇನು ಚಪ್ಪಲಿ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಸ್ನೇಹಿತನ ಆಗಮನ. ಅವಸರವಸರವಾಗಿ ಬಂದವನೇ ನಮ್ಮ ಬಾಡಿಗೆ ಮನೆಗೆ ಒಳಹೊಕ್ಕು ಕೇಳಿದ... ಈರೆಡ ಪರತ್ ಟೀಶರ್ಟ್ ಉಂಡೇ...(ನಿಮ್ಮಲ್ಲಿ ಹಳೆ ಟೀಶರ್ಟ್ಇದೆಯಾ) ಅಂತಾ ಕೇಳಿದ.. ಏನಪ್ಪಾ ಇವನು ಹಳೆ ಟೀಶರ್ಟ್ ಕೇಳ್ತಾನೆ... ಅಂಗಿ ಏನಾದ್ರೂ ಹರಿದುಹೋಯ್ತಾ... ಅಂತಾ ಅಡಿಯಿಂದ ಮುಡಿಯುವವರೆಗೆ ಆರ್ಶರ್ಯಕರ ರೀತಿಯಲ್ಲಿ ನೋಡಿದೆ... ಬಹುಶಃ ನನ್ನ ಅವನಿಗೆ ಭಾವನೆ ಕೂಡಲೇ ಅರ್ಥವಾಗಿರಬೇಕು..... ಎಂಕತ್ತ್ ಮಾರ್ರೆ... (ನನಗಲ್ಲ ಮಾರಾಯ್ರೆ) ಅಂದ.. ಪುನಃ ನನ್ನ ಪ್ರಶ್ನೆ.. ಮತ್ತೆ ಯಾರಿಗೆ....??  ಗೆಸ್ಟ್ ಬಂದಿದ್ದಾರೆ.. ಅವರಿಗೆ ಕೊಡಬೇಕು.. ಎಂದ.. ನಾನಂದೆ... ನನ್ನಲ್ಲಿ ಹಳೇ ಟೀಶರ್ಟ್ ಅಂತಾ ಯಾವುದೂ ಇಲ್ಲ... ಒಂದ್ಸಲ ಹಾಕೋದಾದ್ರೆ ಕೊಡೋಣ... ಅಲ್ಲ.. ಅದು ಅವ್ರಿಗೆ ಪರ್ಮನೆಂಟ್.. ಬೇಕು.... ಎಂದ ಸರಿ... ಎನ್ನುತ್ತಾ ನಾನು ಅಲ್ಲೇ ಇದ್ದ ನನ್ನ    ಟೀಶರ್ಟ್ ತೆಗೆದುಕೊಟ್ಟೆ... ಅದಕ್ಕಿಂತಲೂ ನನಗೆ ಸ್ನೇಹಿತ ಕರಕೊಂಡು ಬಂದ ಗೆಸ್ಟ್ ನೋಡೋ ಕುತೂಹಲ.. ಯಾರಪ್ಪ ಒಂದು ಬಟ್ಟೆಗೂ ಗತಿಯಿಲ್ಲದಿರೋನು  ಅಂತಾ ಆಶ್ಚರ್ಯವಾಗಿತ್ತು. ಮನೆಯಿಂದ ಹೊರಗೆ ಬಂದವನೇ...... ಎದುರಿಗೆ ಇವನ ಗೆಸ್ಟ್ ನಿಂತಿದ್ದಾನೆ.. ಖಾಕಿ ಅಂಗಿ, ಚಡ್ಡಿಯಲ್ಲಿ. ನಿರರ್ಗಳವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ......  ಅಸಹನೀಯ ಗಬ್ಬುನಾಥ ಬೇರೆ.. ವಾಕ್ ವಾಕ್.. ವಾಂತಿ ಬಂದತಾಯಿತು.. ಅಯ್ಯೋ... ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.

ಬಿಟ್ಟು ಬಿಡಿ ಪ್ಲೀಸ್....
ಅಂದಹಾಗೆ..ಗೆಸ್ಟ್ ಗೂ ಮೊನ್ನೆ ಮೊನ್ನೆ ಬೆಂಗಳೂರಿನ ಭಿಕ್ಷುಕರ ಕಾಲೊನಿಗೂ ಸಂಬಂಧವಿದೆ. ಕಾಲೊನಿಯದ್ದು ಹೇಳಲಾರದ... ಕರುಣಾಜನಕ ಕಥೆ.. ಇಡೀ ಮನವ ಸಮಾಜಕ್ಕೇ ನಾಚಿಕೆಗೇಡಿನ ವಿಚಾರ.  ಭಿಕ್ಷುಕರ ಕಾಲೊನಿ ಅನ್ನೋ ನರಕಸದೃಶ ವಾತಾವರಣದಲ್ಲಿ.. ಚಿಕಿತ್ಸೆ ಇಲ್ಲದೆ... ಬೀದಿ ನಾಯಿಗಿಂತಲೂ ತೀರ ನಿಕೃಷ್ಟ ಮಟ್ಟದಲ್ಲಿ ಒಂದೇ ತಿಂಗಳಿನಲ್ಲಿ ಸುಮಾರು 27 ಹೆಣಗಳುರುಳಿದ್ದವು.... ಅದಕ್ಕೂ ಮುನ್ನ ಮಲಗಿದ್ದಲ್ಲೇ ಹೆಣವಾದವರೆಷ್ಟೋ....? ಅಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡಿಕೊಳ್ಳುತ್ತಿಲ್ಲ ಅನ್ನೋದು ನನಗೆ ಅರಿವಾದದ್ದು ಸ್ನೇಹಿತ ಕರೆದುಕೊಂಡು ಬಂದಿದ್ದ `ಗೆಸ್ಟ್'ನ ಅವಸ್ಥೆ ನೋಡಿಯೇ...
ಮೈತುಂಬಾ ಕೊಳೆ, ಗಬ್ಬು ನಾರುವ ದೇಹ, ಬಟ್ಟೆಗಳು.... ಹಲ್ಲುಜ್ಜದೇ ವರ್ಷಗಳೇ ಕಳೆದುವೇನೋ ಅನ್ನೋ ಪರಿಸ್ಥಿತಿ.. ಆ ಮನುಷ್ಯನ ಹತ್ತಿರಕ್ಕೂ ಹೋಗಲಾಗುತ್ತಿರಲಿಲ್ಲ.. ಅಂತಾ ಮನುಷ್ಯನನ್ನು ಈ ಅಸಾಮಿ ಬೈಕ್ನಲ್ಲಿ ಕುಳ್ಳಿರಿಸಿ ಕರಕೊಂಡು ಬರಬೇಕಾದರೆ... ಅಬ್ಬಾ.. ಎಂದಿತ್ತು ಮನಸ್ಸು..
ಅವನ ಹೆಸರು ರಾಮಕೃಷ್ಣ... ವಯಸ್ಸು ಸುಮಾರು 55 ದಾಟಬಹುದು. ಶಿರಾ ಬಳಿಯ ಯಾವುದೋ ಒಂದು ಊರು.. ಪಾಶ್ರ್ವವಾಯು ಪೀಡಿತನಾಗಿದ್ದವನು ಚಿಕಿತ್ಸೆಗೆಂದು ಬೆಂಗಳೂರಿಗೆ  ಆಸ್ಪತ್ರೆಗೆ ಬಂದಿದ್ದ... ಬಟ್ಟೆಯೆಲ್ಲ ಕೊಳಕಾಗಿ ಭಿಕ್ಷುಕನಂತೆ ಕಾಣುತ್ತಿತ್ತೋ ಏನೋ.. ಆಸ್ಪತ್ರೆಯಲ್ಲಿ ಕುಳಿತಿದ್ದ ಇವನನ್ನು ಭಿಕ್ಷುಕರ ಕಾಲೊನಿಯ ಕಟುಕರು ನೋಡಿದವರೇ ಎತ್ತಾಕಿಕೊಂಡು ಹೋಗಿದ್ದರು.. ಇವನದೋ ಒಂದೇ ಸವನೆ ಬೊಬ್ಬೆ.. ಬಿಡಿ ನನ್ನ... ಊರಿಗೆ ಹೋಗ್ಬೇಕು.. ಉಹೂಂ... ಇವನ ರೋದನೆಗೆ ಅವ
ರಾರೂ ಜಗ್ಗಲಿಲ್ಲ.. ಎರಡೇಟು ಹಾಕಿ ಕಾಲೊನಿಯೊಳಕ್ಕೆ ದೂಡಿದ್ರೋ ಏನೋ...
2ವರ್ಷಗಳ ಹಿಂದೆ ಹಾಗೆ ಕಾಲೊನಿಯೊಳಕ್ಕೆ ಹೋದವನು... ಹೊರಕ್ಕೆ ಬಂದಿದ್ದು ಮೊನ್ನೆಯೇ.. ಅದಕ್ಕೂ ಹೆಚ್ಚಾಗಿ ಸುಲಲಿತವಾಗಿ ಇಂಗ್ಲಿಷ್ ಬರುತ್ತಿತ್ತು... ಸೋಪು, ಟವೆಲ್ ಕೊಟ್ಟು ಸ್ನಾನಕ್ಕೆ ಕಳುಹಿಸಿದಾಗಲೇ ಅಲ್ಪ ಸ್ವಲ್ಪ ಪ್ರವರ ತಿಳಿದುಕೊಂಡೆ.. ಅದು ನರಕ ಸ್ವಾಮಿ... ಅಲ್ಲಿ ಮನುಷ್ಯರಿಗೆ  ಬೆಲೆ ಇಲ್ಲ.. ಜೀವನವೇ ಬೇಡ ಅನಿಸುತ್ತಿತ್ತು.. ಹೋಗಲು ಬಿಡಿ ಎಂದರೆ.. ದನಕ್ಕೆ ಬಡಿಯುವಂತೆ ಬಡಿಯುತ್ತಾರೆ.. ಇನ್ನು.. ಊರಲ್ಲಿ ಮಗಳಿದ್ದಾಳೆ.. ಅವರನ್ನೆಲ್ಲಾ ನನಗೆ ನೋಡಬೇಕು.. ಮತ್ತೆ ಯಾವಾಗ ಮನೆ ಸೇರುತ್ತೇನೋ ಎಂಬಂತಿತ್ತು... ಅವನ ಮಾತು. ಹಲವು ಹೆಣಗುರುಳಿದ ಬಳಿಕ ಕಾಲೊನಿಯ ಗೇಟು ತೆಗೆದ ವೇಳೆ ಹಲವರು ಓಡಿ ಹೋದ್ರು.. ನನ್ನನ್ನು ನಿಮ್ಮವರು (ಸ್ನೇಹಿತನ ಬಗ್ಗೆ)  ಇಲ್ಲಿವರೆಗೆ ಕರಕೊಂಡು ಬಂದರು.. ಅಂತಾ ಎಲ್ಲವನ್ನೂ ಹೇಳಿದ.... ಬದುಕು ಹೀಗೂ ಉಂಟೇ ಎಂಬ ಪ್ರಶ್ನೆ ನಿಧಾನಕ್ಕೆ ನನ್ನನ್ನು ಸುಳಿಯತೊಡಗಿತು... ಅಲ್ಪ ಸ್ವಲ್ಪ ಕೊಳೆಯಾದ ಬಟ್ಟೆ ಹಾಕಿ ಬಸ್ಸ್ಟ್ಯಾಂಡ್... ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರೆ.. ಭಿಕ್ಷುಕರ ಕಾಲೊನಿಯವರು ಹಿಡಿದು ಕರಕೊಂಡುಹೋಗುತ್ತಾರೆಂದರೆ... ಅಬ್ಬಾ ಪರಿಸ್ಥಿತಿ ಎಷ್ಟು ಕಠೋರ ಬೆಚ್ಚಿ ಬಿದ್ದೆ....! ಕೊಡೋ ಊಟವನ್ನೂ ಸರಿಯಾಗಿ ಕೊಡದೇ.... ಬೀದಿನಾಯಿಗಿಂತಲೂ ಕಡೆಯಾಗಿ ಬದುಕುವ ಪರಿಸ್ಥಿಯಿದೆಯಲ್ಲ... ಅದು ಯಾರಿಗೂ ಬೇಡ.. ಇದು ರಾಮಕೃಷ್ಣನ ಕಥೆ ಮಾತ್ರವಲ್ಲ.. ಭಿಕ್ಷುಕರ ಕಾಲೊನಿಯ ಕಟುಕರು ಹೀಗೆ ಹಲವಾರು ಮಂದಿಯನ್ನು ವಿವಿಧೆಡೆಗಳಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡುಹೋಗಿದ್ದರು.. ಭಿಕ್ಷುಕರ ಕಾಲೊನಿಯ ದುರಂತ ಬಳಿಕ ಸತ್ಯಗಳು ಒಂದೊಂದಾಗಿ ಮೆಲ್ಲನೆ ಮಾಧ್ಯಮಗಳಲ್ಲಿ ಬರತೊಡಗಿದವು... ಆದರೆ ನನಗೆ ಭಿಕ್ಷುಕರ ಕಾಲೊನಿಯ `ವಿಶ್ವರೂಪ ದರ್ಶನ'ವಾದದ್ದು ರಾಮಕೃಷ್ಣನನ್ನು ನೋಡಿದ ಬಳಿಕವೇ....

ಇಂತಿಪ್ಪ ರಾಮಕೃಷ್ಣನನ್ನು ಬಟ್ಟೆಹಾಕಿಸಿ.. ಕೈಯಲ್ಲಿ ಒಂದಷ್ಟು ಕಾಸು ಕೊಟ್ಟು.... ಟಿಕೇಟ್ ತೆಗೆದು ರೈಲು ಹತ್ತಿಸಿ ಬಂದು ಸ್ನೇಹಿತ ನಿಜ ಮಾನವೀಯತೆ ಮೆರೆದ... ಒಂದರ್ಥದಲ್ಲಿ `ದೇವರೂ' ಆದ... ರಾಮಕೃಷ್ಣನ ಸನ್ನಿವೇಶದ ಬಳಿಕ 2 ದಿನ ನಾನು ಕೊಲೊನಿ ದುರಂತ ಬಗ್ಗೆ ಹೆಚ್ಚು ಅಲೋಚನೆ ಮಾಡುತ್ತಿದ್ದೆ.... ಅಲ್ಲಿ ಇಲ್ಲಿ ಪೇಟೆ ಸಂದುಗೊಂದುಗಳಲ್ಲಿದ್ದವರನ್ನೆಲ್ಲ ಎಳಕೊಂಡು ಹೋದರೆ... ಅವರ ಸಾವಿಗೆ ಮುನ್ನುಡಿ ಬರೆದಂತೆಯೇ.. ಭಿಕ್ಷುಕರ ಕಾಲೊನಿ ಕೊಲೆ ಕೇಂದ್ರವೇ ಅನ್ನೋ ಸಂಶಯವೂ ಮೂಡತೊಡಗಿತ್ತು. ಇಷ್ಟಕ್ಕೂ ದುರಂತ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಿ. ಸುಧಾಕರ್ ಸುವರ್ಣನ್ಯೂಸ್ನಲ್ಲಿ ಹೀಗೆ ಹೇಳಿದ್ದರು... `ಕಾಲೊನಿಲ್ಲಿ ಇದೆಲ್ಲ ಕಾಮನ್... ಆಶ್ಚರ್ಯವೇನೂ ಇಲ್ಲ... ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂಬಂತೆ.. ಆ ಬಳಿಕ ಸಚಿವರ ತಲೆದಂಡವಾಗಿ... ಭಿಕ್ಷುಕರ ಕಾಲೊನಿಗೆ ಮಂದಿಮಾಗಧರು ಬಂದು... ಕಾಲೊನಿಯ ಚಿತ್ರಣ ಅಲ್ಪಸ್ವಲ್ಪ ಬದಲಾಗಿದೆ. ಆದ್ರೆ... ದುರಂತದ ಬಗೆಗಿನ ಚಿತ್ರಣಗಳು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ.

ಶನಿವಾರ, ಏಪ್ರಿಲ್ 10, 2010

ನಿರುತ್ತರ...!
                                                               
ಮನುಷ್ಯ ಎನ್ನುವ ಪ್ರಾಣಿಯಲ್ಲಿರುವ `ಸ್ವಾರ್ಥ' ಎನ್ನುವುದು ವಿಪರೀತ ಮಟ್ಟಕ್ಕೆ ಹೋಗುವುದಿದೆ. ತಾನು ಮಾತ್ರ ಬದುಕಿದರೆ ಅಯಿತು ಉಳಿದವರು ಏನಾದರೂ ಮಾಡಿಕೊಳ್ಳಲಿ ಎನ್ನುವ ಗುಣ! ಆಹಾ!! ಅದಕ್ಕೊಂದು ಉದಾಹರಣೆ ಕಂಡದ್ದು ನಾನಿರುವ ಉಡುಪಿ ಮನೆಯಲ್ಲಿ! ಎಲ್ಲರಿಗೂ ಸ್ವಾರ್ಥ ಎನ್ನುವುದು ಇದ್ದೇ ಇರುತ್ತದೆ. ಅದರೆ ಅದು ಒಂದು ಮಟ್ಟ ಮೀರಿ ಹೋದರೆ ಏನು ಸುಖ ಹೇಳಿ... ಸೀದ ವಿಷಯಕ್ಕೇ ಬರುತ್ತೇನೆ!
         ನಾನು ಮಣಿಪಾಲಕ್ಕೆ ಬಂದು ಕೆಲ ಸಮಯವಾಯಿತು. ಇರೋದು ಉಡುಪಿ ಸನಿಹದ ಒಂದು ಮನೆಯಲ್ಲಿ. ಆಶ್ಚರ್ಯದ ಸಂಗತಿಯೆಂದರೆ ಈ ಮನೆ ನನಗೆ ಎಂದೂ ಪೇಟೆ ಎಂದೆನಿಸಿದ್ದಿಲ್ಲ. ರಾಷ್ಟ್ರೀಯ ಹೆದ್ದಾರಿ ಸನಿಹವೇ ಇದ್ದರೂ ಅಲ್ಪ ಸ್ವಲ್ಪ ಹಳ್ಳಿಯ ವಾತಾವರಣ ಇನ್ನೂ ಉಳಕೊಂಡಿದೆ.  ಅದಕ್ಕಿಂತಲೂ ಹೆಚ್ಚಿಗೆ ನಾಲ್ಕು ಮೈನಾ ಹಕ್ಕಿ, ಎರಡು ಕಾಗೆ, ಅಪರೂಪಕ್ಕೆ ಗೀಜಗ, ಕೋಗಿಲೆ. ಮಿಂಚುಳ್ಳಿ ಎಲ್ಲಾ ಹಕ್ಕಿಗಳ ದರ್ಶನವೂ ನನ್ನ ಮನೆ ಹೊರಭಾಗದಲ್ಲಿ ನಿಂತರೆ ಆಗುವುದಿದೆ. ಕಾರಣ, ಮನೆಯ ಕಂಪೌಂಡ್ ಒಳಗಿರುವ ಸಮೃದ್ಧ ಹಣ್ಣು ನೀಡುವ ಎರಡು ಪಪ್ಪಾಯಿ ಸಸಿಗಳು ಮತ್ತು ಸೀತಾಫಲದ ಸಸಿ. ಹಣ್ಣು ಕಾಯಿ ಆಗುವ ಈ ಸಮಯ ಹಕ್ಕಿಗಳ ಮೆರವಣಿಗೆ ಹಾಗೇ ನಮ್ಮ ಮನೆ ಮುಂದೆ. ಆದನ್ನು ನೋಡುವುದೇ ಒಂದು ಸಂಭ್ರಮ. ಬೆಳಗಾಗೆದ್ದು, ಸಿಟೌಟಿನಲ್ಲಿ ಕೂತರೆ, ಎಲ್ಲಾ ಹಕ್ಕಿಗಳೂ ಬಂದು ಮುಂದಿನ ಸರಳುಗಳ ಮೇಲೆ ಕೂತು ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಹೋಗುತ್ತವೆ.
ನಾಳೆ ಬರುತ್ತೇನೆ ಎನ್ನುವಂತೆ. ನಾನು ಬಂದ ಲಾಗಾಯ್ತು ಈ ಸಂಭಾಷಣೆ ನಿರಂತರ ನಡಕೊಂಡು ಬಂದಿದೆ.. ನನ್ನ ಬೇಸರ ಕಳೆಯಲು ಉಪಾಯವೂ ಆದ್ದಿದೆ.
          ಈ ಸಮಯ ಯಾವತ್ತೂ ಹೀಗೆ ಮುಂದುವರಿಯಬೇಕೆಂದೇನಿಲ್ಲವಲ್ಲ! ಹೌದು ಹಾಗೆಯೇ ಆಯಿತು.
ಮಹಡಿ ಮೇಲಿನ ಮನೆಯಲ್ಲಿ ನಾನಿರುವುದಾದರೆ, ಕೆಳಗಿನದ್ದು ಓನರ್ ಮನೆ. ಅವರಿಲ್ಲಿ ವಾಸ ಮಾಡದೇ ಕೆಲ ದಿನಗಳಾಗಿ ಧೂಳು, ಕಸ ತುಂಬಿ ನಮ್ಮ ಮನೆಗೆ ಬರುವವರಿಗೆ ನರಕ ದರ್ಶನವಾಗುತ್ತಿತ್ತು.  ಒಂದು ದಿನ ನಲ್ಕಾರು ಜನ ಬಂದು ಶುಚಿಗೊಳಿಸುವ ಕಾರ್ಯಕ್ರಮ ಆರಂಭವಾಯಿತು.ನನ್ನ ಮನೆಯಲ್ಲಿರುವ ಇಬ್ಬರು ಗೆಳೆಯರೂ ಸೇರಿದಂತೆ ನಮಗೆ ಖುಷಿಯಾಗಿತ್ತು. ಮನೆ ಪರಿಸರ ಸ್ವಚ್ಛ ಸುಂದರವಾಗುತ್ತಿದೆಯಲ್ಲ ಎಂದು.
        ಈ ಸಂತೋಷ ಎನ್ನುವುದೆಲ್ಲ ಅಲ್ಪಾಯುಷಿ! ಹೆಚ್ಚು ಸಮಯ ಇರುವುದಿಲ್ಲ. ಸ್ವಚ್ಛಗೊಳಿಸುವ ಕಾರ್ಯಕ್ರಮದ ಎರಡನೇ ಎಪಿಸೋಡ್ ಮರುದಿನ ಆರಂಭವಾಗಿತ್ತು. ಅಂದು ಯಥಾಪ್ರಕಾರ ಮಧ್ಯಾಹ್ನ ಆಫೀಸ್ಗೆ ಹೊರಟು ಹೋಗಿದ್ದೆ. ಹಾಗೆಯೇ ರಾತ್ರಿ ಮರಳಿ ಬಂದಿದ್ದೆ. ಮನೆ ಪರಿಸರ ಸ್ವಚ್ಛಗೊಳಿಸಿದ್ದಕ್ಕೆ ಮನಸ್ಸಿನಲ್ಲೇ ಓನರ್ಗೆ ಥ್ಯಾಂಕ್ಸ್ ಹೇಳಿದ್ದೆ.
ಯಾವತ್ತಿನಂತೆ ಮತ್ತೆ ಬೆಳಕು ಹರಿಯಿತು. ಬೆಳಗ್ಗೆ ಪೇಪರ್ ಓದಲು ಸಿಟೌಟ್ನಲ್ಲಿ ಕೂತದ್ದೂ ಆಯಿತು.
ಪೇಪರಿನ ಎರಡು ಪುಟ ತೆರೆಯಲಿಲ್ಲ. ಯಾವತ್ತೂ ನೊಡುವ ಮೈನಾ ಹಕ್ಕಿಗಳು ಕಾಣಲಿಲ್ಲ. ಬಹುಶಃ ಬ್ಯಸಿ ಇರಬಹುದೇನೋ ಅಂದುಕೊಂಡೆ.
       ಊಹುಂ! ನನ್ನ ಪೇಪರ್ ಓದುವಿಕೆ ಒಂದು ಹಂತ ಮುಗಿದು... ಬೇರೆ ಕೆಲಸಕ್ಕೆ ತೆರಳಿದರೂ ಈ ಹಕ್ಕಿ ಸಂಸಾರದ ಪತ್ತೆಯಿಲ್ಲ! ಸ್ವಲ್ಪ ಸಮಯದ ಬಳಿಕ ಹಾಗೇ ಮಹಡಿಯಿಂದ ಕೆಳಗಿಳಿದು ಯಾಕೋ ತಿರುಗಿ ನೋಡುತ್ತೇನೆ.....
ಅಯ್ಯೋ ರಾಮಾ...!! ಸೀತಾಫಲ ಸಸಿ ಮಂಗಮಾಯ!! ಬುಡದಿಂದ ಕತ್ತರಿಸಿಯಾಗಿದೆ.
ಬಾವಿಕಟ್ಟೆ ಸನಿಹ ಸುಮ್ಮನಿದ್ದ ಸಸಿಗೂ ಈ ಮಾರೀಚರು ಕೈಕೊಟ್ಟರಲ್ಲಾ ಅನಿಸಿತು.ಇದೇ ಕಾರಣ ಆ ದಿನ ಮೈನಾ ಬರಲಿಲ್ಲ. ಗೀಜಗ, ಅಳಿಲು, ಪಾರಿವಾಳ ಯಾವುದರ ಪತ್ತೆಯೂ ಇಲ್ಲ.ಇವರ ಸ್ವಚ್ಛತಾ ಅಭಿಯಾನ ನಾಲ್ಕು ಜೀವದ ಆಹಾರ ಕಸಿದಿತ್ತು.! ಬೇಸಿಗೆ ಕಾಲ ಬೇರೆ... ಎಲ್ಲಿಗೆ ಹೋದಾವು... ಅಂದು ಕೊಳ್ಳುತ್ತಿದ್ದೆ. ಆ ದಿನ ಬೇಸರದಲ್ಲೇ ಆಫೀಸ್ಗೆ ತಯಾರಾಗುತ್ತಿದ್ದೆ. ಸಿಟೌಟ್ ಹೊರಗಡೆ ಹಕ್ಕಿ ಸ್ವರ! ಅರೆ ಬಂದವು ಕೊನೆಗೂ ಅಂದು ಕೊಂಡೆ. ಸಿಟೌಟ್ ಸರಳಿನಲ್ಲಿ ಎರಡಲ್ಲ ಮೂರು ಮೈನಾ ಹಕ್ಕಿಗಳು... ಒಂದೇ ಸಮ ಕಿರುಚಾಟ... ಸೀತಾಫಲ ಸಸಿ ಕಡಿದವರನ್ನು ವಿಚಾರಿಸುವಂತಿತ್ತು. ಎರಡು ಬಾರಿ ಪುರ್ರನೆ ಹಾರಿ ಮತ್ತು ಬಂದು ಕೂತು ಕಿರುಚಾಟ... ಹೀಗೆ ಮುಂದುವರಿದಿತ್ತು ಸ್ವಲ್ಪ ಕಾಲ.. ನಮ್ಮ ಆಹಾರ ಕಸಿದರಲ್ಲಾ ಎನ್ನೋ ಹಾಗೆ...
ನನ್ನ ಮನಸ್ಸಂತೂ ತೀವ್ರ ಆದ್ರವಾಗಿತ್ತು. ಹಾಗೇ ಆ ದಿನವೂ ಕಳೆದಿತ್ತು.
        ಮರುದಿನ ಬೆಳಗ್ಗೆ ಹಕ್ಕಿ ಪಡೆಯ ಪತ್ತೆಯೇ ಇಲ್ಲ. ಯಾಕೋ ಎರಡು ಅಳಿಲು ಬಂದು ನೋಡಿ ಹೋದವು.
ಈ ಘಟನೆ ಬಳಿಕವೂ ಬೆಳಗ್ಗೆ ಸಿಟೌಟಿನಲ್ಲಿ ಕೂರುವ ಅಭ್ಯಾಸವಿದೆ. ಆದರೆ ಬೆಳಗಿನ ಕ್ಷೇಮ ಸಮಾಚಾರದ ಅತಿಥಿಗಳ ಪತ್ತೆ ಇಲ್ಲ... ಮತ್ತೆ ನಾಲ್ಕಾರು ದಿನ ಬಿಟ್ಟು ಯಾವುದೋ ಹಕ್ಕಿಗಳು ಬಂದರೂ ಅವುಗಳ ಕೂಗು ಸೀತಾಫಲ ಸಸಿ ಬಗ್ಗೆ ಕೇಳಿದಂತೆಯೇ ಭಾಸವಾಗುತ್ತಿದೆ. ಅವುಗಳ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ. ಪರಿಸರದ ಜೀವಿಗಳ ಆಹಾರ ಕಸಿದುಕೊಂಡ ಪಾಪಪ್ರಜ್ಞೆ ಕಾಡಲು ಶುರುವಾಗಿದೆ!!

ಶನಿವಾರ, ಜನವರಿ 9, 2010


ಮರೆಯಾದ ಗೋಲಿಸೋಡ!
 
      ಪೆಪ್ಸಿ, ಕೋಕಾಕೋಲ, ಮಿರಿಂಡ ಎಲ್ಲ ಆಷ್ಟಾಗಿ
ಬಾಧಿಸದಿದ್ದ ಕಾಲದಲ್ಲಿ ಹಳ್ಳಿಗಳಲ್ಲೆಲಲ್ಲ  ಬಾಯಾರಿದವರ ಅಮೃತವೆಂಬತಿದ್ದದ್ದು ಗೋಲಿಸೋಡ. ಎಂಟಾಣೆ-ಒಂದು ರೂಪಾಯಿ, ಹೆಚ್ಚೆಂದರೆ ಒಂದೂವರೆ ರೂಗಳಿಗೆಲ್ಲ ಬಾಯಾರಿದವರ ದಾಹ ತಣಿಸುತ್ತಿದ್ದ ಗೋಲಿಸೋಡ ಇಂದು ಮಾಯವಾಗಿದೆ. ಸ್ವಲ್ಪ ಫ್ಲಾಶ್ಬ್ಯಾಕ್ಗಿಳಿದರೆ, ಗೋಲಿಸೋಡ ಕುಡಿಯುವುದರ ಗಮ್ಮತ್ತೇ ಬೇರೆ ಎಂಬಂತಿತ್ತು. ಬಾಟಲಿ ಹೇರಿಕೊಂಡು ಬರುವ ಶಬ್ದ ಕೇಳಿದರೆ ಸಾಕು ಅದು ಗೋಲಿಸೋಡ ಎಂಬುದು ಖಾತರಿ. ಅಂಗಡಿಗೆ ಹೋಗಿ ಗೋಲಿಸೋಡ ಪಡೆದು ಬಾಟಲಿನ ಬಾಯಲ್ಲಿದ್ದ ಗೋಲಿಯನ್ನು ಅದುಮಿದರೆ, 'ಠುಸ್' ಎಂಬ ಶಬ್ದದೊಂದಿಗೆ ಗೋಲಿ ಬಾಟಲಿಯಲ್ಲೇ ಕೆಳಕ್ಕೆ ಜಾರಿ ಕುಡಿಯಲು ರೆಡಿ. ಅದಕಕ್ಕಿಂತಲೂ ಹೆಚ್ಚಿಗೆ, ಗೋಲಿಸೋಡ ಕುಡಿಯುವುದೆಂದರೆ ಅದೊಂದು ಕಲೆ. ಗೋಲಿ ನಿಲ್ಲುವ ಜಾಗವನ್ನು ಸರಿಯಾಗಿ ತಿರುಗಿಸಿ ಹಿಡಿದರೇ ಕುಡಿಯುವವನ ಬಯಿಗೆ ಸೋಡ ಬಿದ್ದೀತು. ಬಾಲರಿಂದ ಮುದುಕರವರೆಗೆ ಬಾಯಾರಿದಾಗಲೆಲ್ಲ ಗೂಡಂಗಡಿಗೆ ಹೋಗಿ ಕೇಳುತ್ತಿದ್ದದು `ಒಂಜಿ ಗೋಲಿಸೋಡ ಕೊರ್ಲೆ' ಎಂದೇ. ಗೋಲಿಸೋಡದಲ್ಲಿಯೂ ಈಗಿನ ತಂಪು ಪಾನೀಯದಂತೆ ಜಿಂಜರ್, ಲೆಮೆನ್, ಖಾಲಿ ಸೋಡ ಎಂಬ ವಿಧಗಳಿದ್ದವು. ಕಾಲಾಂತರದಲ್ಲಿ ತಂಪು ಪಾನೀಯ ಕಂಪೆನಿಗಳ ಭರಾಟೆಯಲ್ಲಿ ಸೋಡ ನೆಲಕ್ಕಚ್ಚಿತು. ಗೋಲಿಸೋಡದಿಂದಲೇ ಬದುಕು ಸಾಗಿಸುತ್ತಿದ್ದವರು ಆ ಕೆಲಸಕ್ಕೇ ತಿಲಾಂಜಲಿ ಇತ್ತರು.
               ಆದಾಗ್ಯೂ, ಗೋಲಿಸೋಡ ಉದ್ದಿಮೆ ಸಂಪೂರ್ಣ ನೆಲಕ್ಕಚ್ಚಿತು ಎಂದು ಹೇಳುವ ಮೊದಲೇ ಅಲ್ಲೊಂದು ಇಲ್ಲೊಂದು ತಯಾರಿಕಾ ಕೇಂದ್ರಗಳು ಇನ್ನೂ ಉಳಕೊಂಡಿವೆ.  ಒಂದು ಗ್ಯಾಸ್ ಸಿಲಿಂಡರ್, ಹಿಡಿಕೆಯಿರುವ ಒಂದು ಸಣ್ಣ ಮೆಷಿನ್ ಇದಷ್ಟೇ ಗೋಲಿಸೋಡ ತಯಾರಿಕೆಯವರ ಅಸ್ತಿ. ಗೋಲಿಸೋಡಕ್ಕೆಂದೇ ತಯಾರಾದ ಗೋಲಿಯಿರುವ ದಪ್ಪ ಬಾಟಲಿಗೆ ನೀರು ತುಂಬಿಸಿ ಮೂರು ಸುತ್ತು ತಿರುಗಿಸಿದರೆ ಗೋಲಿಸೋಡಾ ರೆಡಿಯಾಗಿರುತ್ತದೆ.
ಅಂಥದ್ದೊಂದು ಕೇಂದ್ರ ಮಲ್ಪೆ-ಕೋಡಿಬೆಂಗ್ರೆ ದಾರಿಯ ತೊಟ್ಟಂ ಬಳಿ ಈಗಲೂ ಇದೆ. ಸೈಕಲಲ್ಲಿ ಸೋಡಾ ಬಾಟ್ಲಿ ಹೇರಿ ಹೋಗುತ್ತಿದ್ದವರೊಬ್ಬರನ್ನು ಹಿಡಿದು ನಿಲ್ಲಿಸಿ ಮಾತನಾಡಿದಾಗ, ಗೋಲಿಸೋಡ ತಯಾರಿದಾರರ ಕಥೆ, ಆದಾಯ, ಮಾರುಕಟ್ಟೆ ಇಲ್ಲದಿರುವುದನ್ನೆಲ್ಲಾ ಆವರು ಹೇಳುತ್ತಲೇ ಹೋದರು.
ಅವರ ಹೆಸರು ವಾಸು. ಸೋಡ ವಾಸು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ. ಮೊದಲಿನಿಂದಲೂ ಇದೇ ಉದ್ದಿಮೆ. ಒಬ್ಬರೇ ತಯಾರು ಮಾಡುತ್ತಾರೆ. ತಯಾರಿಸಿದ ಸೋಡ ಸಮೀಪದ ವೈನ್ಶಾಪ್ಗೆ ಮೀಸಲು. ಅದರಿಂದಲೇ ಅವರ ಆದಾಯ.
ಹಾಗಾದರೆ ಕಂಪೆನಿ ಸೋಡ ಅಲ್ಲಿಗೆ ಸರಬರಾಜು ಆಗುವುದಿಲ್ಲವೇ ಎಂಬ ಪ್ರಶ್ನೆಗೆ, `ಪಾಪದಕ್ಲೆಗ್ ಕಮ್ಮಿದಾವೋಡತ್ತೇ!' (ಬಡವರಿಗೆ ಕಡಿಮೆ ಕಾಸಿನದ್ದೇ ಆಗಬೇಕಲ್ಲ!) ಎಂದು ವಾಸು ನಗುತ್ತಲೇ ಉತ್ತರಿಸಿದರು.
ಅಂದಹಾಗೆ ವಾಸು ದಿನಕ್ಕೆ 75ರಿಂದ100 ಬಾಟಲಿ ಗೋಲಿಸೋಡ ತಯಾರಿಸುತ್ತಾರೆ. ಅವರು ವೈನ್ಶಾಪ್ಗೆ ಸೋಡ ಮಾರುವುದು 75ಪೈಸೆಗೆ. ವೈನ್ಶಾಪಲ್ಲಿ ಗೋಲಿಸೋಡ ಉಚಿತವಾಗಿ ಕೊಡುತ್ತಾರೆ. ಅದು ಹೊರತು ವಾಸುವಿಗೆ ಬೇರೆ ಮಾರುಕಟ್ಟೆ ಇಲ್ಲ. ಅವರ ನಾಲ್ಕು ಮಂದಿಯ ಕುಟುಂಬಕ್ಕೆ ಇದೇ ಪ್ರಮುಖ ಆದಾಯ.  ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟಿದ್ದರಲ್ಲೇ ನಾಕು ಕಾಸು ಸಂಪಾದನೆ.
        ಗೋಲಿಸೋಡ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ಗೆ 400 ರೂ ಇದೆ. ಸುಮಾರು 2500 ಬಾಟಲಿ ಸೋಡ ತಯಾರಿಸಬಹುದು ಎಂದು ಹೇಳುತ್ತಾರೆ. ವ್ಯಾಪಾರ ವೃದ್ಧಿ ಬಗ್ಗೆ ವಾಸು ಅವರಿಗೆ ತೀವ್ರ ನಿರಾಸೆ.  ಗೋಲಿಸೋಡ ಈಗ ಯಾರೂ ಕುಡಿಯುವುದಿಲ್ಲ. ಪರಿಣಾಮ ಬೇಡಿಕೆ ಇಲ್ಲ. ತಂಪು ಪಾನೀಯ, ಐಸ್ಕ್ಯಾಂಡಿ, ಲಾಲಿಪಾಪ್ ಒಟ್ಟಾಗಿ ಗೋಲಿಸೋಡವನ್ನು ಹೊಸಕಿ ಹಾಕಿದೆ ಎಂದು ಹೇಳುತ್ತಾರೆ. ಹಿಂದೆಲ್ಲಾ ಜಾತ್ರೆ, ಯಕ್ಷಗಾನ ಬಯಲಾಟ, ಕೋಳಿಆಂಕ,  ನಾಟಕ, ಸ್ಕೂಲ್ ಡೇ, ಇತ್ಯಾದಿ... ಇತ್ಯಾದಿ...  ಸಮಯದಲ್ಲಿ ಗೋಲಿಸೋಡದ್ದೇ ಕಾರುಬಾರು. ಆ ಸಮಯದಲ್ಲಿ ಆದಾಯವೂ ಚೆನ್ನಾಗಿತ್ತು ಎಂದು ಕಳೆದ ಸುಂದರ ದಿನಗಳನ್ನು ವಾಸು ಮೆಲುಕು ಹಾಕುತ್ತಾರೆ.  ಆ ಕಾಲದಲ್ಲಿ ಮೆಷಿನ್ ಖರೀದಿಗೆ ಸಹಕಾರಿ ಬ್ಯಾಂಕ್ಗಳಿಂದ ಧನಸಹಾಯವೂ ದೊರಕುತ್ತಿತ್ತು. ಈಗ ಉದ್ದಿಮೆಯನ್ನು ಜೀವಂತಗೊಳಿಸಲು ಸಾಧ್ಯವೇ ಇಲ್ಲ, ಅದೆಲ್ಲಾ ಕನಸಿನ ಮಾತು ಎಂಬುದು ಅವರ ಅಂಬೋಣ.
          ಅಂಗಡಿಗಳೆಲ್ಲೆಲ್ಲಾ ಅದರದ್ದೇ ಆದ ಸ್ಥಾನ ಪಡೆದಿದ್ದ, ಬಾಯಾರಿಕೆ ತಣಿಸುತ್ತಿದ್ದ ಗೋಲಿಸೋಡಾ ಈಗ ನೇಪಥ್ಯಕ್ಕೆ ಸರಿದಿದೆ. ಅದನ್ನೇ ನಂಬಿ ಬದುಕುತ್ತಿದ್ದ, ಸೋಡಾ ಮೆಷೀನ್ ತಿರುಗಿಸುತ್ತಿದ್ದ ಕೈಗಳೆಲ್ಲ, ಉದ್ಯಮ ನೆಲಕ್ಕಚ್ಚಿದ ಕೂಡಲೇ ಬೇರೆ ಬೇರೆ ಕೆಲಸಗಳಿಗೆ ತೊಡಗಿಕೊಂಡಿವೆ. ಆಧುನಿಕತೆಯ ಭರದಲ್ಲೋ ಅಥವಾ ತಂಪು ಪಾನೀಯ ತಯಾರಿಕಾ ಕಂಪೆನಿಗಳ ಸಾಲು ಸಾಲು ದಾಳಿಗೆ ಗೋಲಿಸೋಡ ಉದ್ಯಮ ನಶಿಸಿ ಹೋಗಿದೆ. ಹಾಗಾಗಿ ಗೋಲಿಸೋಡದ ಬಗ್ಗೆ ಚಿತ್ರದಲ್ಲೋ ಅಥವಾ ಹಳಬರ ಬಾಯಲ್ಲೋ ಕೇಳಬೇಕಾದ ಪರಿಸ್ಥಿತಿ ಹಾಗೆ..... ನಿಧಾನಕ್ಕೆ ಬರುತ್ತಿದೆ !