Pages

ಗುರುವಾರ, ಅಕ್ಟೋಬರ್ 25, 2012


ನಾನು ಬೆತ್ತಲಾಗೇ ಇರಬೇಕು!

ರಸ್ತೆಯಲ್ಲಿ ನಡೆಯುತ್ತಿದ್ದರೆ, ಆ ಹೆಣ್ಣು ಮಕ್ಕಳೆಲ್ಲ ಅಚ್ಚರಿಯಿಂದ ದೃಷ್ಟಿಸಿ, ಕಿಸಕ್ಕನೆ ನಕ್ಕು ಕೆಲವರು ಸಂದಿಯೊಳಗೆ, ಮತ್ತೆ ಕೆಲವರು ಮನೆ ಬಾಗಿಲ ಹಿಂದೆ ಅಡಗಿಕೊಂಡರಲ್ಲ.. ಏನಾಗಿದೆ ಇವರಿಗೆ, ಮನುಷ್ಯನನ್ನು ನೋಡೇ ಇಲ್ಲವೇ. ನಾನೂ ಎಲ್ಲರಂತೆಯೇ ಇದ್ದೇನೆ. ಎರಡು ಕಾಲು ಕೈ, ಒಂದು ತಲೆ ಎರಡು ಕಣ್ಣುಗಳು! ಆದರೂ ಜನರಿಗೆ ನನ್ನ ಬಗ್ಗೆ ತಾತ್ಸಾರ. ಹತ್ತಿರ ಬಂದರೆ ಹಚೇ.. ಅಂತಾ ಓಡಿಸುತ್ತಾರೆ. ಬೆತ್ತಲೆ ಮನುಷ್ಯ ಎಂದು ಬಟ್ಟೆ ತೊಟ್ಟ ಮಹಾನುಭಾವರು ಅಣಕಿಸುತ್ತಾರೆ. ಬಟ್ಟೆ ತೊಡದ ಮಾತ್ರಕ್ಕೆ ನಾನು ಹುಚ್ಚನಾದೆನೇ..? ಬಟ್ಟೆ ತೊಟ್ಟವರಲ್ಲೇ ಎಷ್ಟು ಮಂದಿ ಹುಚ್ಚರಿಲ್ಲ..? ಇದೊಂದೇ ಕಾರಣಕ್ಕೆ ನನ್ನ ದೂರ ಮಾಡಬಹುದಾ..? ಒಪ್ಪತ್ತಿನ ಊಟಕ್ಕಿಲ್ಲವೆಂದು ನಾಲ್ಕಾರು ಮೈಲಿ ನಡೆದು ಅದೊಂದು ದೊಡ್ಡ ತುಳಸಿಕಟ್ಟೆ ಇದ್ದ ಮನೆಯಲ್ಲಿ ಊಟ ಕೇಳಿದರೆ ಕೋಲು ಹಿಡಿದು ಓಡಿಸಿದರಲ್ಲ.. ಮೊನ್ನೆ ನಾಯಿ ಕಚ್ಚಿ ಆದ ಕಾಲು ನೋವಿನಲ್ಲಿ ಬೆತ್ತದ ಹೆದರಿಕೆಗೆ ಅಂತೂ ಓಡಿದೆ. ಇತ್ಲಾಗಿ ನಾಯಿಗಳಿಗೂ ನನ್ನ ಕಂಡರಾಗುವುದಿಲ್ಲ. ಅವುಗಳಿಗೂ ಈ ಹಾಳು ಮನುಷ್ಯರಂತೆ ಯಾರೋ ಮನಸ್ಸು ತಿರುಗಿದ್ದಿರಬೇಕು. ಕಂಡರೆ ಒಂದೇ ಸಮನೆ ಬೊಗಳುತ್ತವೆ. ಕೆಲವು ಕಚ್ಚಲೂ ಬರುತ್ತವೆ. ಶನಿ ಮುಂಡೇದು ಮೊನ್ನೆ ಕಾಲಿಗೆ ಕಚ್ಚೇ ಬಿಟ್ಟಿತ್ತು. ಅದೇ ನೋವಿನಲ್ಲಿ ಓಡಿದೆ. ಆ ದಿನ ಊಟವೇ ಇಲ್ಲ. ಊಟ ಕೇಳಿದರೆ ಎಲ್ಲರೂ ಓಡಿಸುವವರೇ ಆಗಿದ್ದಾರೆ. ದೇವಸ್ಥಾನಕ್ಕಾದರೂ ಹೋಗೋಣ ಎಂದರೆ, ಮೆಟ್ಟಿಲು ಹತ್ತಲೂ ಬಿಡುವುದಿಲ್ಲ. ಅದೇನೋ ಬಿಳಿ ಬಟ್ಟೆ ಉಟ್ಟಿರಬೇಕಂತೆ. ಹಾಗೂ ಊಟವಿಲ್ಲದೇ, ಕೊನೆಗೆ ಕಸದ ತೊಟ್ಟಿಗೆ ಎಸೆದ ನಂದಿನ ಹಾಲಿನ ಪ್ಯಾಕೇಟಿನಲ್ಲಿ ಉಳಿದ ಎರಡು ತೊಟ್ಟು ಹಾಲು ಕುಡಿದು ರಾಜನಂತೆ ಬೀಗಿದೆ. ಊಟ ಕೇಳಿದರೆ ಕೊಡಲಿಲ್ಲ ಸಾಯಲಿ. ಹಾಲಾದರೂ ಸಿಕ್ಕಿತಲ್ಲ!
ನಾನು ಹುಟ್ಟಿದ್ದು ಎಲ್ಲಿ ಏನು ಎತ್ತ ಎಂಬುದೇ ಗೊತ್ತಿಲ್ಲ. ಜಗತ್ತು ಹೀಗೆ ಪರಿಚಿತವಾಯಿತು. ಒಂದು ಊರು, ಒಂದು ಪೇಟೆ, ಕರಿ ರಸ್ತೆ, ಮರ, ಪ್ರಾಣಿಗಳು ಅವೆಲ್ಲದರ ಮಧ್ಯೆ ನನ್ನ ನೋಡಿದರೆ, ಹಲ್ಲು ಕಿಸಿಯುವ, ಓಡಿಸುವ, ಗದರಿಸುವ ಮನುಷ್ಯರು. ಮೊನ್ನೆ ಅದೇನೋ ಊರು. ನಡೆದದ್ದೊಂದೇ ಗೊತ್ತು. ಒಂದು ರಾತ್ರಿ ಅದಾವುದೋ ಬಸ್ ನಿಲ್ಲುವ ಜಾಗದಲ್ಲಿ ಮಲಗಿ ಬೆಳಗಾಯಿತು. ಹೊಟ್ಟೆ ಚುರುಗುಟ್ಟಿತು. ಎಲ್ಲಾದರೂ ಕೇಳೋಣ ಎಂದರೆ ಮತ್ತದೇ ಗದರಿಕೆ. ಹತ್ತಿರದ ಸಂದಿಯ ಕೊಳವೆಯಲ್ಲಿ ನೀರು ಬರುತ್ತಿದ್ದುದೇ ಆ ದಿನದ ಭರ್ಜರಿ ಭೋಜನ. ಬಿಸಿಲು ನಡು ನೆತ್ತಿಗೇರಿತ್ತು. ಅಷ್ಟಕ್ಕೇ ಬಿಳಿ ವ್ಯಾನೊಂದು ಹತ್ತಿರ ಬಂದು ನಾಲ್ಕಾರು ಜನ ಎತ್ತಿ, ಆ ವಾಹನದೊಳಕ್ಕೆ ನನ್ನ ಬೀಸಿ ಒಗೆದರು. ಬಿಟ್ಟು ಬಿಡಿ, ಯಾರಿಗೂ ಏನೂ ಮಾಡಲ್ಲ ನಾನು ಎಂದು ಹೇಳಿದರೂ ಕೇಳಲಿಲ್ಲ. ಒಬ್ಬಾತ ಗದರಿಸಿದ, ಮತ್ತೊಬ್ಬ ದುರುಗುಟ್ಟಿದ. ಇನ್ನೊಬ್ಬ ಏನೂ ಮಾಡಲಿಲ್ಲ, ಆದರೆ ಕೊನೆಗೆ ಕಪಾಳಕ್ಕೆ ಬಾರಿಸಿದ. ಅದೊಂದು ಮಾತ್ರ ನೆನಪಿತ್ತು. ಕಣ್ಣು ಬಿಟ್ಟಾಗ ಅದೆಲ್ಲೋ ತಂದು ಕೂರಿಸಿದ್ದರು. ಒಬ್ಬಾತ ದರದರನೆ ಕೈ ಹಿಡಿದೆಳೆದು ಬೇಡ ಬೇಡವೆಂದರೂ ಹೊರಗೆ ಕರೆದೊಯ್ದು.. ನಲ್ಲಿ ನೀರು ಬರುವಲ್ಲಿ, ತಲೆಗೆ ಚೊಂಬುಗಟ್ಟಲೆ ನೀರು ಹಾಕಿದ. ಸಾಬೂನು ಹಾಕಿ ತೊಳೆದ. ಕೊನೆಗೆ ಕೋಣೆಗೆ ಕರೆತಂದು ಬಟ್ಟೆ ಹಾಕಿಸಿದರು. ನನಗೆ ಅಸಾಧ್ಯ ಎನ್ನುವದೆಲ್ಲವನ್ನೂ ಮಾಡಿಸಿದರು. ಹಾಗೆಯೇ ನಾಲ್ಕಾರು ದಿನ ಅಲ್ಲೇ ಇದ್ದೆ. ಸ್ವಾತಂತ್ರ್ಯವಿಲ್ಲ ದಿನವಿಡೀ ಬಂಧನ. ಎಲ್ಲೂ ಹೋಗಲು ಬಿಡುವುದಿಲ್ಲ, ಕೊಟ್ಟದ್ದನ್ನು ತಿನ್ನಬೇಕು. ಮೊದಲು ತಂಗಳು ತಿನ್ನುತ್ತಿದ್ದೆನಾದರೂ ಅದಕ್ಕೂ ಒಂದು ವಿಶೇಷ ರುಚಿ ಇತ್ತು. ಆದರೆ ಅವರು ಕೊಟ್ಟದ್ದರಲ್ಲಿ ಯಾವುದೂ ಇಲ್ಲ. ದನಕ್ಕೆ ಕೊಟ್ಟಂತೆ ಕೊಡುವುದು ತಿನ್ನು ತಿನ್ನು ಎಂದು ಹೇಳುವುದು. ಅಂತೂ ಅಲ್ಲಿನ ಕಷ್ಟದ ದಿನಗಳಿಂದ ನನಗೆ ಹೊರಗೆ ಹೋಗಬೇಕೆನಿಸಿತ್ತು. ತೋಟಕ್ಕೆ ನೀರು ಹಾಕುವ ಕೆಲಸಕ್ಕೆ ನನ್ನನ್ನು ನೇಮಿಸಿದ್ದರಿಂದ ನಾನು ಅಲ್ಲಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು. ಅದರೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಕಾರಣ ನನ್ನ ಬಟ್ಟೆ. ಎರಡೂ ಕಾಲುಗಳಿಗೆ ಹಾಕುವ ಉದ್ದದ ಬಟ್ಟೆ ಮೈಮೇಲೊಂದು ಬಟ್ಟೆ ನನಗೆ ತೊಡಿಸಿದರು. ಅದನ್ನು ಹಾಕಿ ನಡೆಯುತ್ತಿದ್ದರೆ, ಕಾಲು ಅದೆಲ್ಲೋ ಸಿಕ್ಕಿ ಹಾಕಿಕೊಂಡ ಅನುಭವ. ನಡೆಯಲು, ಓಡಲು ಸಾಧ್ಯವಿಲ್ಲ. ಬಹಿದರ್ೆಸೆಗೆ ಇದನ್ನು ಹಾಕಿ ಕುಳಿತುಕೊಳ್ಳುವುದು ಹೇಗೆ ಎಂದು ನನಗೆ ಕಂಡಿತ್ತು. ಏನೇ ಆಗಲಿ ಈ ನರಕ ಬೇಡ ಎಂದು ಓಡಿದೆ.. ಮತ್ತಷ್ಟು ಓಡಿದೆ. ಕೊನೆಗೆ ಅದೆಲ್ಲೂ ಮುಟ್ಟಿದೆ. ಮತ್ತೆ ಅದೇ ಪೇಟೆ, ಕರಿ ರಸ್ತೆಗಳಲ್ಲಿ ಹೆಜ್ಜೆ. ಆದರೆ ಮೈಮೇಲಿನ ಬಟ್ಟೆ ಕಿರಿಕಿರಿ ಅನಿಸಿತ್ತು. ಕೊನೆಗೂ ಅದನ್ನು ಬೀಸಿ ಒಗೆದೆ. ಕೈಕಾಲುಗಳಿಗೆ ಮತ್ತೆ ಜೀವ ಬಂದಂತಾಯಿತು. ಗಾಳಿ ಮೈ ಸೋಕಿತು. ಮನಸ್ಸೂ, ದೇಹ ಎರಡೂ ನಿರುಮ್ಮಳ, ಸಂತೋಷ ಪಟ್ಟವು.
ಅದಾಗಿ ನಡೆದೆ. ಎಲ್ಲಿಗೆ ಏನು ಎತ್ತ, ಯಾಕಾಗಿ.. ಎಷ್ಟು ಹೊತ್ತು ಏನೂ ಗೊತ್ತಿಲ್ಲ.. ಬಿಸಿಲು ನೆತ್ತಿಗೇರುತ್ತಿದ್ದಂತೆ ಬಾಯಾರಿಕೆ, ಗದ್ದೆ, ಹಳ್ಳಗಳಲ್ಲಿ ಹರಿಯುತ್ತಿದ್ದ ನೀರೇ ದಾಹ ನೀಗಿಸಿದವು. ದಾರಿ ಗುಂಟ ಸಿಗುತ್ತಿದ್ದ ಸಣ್ಣ ಪೇಟೆ, ಅಂಗಡಿ ಎದುರು ಕೈಯೊಡ್ಡಿದರೆ ಮೂರು ಹೊತ್ತಿಗೆ ತೊಂದರೆಯಾಗುತ್ತಿರಲಿಲ್ಲ. ಹಾಗೇ ನಡೆಯುತ್ತಾ ನಡೆಯುತ್ತಾ.. ದಾರಿ ಬದಿಯ ಎಲ್ಲವೂ ನನ್ನಂತೆಯೇ ಕಂಡಿದ್ದವು. ನನಗಂತೂ ಖುಷಿಯಾಗಿತ್ತು. ಬೋಳು ಮರ, ಗದ್ದೆ, ಮೇಯುತ್ತಿದ್ದ ದನ, ಬೀಡಾಡಿ ನಾಯಿಗಳು.. ಯಾವುದಕ್ಕೂ ಬಟ್ಟೆ ಇಲ್ಲ. ಸರ್ವತಂತ್ರ ಸ್ವತಂತ್ರ ಎಂದರೆ ಇದೇ ಅಲ್ಲವೇ? ಬೇಕೆಂದಲ್ಲಿ ಬೇಕಾದಂತೆ, ತಮ್ಮಿಷ್ಟಕ್ಕೆ.. ಮನಸ್ಸಿಗೆ ಬೇಕುಬೇಕಾದಂತೆ..
ಕೊನೆಗೊಂದು ದಿನ ಅದೊಂದು ದೊಡ್ಡ ಪೇಟೆ ಎಂಬಂತಿತ್ತು. ಕಾರಣ ಬಟ್ಟೆ ತೊಟ್ಟವರೇ ಹಲವರಿದ್ದರು. ಕೆಲವರು ದುರುಗುಟ್ಟುತ್ತಿದ್ದರು. ಇನ್ನು ಕೆಲವರಿಗೆ ನನ್ನ ಕಂಡರಾಗುತ್ತಿರಲಿಲ್ಲ. ಎಲ್ಲಿಗೆ ಯಾಕೆ ಎಂಬ ಪ್ರಶ್ನೆ ಇಲ್ಲದ್ದರಿಂದ ನಾನು ಅಲ್ಲಿಗೆ ಹೋದೆ. ಮನಸ್ಸಿಗೆ ತೋಚಿದಂತೆ ತಿರುಗಾಡಿದೆ. ನಾಲ್ಕಾರು ದಿನ ಆ ಸ್ಮಶಾನದ ಮೂಲೆಯಲ್ಲಿ ನೆಮ್ಮದಿಯಾಗಿ ಮಲಗಿದೆ. ಸಂದು ಗೊಂದಿಗಳಲ್ಲಿ ಮನೆಗಳ ರಾಶಿಯ ನಡುವೆ ತುತ್ತಿಗಾಗಿ ಅಲೆದೆ. ಹಸಿವು ಎನ್ನುವುದೊಂದು ಇಲ್ಲದಿದ್ದರೆ ಯಾರ ಹಂಗೂ ನನಗೆ ಬೇಡವಿತ್ತು. ಕೆಲ ದಿನ ಆ ಹೆಣ್ಮಕ್ಕಳು ಬಿಸಿನೀರು ಚೆಲ್ಲಿದರು, ಬೆತ್ತ, ಕೈಗೆ ಸಿಕ್ಕಿದ್ದು ಹಿಡಿದು ಓಡಿಸಿದರು. ಮಕ್ಕಳು ಕಲ್ಲು ಬೀಸಿದರು. ಹಣೆಗೆ ತಾಗಿ ಕೆಂಪು ನೀರು ಬಂತು. ಈ ಊರೇ ಬೇಡ ಎಂದು ಹೊರಹೋಗಲು ನೋಡಿದೆ. ಎಷ್ಟು ಹೋದರೂ ಪೇಟೆ, ಜನಜಂಗುಳಿ ಮುಗಿಯುತ್ತಿರಲಿಲ್ಲ. ಮಾಯಾಲೋಕ್ಕೆ ಹೊಕ್ಕ ಅನುಭವ. ಹೊರ ಬರುವುದು ಹೇಗೆ ಎಂದು ಗೊತ್ತಿಲ್ಲ. ದಿನ ಕಳೆಯುತ್ತಿದ್ದಂತೆ ಹಸಿವಿಗೂ ಹೆಚ್ಚಿಗೆ ಪೆಟ್ಟಿನಿಂದ ಪಾರಾಗುವುದೇ ಕಷ್ಟವಾಯಿತು. ಕೇವಲ ಬಟ್ಟೆ ತೊಡದ ಮಾತ್ರಕ್ಕೆ ನನ್ನ ಜೀವಂತ ಉಳಿಸುವುದಿಲ್ಲ ಅನ್ನೋದು ಖಾತರಿಯಾಯಿತು. ಸದ್ಯ ಮರದ ತೊಗಟೆ ಹುಲ್ಲು ತಿಂದು ಹೊಟ್ಟೆ ತುಂಬಿಸಿ ಕೂತಿದ್ದೇನೆ. ಅಷ್ಟಾದರೆ ಸಾಲದು ಮೈ ಎಲ್ಲಾ ಕಣ್ಣಾಗಿರಬೇಕು, ಯಾವ ಹೊತ್ತಿನಲ್ಲಿ ಕಲ್ಲು ಬಂದು ಬೀಳುತ್ತದೆ ಗೊತ್ತಿಲ್ಲ.. ರಾತ್ರಿಯಾದರೆ ಸಾಕು. ನಿರುಮ್ಮಳ, ಶಾಂತವಾಗಿರಬಹುದು. ಬೆಳಗಾದರೆ ಕಷ್ಟ. ಹಾಗಂತ ಬಟ್ಟೆ ಖಂಡಿತಾ ಹಾಕುವುದಿಲ್ಲ. ಹಗಲುಗಳಿಗೆ ಬೇಕಾಗಿ ನನ್ನ ಸಂತೋಷ ಯಾಕೆ ಕಳೆಯಬೇಕು.. ಇಲ್ಲ.. ಇಲ್ಲ.. ನಾನು ಬೆತ್ತಲಾಗಿಯೇ ಇರಬೇಕು..!

( ಬೆಳಗಿನ ವಾಕಿಂಗ್ ವೇಳೆ ಕಂಡ ಬೆತ್ತಲೆ ಮನುಷ್ಯ, ಕಸದ ತೊಟ್ಟಿಯೊಳಗಿದ್ದ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿದ್ದ ತೊಟ್ಟು ಹಾಲಿಗೆ ಬಾಯೊಡ್ಡಿದ ಕ್ಷಣಗಳು ಹಲವು ಬಾರಿ ಮನಸ್ಸಿಗೆ ಕಾಡಿದಾಗ ಹುಟ್ಟಿಕೊಂಡ ಬರಹ)

ಗುರುವಾರ, ಆಗಸ್ಟ್ 2, 2012


 ಒಂದು ರಾತ್ರಿಯ ವೈರಾಗ್ಯ!

ಮಧ್ಯರಾತ್ರಿ ಒಂದು ಗಂಟೆ. ಯಾಕೋ ನಿದ್ದೆ ಹತ್ತಿರಲಿಲ್ಲ. ಕೊನೆಗೆದ್ದು ಹಾಗೆ ತಡಕಾಡಿ ಮೊಬೈಲ್ನಲ್ಲಿದ್ದ ಲೈಟ್ ಆನ್ ಮಾಡಿ ಆತ ಉಚ್ಚೆ ಹೊಯ್ದು ಬಂದ. ಹೊರಗಡೆ ಜಿಟಿ ಜಿಟಿ ಮಳೆ. ಜೋರಾಗಿ ಏನೂ ಬಂದಿರಲಿಲ್ಲ. ಆದರೂ ಕರೆಂಟು ಯಾಕೋ ಕೈಕೊಟ್ಟಿತ್ತು. ಜಗ್ನಲ್ಲಿದ್ದ ನೀರನ್ನು ಗ್ಲಾಸ್ಗೆ ಬಗ್ಗಿಸಿಕೊಂಡ. ಹಾಗೆ ತಿರುಗಿ ಗೋಡೆ ನೋಡಿದ. ಬೆಳಗಾಗಲು ಇನ್ನೂ ಆರು ಗಂಟೆ ಇದೆ. ಹೇಗಪ್ಪಾ ಸಮಯ ಕಳೆಯುವುದು ಎಂಬುದೇ ಆತನ ಚಿಂತೆ.


ಮನಸ್ಸಿನಲ್ಲಿ ಆಲೋಚನೆ ತಿರುಗತೊಡಗಿತು. ನಾಳೆ ಬೆಳಗಾದರೆ ಒಂದು ವಾಕಿಂಗ್, ಚಳಿ ಇದ್ದರೆ, ಜಾಕೆಟ್ ಹಾಕಿಕೊಂಡರಾಯಿತು. ಮತ್ತೊಂದು ಕಾಫಿ ತಿಂಡಿ. ನಂತರ ಕಂಪ್ಯೂಟರ್ ಎದುರು ಕೂತು ಫೇಸ್ಬುಕ್ ನೋಡಿದರೆ ಮಧ್ಯಾಹ್ನ. ಮಧ್ಯಾಹ್ನ ಮೇಲೆ ಆಫೀಸು. ಅದೇ ಕ್ಯಾಬು, ಅದೇ ಟ್ರಾಫಿಕ್. ಅಲ್ಲಿಗೆ ದಿನದ ಕಥೆ ಮುಗೀತು. ಹಾಗಂತ ಆಲೋಚನೆ ಮಾಡಿಕೊಂಡೇ ಹಾಸಿಗೆಗೆ ಉರುಳಿದ. ತಲೆಯಲ್ಲಿ ನೂರು ವಿಷಯ ಫ್ಯಾನು ತಿರುಗಿದಂತೆ ತಿರುಗುತ್ತಿದ್ದರಿಂದ ಹಾಸಿಗೆಯಲ್ಲಿ ಮುಳ್ಳು ಚುಚ್ಚಿದಂತಾಗುತ್ತಿತ್ತು. ಇನ್ನೂ ಇಪ್ಪತ್ತಾರು ದಿನ ಕಳೆದಿಲ್ಲ, ಅಷ್ಟಕ್ಕೆ ಎಷ್ಟು ತಲೆನೋವುಗಳು ಅಂದುಕೊಂಡ.
ಊರಿನಲ್ಲಿ ಈ ಬಾರಿ ಮಳೆ ಸುರಿಯಲಿಲ್ಲ. ವ್ಯವಸಾಯ ಮಾಡೇ ಇಲ್ಲ ಎಂದು ಅಮ್ಮ ಫೋನು ಮಾಡಿದ್ದಾಗ ಹೇಳಿದ್ದು ನೆನಪಾಯಿತು. ಮಠದ ಸ್ವಾಮೀಜಿಗಳೆಲ್ಲ ಈ ಬಾರಿ ಚಾತುರ್ಮಾಸ್ಯಕ್ಕೆ ಪೇಟೆಗೇ ಹೋಗಿದ್ದಾರಂತೆ. ಬಹುಶಃ ಜೋಬು ಖಾಲಿಯಾಗಿರಬೇಕು. ಹಳ್ಳಿಯಲ್ಲಿ ಮಳೆ-ಬೆಳೆ ಇಲ್ಲದಿದ್ದರಿಂದ ಭಿಕ್ಷೆ ಹಾಕುವವರು ಯಾರೂ ಇಲ್ಲವೇನೋ! ಇಲ್ಲಿ ಬಂದರೆ ಪೇಟೆಯವರು ಭಯಭಕ್ತಿಯಿಂದ ಪೂಜೆಗೀಜೆ ಅಂತಾ ತಾವು ಮಾಡಿದ ಪಾಪಕರ್ಮ ಕಳೆಯಲು ಸಾವಿರದ ಗರಿಗರಿ ನೋಟು ಬಿಚ್ಚುತ್ತಾರೆ. ಅಲ್ಲಿಗೆ ಒಂದು ವರ್ಷ ಮಠದ ಸ್ವಾಮಿಗಳ ಇನ್ನೊವಾ ಕಾರಿಗೆ ವರ್ಷಕ್ಕಾಗುವಷ್ಟು ಡೀಸೆಲ್ ಭರ್ತಿಯಾಗಬಹುದು! ಅಂದುಕೊಂಡ.
ಕಳೆದ ಬಾರಿ ಮನೆಗೆ ಹೋಗಿದ್ದಾಗ ಮನೆ ಎದುರಿನ ತೆಂಗಿನ ಮರದಲ್ಲಿ ಕಾಯಿಗಳೇ ಇರಲಿಲ್ಲ. ಹೂವಿನ ಗಿಡಗಳಲ್ಲಿ ಹೂವಿರಲಿಲ್ಲ. ಕುಂಬಳ ಬಳ್ಳಿಯಲ್ಲಿ ಒಂದು ಕುಂಬಳವೂ ಇರಲಿಲ್ಲ. ದನವೂ ಗೊಡ್ಡಾಗಿತ್ತು. ಮನೆ ನಾಯಿ ಬೊಗಳುವ ಶಬ್ದವೂ ಕಡಿಮೆಯಾದಂತೆನಿಸಿತ್ತು. ನನಗೂ ಆದ ಹಾಗೆ ಪ್ರಕೃತಿಗೇ ವೈರಾಗ್ಯ ಬಂತಾ.. ಪ್ರಶ್ನಿಸಿಕೊಂಡ.
ಇಲ್ಲ ಹಾಗಾಗಲು ಸಾಧ್ಯವೇ ಇಲ್ಲ. ಪ್ರಕೃತಿಗೆ ವೈರಾಗ್ಯ ಎಂಬುದಿದೆಯೇ? ಕಳೆದ ವರ್ಷ ಊರಿಗೆ ಹೋಗಿದ್ದಾಗ ಎಲ್ಲವೂ ಚೆನ್ನಾಗಿಯೇ ಇತ್ತಲ್ಲ. ಹಲಸಿನಕಾಯಿ ಬೆಳೆದಿದೆ, ನೀನು ಬಂದಾಗ ದೋಸೆ ಮಾಡುವುದು ಎಂದು ಅಮ್ಮ ಕಷ್ಟಪಟ್ಟು ಮುನ್ನಾದಿನವೇ ಹಿಟ್ಟು ಕಲೆಸಿ ಮರುದಿನ ದೋಸೆ ಹುಯ್ದುಕೊಟ್ಟಿದ್ದಳಲ್ಲ ಈ ಬಾರಿ ಅವುಗಳಿಗೇನಾಯಿತು? ಮಳೆಯೂ ಸರಿ ಬರಲಿಲ್ಲ ಎಂದು ಕೇಳಿದ್ದುಂಟು. ಒಂಚೂರು ಮಳೆ ಕಡಿಮೆಯಾದರೆ ಹೀಗಾಗುತ್ತಾ..? ಗೊತ್ತಿಲ್ಲ.. ಇಂಟರ್ನೆಟ್ನಲ್ಲಿ ಹುಡುಕಬೇಕು ಅಂದುಕೊಂಡ..
ಹಾಸಿಗೆಯಲ್ಲಿ ಹಾಗೆ ಕಾಲು ಚಾಚಿ ದಿಂಬಿಗೆ ತಲೆಯಾನಿಸುತ್ತಿದ್ದಂತೆ, ಒಂದು ಬಾರಿ ನಿದ್ದೆ ಬರಬಾರದಾ ಅಂದುಕೊಂಡ. ಹೀಗೆ ನಿದ್ದೆಯಿಲ್ಲದೆ ದಿನಗಳು ಎಷ್ಟಾಯಿತು ಎಂದೂ ಪ್ರಶ್ನಿಸಿಕೊಂಡ. ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ ಬಳಿಕ ಒಂದರ್ಥದಲ್ಲಿ ನಿದ್ದೆಯೇ ಇಲ್ಲ. ಎಲ್ಲರಿಗೂ ಹೀಗೆಯಾ ಆಗಿರಬಹುದೇ? ಇದೇ ಕಾರಣಕ್ಕೆ, ಐಟಿ ಬಿಟಿಯ ಹುಡುಗರೆಲ್ಲ. ಮದಿರೆ, ಡ್ರಗ್ಸ್ ರುಚಿ ಹತ್ತಿಸಿ ದಾಸರಾಗುತ್ತಿರುವ ವಿಷಯವೆಲ್ಲ ಕಣ್ಣೆದುರಿಗೆ ಬಂತು. ವಾರದ 5 ದಿನ ಕತ್ತೆಯಂತೆ, ಹೇಳುವವರೂ ಕೇಳುವವರೂ ಇಲ್ಲದಂತೆ ದುಡಿದು, ಶುಕ್ರವಾರದ ಸಂಜೆಯಿಂದ ಭಾನುವಾರ ಪರ್ಯಂತ ಮಜಾ ಉಡಾಯಿಸುವ ಜೀವನ. ಅದಲ್ಲೇನು ಸುಖವಿದೆ. ಬರೀ ಹುಚ್ಚುಗಳು ಮಾತ್ರ. 2 ಟ್ರಕ್ಕಿಂಗು, ಮನೆಯಲ್ಲಿರುವ ನಾಡ ಬಂದೂಕಿನಷ್ಟುದ್ದ ಕ್ಯಾಮರಾ ಹೆಗಲಿಗೇರಿಸಿ ಕೆಲಸಕ್ಕೆ ಬಾರದ ಫೋಟೋ ತೆಗೆದು ಮೀಸೆ ತಿರುವುತ್ತಾರೆ. ಹೋದಲ್ಲಿ ಸಂಭ್ರಮ ಪಟ್ಟರೆ ಸೋಮವಾರದಿಂದ ಅತ್ತೆ ಮನೆಯಲ್ಲಿರುವ ಹೆಣ್ಮಗಳಂತೆ ಆಡುತ್ತಾರೆ. ಇರಲಿ ಅವರಿಗೆ ವಾರಕ್ಕೆರಡು ಬಾರಿಯಾದರೂ ಸಂಭ್ರಮವಿದೆ. ಆದರೆ ಪೇಟೆಯ ಕೊಂಪೆ ಕೊಂಪೆಗಳಲ್ಲಿ ತಿರುಗಾಡಿ ಚಪ್ಪಲಿ ಸವೆಸುವ ನನಗೆ ಅದೂ ಇಲ್ಲ. ತಿಂಗಳ ಕೊನೆಗೆ ಸಾಲವಂತೂ ಸಾವಿರಗಟ್ಟಲೆ ಏರುತ್ತಲೇ ಇದೆ. ರೂಂ ಮೇಟ್, ಶಿವಾಜಿನಗರದ ಕಾಕಾ ಬಳಿ ನನಗಾಗಿ ದುಡ್ಡು ಇಸಕೊಂಡಿದ್ದನ್ನು ಕೊಟ್ಟೇ ಇಲ್ಲ. ಅದು ಹಾಳಾಗಿ ಹೋಗಲಿ.. ಊರಿಡೀ ಸಾಲವಾಗಿ ಬಡ್ಡಿಯೂ ಕೊಡಲಾಗದ ಪರಿಸ್ಥಿತಿಗೆ ಬಂದು ಮುಟ್ಟಿದೆ.

ಇವೆಲ್ಲದರ ಮಧ್ಯೆ ಮನೆಯಲ್ಲಿ ನಿನಗೆ ಮದುವೆಯಾಗಬಾರದಾ ಎಂದು ಕೇಳುತ್ತಾರೆ. ಥತ್ತೇರಿಕೆ. ಅವರಿಗೇನು ಗೊತ್ತು. ನನ್ನ ಪಡಬಾರದ ಪಾಡು. ಒಪ್ಪತ್ತಿಗೆ ದುಡ್ಡಿಲ್ಲ ಎಂಬ ಕಾರಣಕ್ಕೆ ಮೊದ ಮೊದಲು ಎರಡು ಬನ್ನು ಟೀಗಳಲ್ಲಿ ದಿನ ಕಳೆದದ್ದಿದೆ. ಆಗೆಲ್ಲ ನಾನೂ ಒಂದು ದಿನ ಸ್ವಲ್ಪ ಚೆನ್ನಾಗಿರೋ ಬಟ್ಟೆ ಹಾಕಿ, ರಿಬಾಕ್ ಶೂನಲ್ಲಿ ನೆಲವನ್ನು ಕುಟ್ಟಿ ನಡೆಯಬೇಕು ಅಂದುಕೊಂಡಿದ್ದೆ. ಸದ್ಯ ಬಾಟಾ ಶೂ ತೆಗೆಯುವಲ್ಲಿವರೆಗೆ ಮುಟ್ಟಿದೆ. ರಿಬಾಕ್ ಇನ್ನೂ ಕನಸಾಗಿದೆ. ಹೀಗೆ ಮುಗಿಯದ ಆಸೆಗಳಲ್ಲೇ ನಾನು ಸತ್ತರೆ, ಪ್ರೇತವಾಗಿ ಎಲ್ಲ ಅಂಗಡಿಯೂ ಹೊಕ್ಕು ಹೊರಬಹುದೇನೋ.. ಆದರೆ ಎಲ್ಲರಿಗೂ ಕಾಣುವಂತೆ ಇರಲಾಗುವುದಿಲ್ಲ. ಹೀಗೆ ಮಣಗಟ್ಟಲೆ ಆಸೆಗಳನ್ನು ಸಂಗ್ರಹಿಸಿ ನಾನೇನು ಮಾಡಲಿ. ಅದಕ್ಕಿಂತ ಏನೂ ಬೇಡ ಎನ್ನುವುದು ಒಳ್ಳೆಯದಲ್ಲವೇ.? ಅಷ್ಟೊಂದು ಸಂಪತ್ತಿದ್ದರೂ ಎಲ್ಲವನ್ನೂ ತ್ಯಜಿಸಿ ಸಿದ್ಧಾರ್ಥ ಬುದ್ಧನಾದದ್ದು ಚಿಲ್ಲರೆ ವಿಷಯವಲ್ಲ. ಹಾಗೆ ಮಧ್ಯರಾತ್ರಿ ಈಗಲೇ ಎದ್ದು ಹೋಗೋಣ, ಎಂದು ಅನಿಸುತ್ತದೆ. ಆದರೆ ಹೋಗುವುದೆಲ್ಲಿಗೆ? ಬೆಂಗಳೂರಿನಲ್ಲಿ ರಾತ್ರಿ ಎದ್ದು ಹೋದರೆ ಬುದ್ಧನಾಗುವುದಲ್ಲ ಬದಲಿಗೆ ನಾಯಿಗಳು ಮುರಕೊಂಡು ಬೀಳುತ್ತವೆ. ಹಾಳು ಬಿಬಿಎಂಪಿ ನನ್ಮಕ್ಕಳು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಎಂಥದ್ದೋ ಮಾಡಿಸಿದರು. ಅಷ್ಟಾದರೆ ಅವುಗಳು ಮನುಷ್ಯರಿಗೆ ಕಚ್ಚಬಾರದು ಎಂದಿದೆಯೇ..? ಎಂದುಕೊಂಡ.
ಅಸಲಿಗೆ ಜೀವನ ಇಷ್ಟು ಕಷ್ಟವಾಗಬಾರದಿತ್ತು. ಇಷ್ಟು ಸಣ್ಣ ಪ್ರಾಯದಲ್ಲಿ ಹೃಷಿಕೇಶ, ಹರಿದ್ವಾರ, ಕಾಶಿಯ ಚಿತ್ರಗಳು ಮನಸ್ಸಿನಲ್ಲೂ ಬರಬಾರದು. ತೀರದ ಆಸೆಗಳೆಲ್ಲ ಗುಡ್ಡೆ ಬಿದ್ದಾಗ ವೈರಾಗ್ಯ ನೆನಪಾದ್ದಲ್ಲವೇ? ಮತ್ತೆ ಬುದ್ಧನ ಕಲ್ಪನೆ ಬೇರೆ. ಬುದ್ಧನ ಹೆಸರು ಹೇಳುವ ಯೋಗ್ಯತೆಯೂ ನನಗಿಲ್ಲ. ಕೋಪ, ಲೋಭ, ಮೌಢ್ಯ, ಮದ, ಮಾತ್ಸರ್ಯಗಳನ್ನು ಜಯಿಸಬೇಕಂತೆ. ಅದಿಲ್ಲದೆ ಬದುಕುವುದಕ್ಕಾಗುತ್ತಾ? ಬಂಧ ಮೋಕ್ಷಕ್ಕೆ ಇಂದ್ರಿಯಗಳೇ ಕಾರಣ. ಕಟ್ಟಿಟ್ಟಾಗ ಅವು ನಮ್ಮನ್ನು ಬಂಧನದಲ್ಲಿ ಕೆಡವುತ್ತದೆ. ಕಟ್ಟು ಬಿಡಿಸಿದಾಗ ಮುಕ್ತಿ ನೀಡುತ್ತವೆ. ಭೋಗ-ವೈರಾಗ್ಯಕ್ಕೆ ಕೂದಲೆಳೆಯಷ್ಟೇ ವ್ಯತ್ಯಾಸ. ಅದು ತುಂಬ ಸೂಕ್ಷ್ಮವಾದದ್ದು. ಮನಸ್ಸಿಗೆ ಯಾವುದೂ ಸಾಧ್ಯವಿದೆ. ಆದರೆ ಎಲ್ಲರೂ ಮೊದಲನೆಯದ್ದಕ್ಕೇ ಕಟ್ಟು ಬೀಳುತ್ತಾರೆ. 
ಯಾಕೆಂದರೆ ಮನುಷ್ಯನಲ್ಲವೇ ಅಂದುಕೊಂಡ.
ಏನಿದು ಮಲಗಿದಲ್ಲಿಗೇ ದಾರ್ಶನಿಕನಾದೆನೇ..? ಮುರುಕು ಚಾಪೆ ಉಪನಿಷತ್ತು ಹೇಳಿಸುತ್ತಿದೆಯೇ? ತತ್ವಶಾಸ್ತ್ರ ತರಗತಿಯಲ್ಲಿ ಕಲಿತ ಶಿವಸೂತ್ರವೇನಾದರೂ ಮನಸ್ಸಿಗೆ ಬಂತಾ? ಒಂದೂ ಅರ್ಥವಾಗುತ್ತಿಲ್ಲ.. ಹಾಗೆನ್ನುತ್ತಲೇ ಮತ್ತೆ ಎದ್ದ. ಹೋದ ಕರೆಂಟು ಬಂದಿತ್ತು. ಇನ್ನಾದರೂ ನಿದ್ದೆ ಬರಲೇಬೇಕು ಎಂದು, ತಲೆ ಮೇಲಿನ ಕಪಾಟು ತೆಗೆದು ಖಾಲಿ ನವರತ್ನ ತೈಲ ಬಾಟಲಿಯಲ್ಲಿದ್ದ ಎರಡು ಹುಂಡು ತೈಲ ಕೈಗೆ ಬಗ್ಗಿಸಿದ. ಹಾಗೇ ತಲೆಗೆ ತಿಕ್ಕಿಕೊಂಡ. ಮಲಗಿದವನೇ ಮುಸುಕೆಳೆದ. ಅಷ್ಟರಲ್ಲಿ ಹೊರಗಡೆ ಒಂದು ಕೊಡ ನೀರು ತಂದು ಮನೆ ಒಡತಿ ರಂಗೋಲಿ ಹಾಕುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಅವರ ಕೈ ಜಾರಿತೋ ಏನೋ ಕೊಡ ದಭಾಲನೆ ಕೆಳಗೆ ಬಿದ್ದು ದೊಡ್ಡ ಶಬ್ದ ಕೇಳಿತು. ಆ ರೂಮಿನೊಳಗೆ ಮಲಗಿದ್ದ ಆತ ಆಕಳಿಸುತ್ತ ಮಗ್ಗಲು ಬದಲಿಸಿಕೊಂಡ.


ಶುಕ್ರವಾರ, ಜೂನ್ 1, 2012


ಇಂತಿ ನಿನ್ನ...

ಪ್ರೀತಿಯ ಕಂದು ಕಣ್ಣಿನ ಹುಡುಗ..

ಎಲ್ಲಿ ನನ್ನ ಪತ್ರವನ್ನು ನೀನು ಹರಿದು ಹಾಕುತ್ತೀಯೋ ಎಂಬ ಹೆದರಿಕೆ. ಆದರೂ ಬರೆಯಲು ಕುಳಿತಿದ್ದೇನೆ. ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಹೆಸರು ಕೇಳಿದ ಕೂಡಲೇ ನಿನ್ನ ಮುಖ ಬದಲಾಗುತ್ತದೆ. ಸಿಟ್ಟು, ದುಃಖ, ನಿನ್ನ ಹಣೆಯ ನೆರಿಗೆಗಳಲ್ಲಿ ಮೂಡುತ್ತದೆ ಎಂದು ಸಂಶಯವಿದ್ದರೂ,  ಆದರೆ ನಿನ್ನ ಮನಸ್ಸು ಹಾಗಿಲ್ಲ. ಅದು ನನಗೆ ಎಂದೋ ಅರ್ಥವಾಗಿದೆ. ಬಾನಾಡಿಗಳಂತೆ, ಪ್ರಶಾಂತ ಕೊಳದ ತಿಳಿನೀರಿನಂತೆ, ಸ್ವಚ್ಛಂದ ಮನಸ್ಸು ನಿನ್ನದು. ಅದಕ್ಕಾಗಿಯೇ ನಿನ್ನ ಮರೆಯಲಾರದ ಅನಿವಾರ್ಯತೆಯಲ್ಲಿ ನಾನಿದ್ದೇನೆ. ನೀನು ಹೇಗಿದ್ದಿ, ಚೆನ್ನಾಗಿದ್ದೀಯಾ ಒಂದೂ ನಾನು ಕೇಳುವುದಿಲ್ಲ..
        ಸತ್ಯ ಹೇಳುತ್ತೇನೆ. ನಿನ್ನ ನೆನಪು ಮಾಸದೆ ಹಾಗೇ ಉಳಿದುಕೊಂಡಿದೆ. ಹೌದು ನಾನು ನಿನ್ನ ಪ್ರೀತಿಗೆ ಮೋಸ ಮಾಡಿದವಳು. ಪ್ರೀತಿಯನ್ನು ಕತ್ತು ಹಿಚುಕಿ ಕೊಲ್ಲಲು ಪ್ರಯತ್ನಿಸಿದವಳು. ಆ ಪಾಪದ ಫಲವನ್ನು ಉಣ್ಣಲೇಬೇಕಲ್ಲ. ಈಗ ನೋಡು ಅನುಭವಿಸುತ್ತಿದ್ದೇನೆ. ಬಹುಶಃ ನಿನಗೆ ತಮಾಷೆಯಾಗಿ ಕಾಣುತ್ತಿರಬೇಕು. ಇವಳಿಗೆಲ್ಲೋ ಹುಚ್ಚು ಹಿಡಿದಿದೆ ಅಂದುಕೊಂಡಿರಬೇಕು ಅಲ್ಲವೇ.. ಖಂಡಿತ ನಿನ್ನ ಹುಚ್ಚು ಹಿಡಿದಿದೆ. ನೀನು ದಿನವೂ ಹರಿಸುತ್ತಿದ್ದ ಪ್ರೇಮ ಸುಧೆಯಲ್ಲಿ ಮಿಂದು ಬರುತ್ತಿದ್ದ ನಾನು, ಸಂತೈಸುವವರಿಲ್ಲದೇ, ಕಣ್ಣೀರು ಒರೆಸುವುವರಿಲ್ಲದೇ, ನಿಜಕ್ಕೂ ಹುಚ್ಚಿಯಾಗಿದ್ದೇನೆ.
         ಅಂದು ನಾನು ನಿನ್ನನ್ನು ಬಿಟ್ಟು ಹೋಗಿದ್ದೆ.. ನೆನಪಿದೆಯಾ..? ನನಗೆ ನೀನು ಬೇಡ. ಬೇಡ ಅಂದರೆ ಬೇಡ.. ನಿನ್ನ ಕುರಿತ ಕಠೋರ ಸತ್ಯ ತಿಳಿದು ನಿನ್ನೊಂದಿಗಿನ ಸಂಬಂಧ ಕಡಿದುಕೊಂಡೆ. ಮುಖ ತೋರಿಸುತ್ತಿರಲಿಲ್ಲ. ಫೋನು ಮಾಡಿದರೆ ತೆಗೆಯುತ್ತಿರಲಿಲ್ಲ. ಮೆಸೇಜ್ ಮಾಡುತ್ತಿರಲಿಲ್ಲ. ಕಾರಣ ನಿನ್ನಲ್ಲಿ ನನ್ನ ಬಗ್ಗೆ ಒಂದು ತಾತ್ಸಾರ ಭಾವನೆ ಹುಟ್ಟಲಿ. ಆವಾಗ ನೀನೇ ದೂರವಾಗುತ್ತೀಯ ಎಂಬ ಆಲೋಚನೆ. ಆದರೆ ನೀನು ಏನು ಎಂದು ನನಗೆ ತಿಳಿದದ್ದು ಆವಾಗಲೇ. ನಾನು ನಿನ್ನಿಂದ ದೂರಾಗಲು ಶತಪ್ರಯತ್ನ ಮಾಡಿದರೂ, ನೀನೆಂದೂ ದೂರಾಗಲಿಲ್ಲ. ಅಮ್ಮನಿಂದ ದೂರಾಗುವುದುಂಟೇ ಎಂದು ಹೇಳುತ್ತಿದ್ದೆ. ಅಬ್ಬಾ ಎಂಥಾ ತಾಳ್ಮೆ ನಿನ್ನದು! ಕಡುಕೋಪಿಯಾದರೂ ನನ್ನಲ್ಲಿ ಎಂದಿಗೂ ಕೋಪಿಸಿಕೊಳ್ಳಲಿಲ್ಲ, ಬೇಸರದ ಮಾತನಾಡಲಿಲ್ಲ, ಹೋಗಾಚೆ ಎಂದು ದೂರ ತಳ್ಳಲಿಲ್ಲ. ಪ್ರೇಮ ಹರಿಸುವುದು ನಿಲ್ಲಿಸಲೇ ಇಲ್ಲ. ನನ್ನಲ್ಲಿ ಅದೇನು ಕಂಡಿದ್ದೀಯೋ ಯಾರಿಗೆ ಗೊತ್ತು..? ಅಂದೆಲ್ಲ, ನಮ್ಮ ಮಾತುಕತೆ ದೂರವಾದರೂ ನನಗೆ ನಿನ್ನ ಚಿತ್ರ ಮನಸ್ಸಿನಿಂದ ಮಾಸಿರಲಿಲ್ಲ. ನೀನು ಮತ್ತೊಮ್ಮೆ ಕಾಲೇಜಿಗೆ ಬಂದಾಗೆಲ್ಲ.. ಒಂದು ವರ್ಷಕ್ಕಾಗುವಷ್ಟು ನಿನ್ನ ನೆನಪು ರಿನಿವಲ್ ಆಗಿತ್ತು. ನನ್ನ ಸಂಬಂಧ ದೂರವಾದ ಮೇಲೆ ನೀನೆಲ್ಲೂ ಕಾಣುತ್ತಲೇ ಇರಲಿಲ್ಲ. ಪೇಟೆಯಲ್ಲಿ ನನ್ನ ನೀನು ಕಂಡರೂ ಮಾತನಾಡಿಸುತ್ತಿರಲಿಲ್ಲ.. ನೋಡಿಯೂ ನೋಡದಂತೆ ಇದ್ದೆ. ಜೀವನದಲ್ಲಿ ಎಂದೂ ಹೆಲ್ಮೆಟ್ ಹಾಕದೇ ಬೈಕ್ನಲ್ಲಿ ಹೋಗುತ್ತಿದ್ದ ನೀನು.. ನನಗೆ ಗುರುತೇ ಸಿಗಬಾರದೆಂದು ಹೆಲ್ಮೆಟ್ ಹಾಕತೊಡಗಿದೆ. ಆದರೂ ನನಗೆ ನಿನ್ನ ಗುರುತು ಚೆನ್ನಾಗಿಯೇ ಸಿಗುತ್ತಿತ್ತು. ಎದುರು ನೀನು ಕಂಡಾಗೆಲ್ಲ ಎದೆ ಢವ ಢವ ಹೊಡೆದುಕೊಳ್ಳುತ್ತಿತ್ತು ಮಾತನಾಡಿಸುತ್ತೀಯೇನೋ ಎಂಬಂತೆ. ಆದರೆ ಹಾಗೇ ನೀನು ಹೋದಾಗೆಲ್ಲ.. ಛೇ ಮಾತನಾಡಿಸದೇ ಹೋದನಲ್ಲಾ.. ನಾನಾದರೂ ಮಾತನಾಡಿಸುತ್ತಿದ್ದರೆ, ಮಾತನಾಡುತ್ತಿದ್ದನೋ ಎಂದು ಅನಿಸಿದ್ದಿದೆ.
           ಹೌದು ಹುಡುಗ... ಬೇಕೆಂದೇ ನಿನ್ನ ಸಂಬಂಧ ಕಡಿದುಕೊಂಡೆ. ನನಗೂ ಒಂದು ಜೀವನ ಎನ್ನವುದು ಇದೆಯಲ್ಲ. ಒಳ್ಳೆಯ ಮನೆಗೆ ಸೊಸೆಯಾಗಿ, ಒಳ್ಳೆಯ ಗಂಡನಿಗೆ ಹೆಂಡತಿಯಾಗಬೇಕು ಎಂದಿದೆಯಲ್ಲ..ನೀನೇ ಹೇಳು ನಾನು ಚೆನ್ನಾಗಿರಬಾರದಾ? ನನ್ನ ಸ್ಥಾನದಲ್ಲಿ ಒಂದು ಬಾರಿ ನಿಂತು ಆಲೋಚಿಸು.. ಹಾಂ ಅಷ್ಟು ಯೋಗ್ಯತೆ ನಿನ್ನಲ್ಲಿ ಇರಲಿಲ್ಲ ಎಂದಲ್ಲ. ನಿನ್ನ ಪಾಲಿನ ಕಠೋರ ಸತ್ಯಗಳನ್ನು ನಾನು ಅರಗಿಸಲಾರದೇ ಹೋದೆ. ಅಷ್ಟೊಂದು ಧೈರ್ಯವೇ ಇಲ್ಲ. ನೀನು ಕೇಳುತ್ತಿದ್ದೆಯಲ್ಲ. ನಾನು ಸತ್ತರೆ ಎಂಬಂತೆ. ಆವಾಗೆಲ್ಲ ಹೀಗೆಲ್ಲ ಮಾತಾಡಬೇಡ ಎಂದು ನಾನು ನಿನ್ನ ಬಾಯಿಗೆ ಕೈಹಿಡಿದದ್ದು ನೆನಪಿದೆಯೇ? ಪರಿಸ್ಥಿತಿ ನನ್ನನ್ನು ಹಾಗೆ ಮಾಡಿತು. ನಿನ್ನನ್ನು ಬೇಕು ಬೇಕೆಂದೇ ತಿರಸ್ಕರಿಸಿದೆ. ನೀನು ಎಂದಿಗೂ ಬರಬೇಡ ಎಂದು ಹೇಳಿದೆ. ನನ್ನ ವಿಚಾರ ಮರೆತುಬಿಡು ಎಂದು ಹೇಳಿದೆ. ನೀನು ನನ್ನೊಂದಿಗೆ ಎಷ್ಟು ದಿನ ಬದುಕಬಲ್ಲೆ ಎಂಬ ಪ್ರಶ್ನೆಯೇ ನನಗೆ ದೊಡ್ಡದಾಯಿತು. ಕಟ್ಟಿಕೊಂಡ ನಂತರ ನೀನು ನನ್ನಿಂದ ದೂರವಾದರೆ ಎನ್ನುವ ಅಭದ್ರತೆ ಕಾಡತೊಡಗಿತು. ನೀನು ಹೋದರೆ ಮತ್ತೆ ನಾನೇನು ಮಾಡಲಿ ಎನ್ನುವ ಪ್ರಶ್ನೆ ಬೃಹದಾಕಾರವಾಯಿತು, ನಿನ್ನ ಕಷ್ಟ ನೋಡುವ ಛಾತಿ ನನಗಿಲ್ಲ. ಏನೇ ಆದರೂ, ಜೀವನ ಎದುರಿಸುವ ನಿನ್ನ ಮನಸ್ಸು ನನಗಿಲ್ಲದಾಯಿತು.. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಿತ್ತು ಕಿತ್ತು ತಿನ್ನಲು ಶುರುಮಾಡಿತು. ನಿನ್ನನ್ನು ಕಟ್ಟಿಕೊಂಡ ಬಳಿಕ ಕಳೆದುಕೊಳ್ಳುವುದರ ಬದಲು ಮೊದಲೇ ಕಳೆದುಕೊಂಡರೆ ಚೆನ್ನ ಎಂದು ಮನಸ್ಸಿಗನ್ನಿಸಿತು. ನೀನು ಚೆನ್ನಾಗಿರುವಷ್ಟು ದಿನ ದೂರದಿಂದಲೇ ನೋಡಬಹುದಲ್ಲ.. ಅದಕ್ಕಾಗಿಯೇ ತಿರಸ್ಕರಿಸಿದೆ. ದೂರ ಹೋಗು ಎಂದು ಸಾರಿ ಸಾರಿ.. ಗೋಗರೆದೆ.. ಆದರೆ....
            ನೀನು ದೂರವಾದರೂ, ಮನಸ್ಸಿನಿಂದ ದೂರವಾಗಲೇ ಇಲ್ಲ. ಹಾಗೇ ಇದ್ದೀಯಾ. ದಿನಾ ಬರುತ್ತೀಯಾ, ನಿನ್ನ ಹೆಸರು ಹೇಳಿ ನನ್ನ ಕಷ್ಟಗಳನ್ನೆಲ್ಲ ಹೇಳುತ್ತೇನೆ. ಹೀಗಾಯಿತು ಕಣೋ ಎಂದು ಬಿಕ್ಕಳಿಸುತ್ತೇನೆ. ನೀನು ಪ್ರೊಪೋಸ್ ಮಾಡಿದ್ದಾಗ ನಾನು ಒಪ್ಪಿರಲಿಲ್ಲ. ಹುಚ್ಚು ಹುಡುಗ ಏನು ಎತ್ತ ನೋಡದೆ ಮಾಡಿದ್ದಾನೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಪ್ರೀತಿಯ ದೃಢತೆಯನ್ನು ದಿನಕಳೆದಂತೆ ಒತ್ತಿ ಹೇಳುತ್ತಿದ್ದವು. ನಿನ್ನ ಮಾತು, ಕೃತಿ, ಹೊಸಜೀವನದ ತುಡಿತ, ಕನಸುಗಳಿಗೆ ಮರುಳಾಗಿ ನಿಧಾನಕ್ಕೆ ನಿನಗೆ ಮನಸ್ಸು ಕೊಟ್ಟೆ. ಅದ್ಯಾಕೋ ಒಮ್ಮೆ ನಿನ್ನ ಸಹವಾಸವೇ ಬೇಡ ಅನ್ನಿಸಿತ್ತು.
             ಅದು ಎಂದಿಗೂ ನೆರವೇರಲಿಲ್ಲ. ನೀನು ನನ್ನ ಧ್ಯಾನದಲ್ಲಿರುತ್ತಿದ್ದಿಯೋ ಗೊತ್ತಿಲ್ಲ. ಆದರೆ ಪ್ರೇಮಿಗಳು ಅಡ್ಡಾಡುತ್ತಿರುವಾಗ, ಬಸ್ಸಿನಲ್ಲಿ ಆ ಪ್ರೇಮಿಯ ಭುಜಕ್ಕೆ ಪ್ರಿಯತಮೆ ತಲೆಕೊಟ್ಟು ಮಲಗಿದ್ದನ್ನು ನೋಡಿದಾಗ ನಿನ್ನ ನೆನಪು ಕಾಡುತ್ತಿತ್ತು. ಎಲ್ಲವನ್ನೂ ಹೇಳಿಕೊಳ್ಳಬೇಕು, ನೀನು ನನ್ನ ಸಂತೈಸಬೇಕು, ಜೀವ ಹೋಗುವಷ್ಟು ಪ್ರೀತಿಸಬೇಕು ಎಂದಿದ್ದೆ. ಆದರೆ ಅಷ್ಟೆಲ್ಲ ಗಾಢವಾಗಿ ಪ್ರೀತಿಸಿದರೆ ಮುಂದೆ.. ಹೇಗಾಗಬಹುದು ಎಂಬ ಪ್ರಶ್ನೆಯೂ ಮೂಡತೊಡಗಿತ್ತು. ಆದರೆ ನೀನು ನನ್ನ ಪ್ರೀತಿ ಪಡೆಯುವ ಉತ್ಸಾಹದಲ್ಲಿ  ಏನನ್ನೂ ಮುಚ್ಚಿಡಲಿಲ್ಲ. ನಿನ್ನ ಪರಿಸ್ಥಿತಿಯನ್ನು ನೆನೆದು ಅಂದು ಮನಸೋ ಅತ್ತಿದ್ದೆ. ಇಂಥವನನ್ನು ಪ್ರೀತಿಸುವುದು ಹೇಗೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಅವೆಲ್ಲವನ್ನೂ ಮರೆಸುತ್ತಿತ್ತು. ಬೇರೇನೂ ನೆನಪಿರುತ್ತಿರಲಿಲ್ಲ. ನಾನು ಹೆಣ್ಣು. ನಿನ್ನಷ್ಟು ಬಿಡುಬೀಸಾಗಿ ಹೇಳಲು, ಪ್ರೀತಿಸಲು ಸಾಧ್ಯವಿಲ್ಲ ಎಂಬುದು ನಿನಗೂ ಅರ್ಥವಾಗಿಲ್ಲ ಕಾಣುತ್ತದೆ. ನೀನು ಪ್ರೀತಿಸುತ್ತಲೇ ಹೋದೆ.. ನಿನ್ನ ಬಗೆಗಿನ ನನ್ನ ಸಂಶಯಗಳು ನಿಧಾನಕ್ಕೆ ನನ್ನಲ್ಲಿ ಬಲವಾಗತೊಡಗಿದವು. ಹಿಂದೆ ಸರಿಯಲು ಆರಂಭಿಸಿದೆ. ಒಂದು ಬದಿಯಲ್ಲಿ ಪ್ರೀತಿ ಮತ್ತೊಂದೆಡೆ ಸಂಬಂಧ ಕಡಿದುಕೊಳ್ಳುವ ಆಲೋಚನೆ. ಅದರ ಮಧ್ಯೆ, ಬಸ್ಗೆ ಕಾದು ಕಾದು ಸೋತಾಗ ಬೈಕ್ನಲ್ಲಿ ಬರುವ ನಿನ್ನ ನೆನಪು, ಒಬ್ಬಂಟಿಯಾಗಿ ನಾನು ದಾರಿಯಲ್ಲಿ ನಡೆಯುತ್ತಿದ್ದರೆ ಹತ್ತಿರ ಬಂದು ಬೈಕ್ ಬ್ರೇಕ್ ಹಾಕಿ ಹೆದರಿಸುತ್ತಿದ್ದ ನೀನು, ಬೈಕ್ನಲ್ಲಿ ನಾನು ಹಿಂದೆ ಕುಳಿತರೆ ನೀನು ವೇಗವಾಗಿ ಹೋಗುತ್ತಿದ್ದೆ. ತುಂಟತನದಲ್ಲಿ ಬೇಕಂತಲೇ ಬ್ರೇಕು ಹಾಕುತ್ತಿದ್ದೆ. ಆವಾಗೆಲ್ಲ.. ನಿನ್ನ ಬೆನ್ನಿಗೆ ಗುದ್ದು ನಿಶ್ಚಿತವಾಗಿ ಬೀಳುತ್ತಿತ್ತು ಅಲ್ಲವೇ..? ಅದೇ ಅದೇ.. ನಿನ್ನ ಪ್ರೀತಿ ಮಾತುಗಳು, ಒಂಟಿಯಾಗಿ ಕುಳಿತಾಗೆಲ್ಲ ಕಾಡುತ್ತದೆ. ಒಂದು ಫೊನು ಮಾಡೋಣ ಎಂದು ಮೊಬೈಲ್ ಎತ್ತಿಕೊಳ್ಳುತ್ತೇನೆ. ಆದರೆ ಆ ಧೈರ್ಯವೇ ಇರುವುದಿಲ್ಲ. ಸ್ವರ ಗದ್ಗದಿತವಾದರೆ, ನಾನು ಅಳುವುದು ನಿನಗೆ ಗೊತ್ತಾದರೆ, ನೀನು ಖಂಡಿತ ಸಂತೈಸುತ್ತಿ. ಅದೇ ಅಲೆಯಲ್ಲಿ ನಾನು ಮತ್ತೆ ನಿನಗೆ ಶರಣಾದರೆ ಬೇಡ ಬೇಡ.. ಸಾಧ್ಯವೇ ಇಲ್ಲ ಎಂದು ಮತ್ತೆ ಸುಮ್ಮನಾಗುತ್ತೇನೆ.
          ಮೊದಲ ನಮ್ಮ ಭೇಟಿಯಲ್ಲಿ ನೀನು ಕೊಟ್ಟ ಪುಸ್ತಕವಿದೆಯಲ್ಲ. ಅದನ್ನು ನಾನು ಓದೇ ಇಲ್ಲ. ಎಲ್ಲ ಪುಸ್ತಕಗಳ ಸಾಲಿಗೆ ಸೇರಿಸದೇ ಅದನ್ನು ಬೇರೆಯದೇ ಆಗಿ ಎತ್ತಿಟ್ಟಿದ್ದೇನೆ. ನಿನ್ನ ನೆನಪಾದಾಗಲೆಲ್ಲ.. ರೂಮಿಗೆ ಹೋಗಿ ಪುಸ್ತಕ ತೆಗೆದುಕೊಂಡು ಎದೆಗವಚಿಕೊಳ್ಳುತ್ತೇನೆ. ಎರಡು ಹನಿ ಕಣ್ಣೀರು ಹಾಕುತ್ತೇನೆ. ಅಮ್ಮ ಬಂದರೆ ಕೇಳುತ್ತಾಳೆ ಯಾವ ಕಾದಂಬರಿ ಅಷ್ಟೂ ಚೆನ್ನಾಗಿದೆಯಾ ಎಂಬಂತೆ. ನಾನು ಹೌದು ಹೌದು ಎನ್ನುತ್ತಾ ಮತ್ತಷ್ಟು ಬಿಕ್ಕಳಿಸುತ್ತೇನೆ, ನನ್ನೆಲ್ಲ ಕಷ್ಟಗಳನ್ನು ಸಾವಧಾನವಾಗಿ ಕೇಳುವ ಮನಸ್ಸಿನೊಂದಿಗೆ ನಿನ್ನ ತೋಳಲ್ಲಿ ಬಂಧಿಯಾದಂತೆ ಕನವರಿಸುತ್ತೇನೆ. ಕೂಡಲೇ ಅಂತರಾತ್ಮ ಎಚ್ಚರಿಸುತ್ತದೆ, ಮತ್ತೆ ಅವನ ನೆನಪಲ್ಲಿ ಕರಗಿ ಹೋಗುತ್ತಿದ್ದೀಯಾ ಎಂಬಂತೆ.. ಧಡಕ್ಕನೆದ್ದು ಪುಸ್ತಕವನ್ನು ಬೀಸಿ ಒಗೆಯೋಣ ಎಂದೆನಿಸುತ್ತದೆ. ಆದರೆ ಅದ್ಯಾವುದಕ್ಕೂ ಮನಸ್ಸೇ ಬರುವುದಿಲ್ಲ.. ಮತ್ತೆ ಮೌನಿಯಾಗುತ್ತೇನೆ..!
            ನಾನು ಬರೆದಿದ್ದನ್ನೆಲ್ಲ ನಿಜಕ್ಕೂ ನೀನು ಓದುತ್ತಿದ್ದೀಯಾ ಗೊತ್ತಿಲ್ಲ.. ಆದರೂ ನಿನ್ನ ನೆನಪು ಮಾಸದಾಗಿದೆ ಎನ್ನುವುದನ್ನು ಖಂಡಿತ ಹೇಳಬಲ್ಲೆ. ಕೆಲ ಬಾರಿ ನನಗೆ ಪ್ರಶ್ನೆಗಳನ್ನು ಕೇಳಬೇಕೆನಿಸಿದ್ದಿದೆ.  ನೀನು ನನ್ನ ಯಾಕೆ ಪ್ರೀತಿಸಿದೆ..? ನಾನು ಬೇಡ ಬೇಡ ಎಂದರೂ ಮನಸ್ಸಿನಿಂದ ನೀನು ಹೋಗುತ್ತಿಲ್ಲ ಯಾಕೆ.. ಯಾಕೆ ಅಷ್ಟೊಂದು ಪ್ರೀತಿ ನನ್ನಲ್ಲಿ..? ನಿನಗೆ ಬೇರೆ ಯಾರೂ ಸಿಗಲಿಲ್ಲವೇ. ಆದರೆ ಉತ್ತರ ಹೇಳಲು ನೀನೇ ಇಲ್ಲವಲ್ಲ. ನನ್ನಷ್ಟಕ್ಕೇ ಕೇಳಿ ಸುಮ್ಮನಾಗುತ್ತೇನೆ. ನೀನು ಹೇಳುತ್ತಿದ್ದ ಒಂದು ಗ್ಲಾಸು ಜ್ಯೂಸು 2 ಸ್ಟ್ರಾ ಜೋಕು.. ಕಾಫಿ ಹಂಚಿ ಕುಡಿದ ಅನುಭವ ಮರೆಯುವುದು ಹೇಗೆ. ನಿನಗಿಷ್ಟವಾದ ಕಾಫಿ ಕುಡಿಯುತ್ತಿರಬೇಕಾದರೆ ನೆನಪಾಗುತ್ತದೆ. ಒಂದು ದೊಡ್ಡ ಕಪ್ ಕಾಫಿ ತಂದು ಭರೋ ಎಂದು ಫ್ಯಾನು ಹಾಕುತ್ತೇನೆ. ಕಾಫಿ ಹಬೆ ನಿಧಾನಕ್ಕೆ ಆವಿಯಾದಂತೆ ನೀನೇ ಕುಡಿಯುತ್ತಿದ್ದೀಯಾ ಅಂದುಕೊಳ್ಳುತ್ತೇನೆ. ಅದೇ ಖುಷಿಯಲ್ಲಿ ಮತ್ತೆ ಉಳಿದ ಕಾಫಿ ನಾನು ಕುಡಿಯುತ್ತೇನೆ. ಕೆಲವೊಮ್ಮೆ ಛೇ ಎಂತಾ ಹುಚ್ಚುಗಳಪ್ಪಎಂದು ತಲೆ ತಟ್ಟಿಕೊಳ್ಳುತ್ತೇನೆ. ಹುಂ ಏನೇ ಹೇಳಿದರೂ ಮರೆಯದ ನೆನಪುಗಳು.
          ನೀನು ಕೊಟ್ಟ ಪ್ರೀತಿ ಎಲ್ಲ ಸದಾ ಹಸಿರಾಗಿದೆ. ನನ್ನ ಯಾರು ಮದುವೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಿನ್ನ ಮನಸ್ಸಿನಂತವರು ಇನ್ನೂ ಜಗತ್ತಿನಲ್ಲಿದ್ದಾರಾ ಎಂದು ಕೇಳಿಕೊಳ್ಳುತ್ತೇನೆ. ನಾನು ಗ್ರಹಿಸಿದ ಸುಂದರ ಜೀವನದ ಸ್ವಪ್ನಗಳೆಲ್ಲ ಈಡೇರುತ್ತಾ..? ಅದಕ್ಕೆ ಮದುವೆಯಾದ ನಂತರವೂ ಒಂದು ಹಿಡಿ ಪ್ರೀತಿ ಸಿಕ್ಕಿದರೆ ಸಾಕು ಅಲ್ಲವೇ..? ನೀನಾದರೆ ಹಿಡಿಯೇನು ಬೆಟ್ಟ ತಂದು ಮುಂದಿಡುತ್ತಿದ್ದೆ. ಆದರೆ ನಾನೇ ಒಪ್ಪಿಕೊಳ್ಳಲಿಲ್ಲ. ನನ್ನ ಬದುಕಿನಲ್ಲಿ ಏನು ಬರೆದಿದೆಯೋ ಅದೇ ಆಗುವುದು ಎಂದು ಅಂದುಕೊಂಡಿದ್ದೇನೆ. ನಿನ್ನ ಕಾಣುವುದಕ್ಕೂ, ಮಾತನಾಡದುವುದಕ್ಕೂ ಹಿಂಜರಿಕೆ ಇದ್ದರೂ, ಹಗಲು ರಾತ್ರಿ ನೀನು ಕಣ್ಮುಂದೆ ಬರುವುದು ಬಹುದೊಡ್ಡ ಸಮಾಧಾನ, ಪಶ್ಚಾತ್ತಾಪಗಳಿಗೆ ಕಾರಣವಾಗಿದೆ. ನಿನ್ನ ಬಿಡಬೇಕೆಂದು ಸಾರಿ ಸಾರಿ,  ಸಾವಿರಬಾರಿ ಅಂದುಕೊಂಡರೂ ಇಷ್ಟರವರೆಗೆ ಆ ಗ್ರಹಿಕೆಗಳೆಲ್ಲ ಸುಳ್ಳಾಗಿವೆ.
ನಿನ್ನಲ್ಲಿ ಒಂದೇ ಒಂದು ಕೇಳುತ್ತೇನೆ. ನಾನು ನಿನಗೆ ಕೊಟ್ಟ ಮನಸ್ಸಿದೆಯಲ್ಲ.. ಅದನ್ನ ವಾಪಸ್ ಕೊಡುತ್ತೀಯಾ..? ಇದು ನಿನಗೆ ಸಾಧ್ಯವೇ..?

ಇಂತಿ ನಿನ್ನ,
ಶಾರಿ

ಭಾನುವಾರ, ಮೇ 13, 2012


ತಿಟ್ಹತ್ತಿ ತಿರುಗಿ...

ಮನಸೇ ನನ್ನ ಮನಸೇ ಏನಾಗಿದೆ ನಿನಗೆ..?
ಕಿವಿಯಲ್ಲಿ ಗುಯಿಂಗುಡುವ ಭಾವಗೀತೆ. ಬೈಕು ನಿಧಾನನಕ್ಕೆ ವೇಗ ಏರಿಸಿಕೊಳ್ಳುತ್ತಿತ್ತು. ಅದೊಂದು ತಿರುವು.. ಎದುರಿಂದ ಬಂದ ಕಾರು ಸೋಕಿದಂತೆ ಭರ್ರನೇ ಹಾದುಹೋದಾಗ ಆತ ವಾಸ್ತವಕ್ಕೆ ಬಿದ್ದಿದ್ದ. ಕಾರಣ ಅವಳ ಮಾಸದ ನೆನಪು. ಕನಸಿನಂತೆ ಬಂದು ಹೋದವಳ ಅಚ್ಚಳಿಯದ ನೆನಪಿನಲ್ಲಿದ್ದ.
ಬೆಂಗಳೂರಿಗೆ ಇನ್ನು ಕೇವಲ 220 ಕಿ.ಮೀ. ಅಷ್ಟು ಕ್ರಮಿಸಿದರೆ ಮತ್ತೆ ಅದೇ ಹಾಳು ಜೀವನ. ಬೈಕಿನಲ್ಲಿ ಹೋಗುವುದು ನಿನ್ನೆಯದನ್ನು ಮರೆಯಲೋ, ಮತ್ತೆ ನೆನಪು ಮಾಡಿಕೊಳ್ಳಲೋ, ಹೊಸ ಆಲೋಚನೆ ಹುಟ್ಟಿಸಿಕೊಳ್ಳಲೋ.. ಎಲ್ಲದಕ್ಕೂ ಆತನಿಗೆ ಇರುವ ಏಕೈಕ ನೆವ ಅದು. ಅಚಾನಕ್ ಆಗಿ ಈ ಬಾರಿ ಆಕೆಯ ನೆನಪೇ ಆತನನ್ನು ಕಾಡುತ್ತಿತ್ತು.! ಬೆಳಗಿನ ಜಾವದ ಮಳೆಗೆ ಚೆನ್ನಾಗಿ ತೋಯ್ದಿದ್ದ ರಸ್ತೆ.. ಇಕ್ಕೆಲಗಳಲ್ಲಿ ಚಾದರದಂತೆ ಹಾಸಿದ ಮೇಫ್ಲವರ್ ಹೂಗಳು ಕಾಫಿ ತೋಟ, ಅಲ್ಪಸ್ವಲ್ಪ ಮುಸುಕಿದ ಮಂಜು ಆಕೆಯ ನೆನಪಿಗೆ ಮತ್ತಷ್ಟು ಬಲ ತಂದಿತ್ತು..
ಅಮ್ಮನ ಮಡಿಲಲ್ಲಿ ಮಲಗಿದ್ದಾಗ ತಲೆ ಸವರುತ್ತ ಹೇಳುತ್ತಿದ್ದಳು. ಅವಳನ್ನು ಮರೆತುಬಿಡು. ಜೀವನ ಎಂದರೆ ಹಾಗೆ, ಬಯಸಿದ್ದೆಲ್ಲ ಸಿಗಲ್ಲ, ಯಾವುದನ್ನೂ ಹಚ್ಚಿಕೊಳ್ಳಬೇಡ. ಅದ್ಹೇಗಾಗುತ್ತಮ್ಮ.. ಇವನ ಪ್ರಶ್ನೆ. ಅಮ್ಮನ ಉತ್ತರವಿಲ್ಲ. ಗಾಢ ಮೌನ. ಮಗನನ್ನು ಸಮಾಧಾನ ಮಾಡಲಾಗದ ಸಂಕಷ್ಟದಲ್ಲಿ ಅಮ್ಮನಿದ್ದರೆ, ಬಿಟ್ಟೂ ಬಿಟ್ಟಿರಲಾರದ ಅವಳ ಕನವರಿಕೆಯಲ್ಲಿ ಇವನಿದ್ದ.
ಇಷ್ಟಕ್ಕೂ ಅವಳು ಯಾರು?
ಅಚಾನಕ್ ಆಗಿ ಕಂಡಳು.. ಫೇಸ್ ಬುಕ್ ಲ್ಲಿ ಮಾತನಾಡಿದಳು, ಎಸ್ಎಂಎಸ್, ಫೋನ್, ಚಾಟಿಂಗ್ ಜೀವನವಾಗಿ ಹೋಯಿತು. ಅವಳೊಂದಿಗೆ ಹಂಚಿಕೊಂಡದ್ದೆಷ್ಟೋ, ಬಿಟ್ಟದ್ದೆಷ್ಟೋ.. ಮಾತನಾಡಿದ ವಿಷಯಗಳೆಷ್ಟೋ.. ಇಬ್ಬರಿಗೇ ಗೊತ್ತು. ಇಷ್ಟಕ್ಕೆಲ್ಲ ಹುಡುಗ ತಲೆಕೆಡಿಸಿಕೊಂಡು ಅವಳ ಹಿಂದೆ ಬಿದ್ದಿದ್ದ! ಫೋನಿನಲ್ಲೇ ನೀನೇ ಜೀವ ಎನ್ನುತ್ತಿದ್ದ.. ಅತ್ಲಾಗಿಂದ ಆ ಹುಡುಗಿ ಹೂಂ ಗುಟ್ಟುತ್ತಿದ್ದಳು. ಕೆಲವೊಮ್ಮೆ ಇಬ್ಬರ ನಡುವೆ ಗಾಢ ಮೌನ. ಮತ್ತೋಮ್ಮೆ ಭರ್ಜರಿ ಜಗಳ. ಸಂಜೆ, ರಾತ್ರಿಯಾಗುತ್ತಲೇ, ಅದೆಲ್ಲವನ್ನೂ ಇಬ್ಬರೂ ಮರೆಯುತ್ತಿದ್ದರು. ರಾತ್ರಿ ಗಂಟೆ ಒಂದಾದರೂ ವಿಷಯಗಳು ಮುಗಿಯುತ್ತಿರಲಿಲ್ಲ. ಮರುದಿನದಿಂದ ಮತ್ತದೇ ಮಾತು-ಕತೆ.. ಅವಳು ಹೋದದ್ದು ಬಂದದ್ದು, ಹಾಕಿದ ಡ್ರೆಸ್, ಊಟದ ವಿಚಾರ, ಫೋನಿನಲ್ಲಿ ಮಾತನಾಡುತ್ತಿರುವಾಗ ಅಮ್ಮ ಬಂದ ವಿಷಯ ಎಲ್ಲವನ್ನೂ ಹೇಳುತ್ತಿದ್ದಳು. ಇವನೋ. ಬದುಕಿನ ಚಪ್ಪರ ಕಟ್ಟುವಲ್ಲಿ ತನ್ನ ಕನಸುಗಳನ್ನು ಬಿಚ್ಚಿಡುತ್ತಿದ್ದ. ಕೆಲವೊಮ್ಮೆ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು, ನಾವೆಷ್ಟು ಮಾತನಾಡುತ್ತೇವೆ. ಇಷ್ಟೊಂದು ವಿಷಯಗಳಿವೆಯಾ ಎಂಬಂತೆ. ಅವಳಿಗೆ ಮೆಸೇಜು, ಫೋನು ಮಾಡದಿದ್ದರೆ ಇವನಿಗೆ ದಿನ ಹೋಗುತ್ತಿರಲಿಲ್ಲ.. ಇವನ ಕರೆ, ಮೆಸೇಜು ಬಾರದಿದ್ದರೆ ಅವಳಿಗೇನೋ ಚಡಪಡಿಕೆ. ಇಬ್ಬರ ನಡುವೆ ಅದೇನೋ ಬಂಧ. ಇಬ್ಬರ ಮಾತುಕತೆ ಅನುರಾಗವಾಯಿತು.. ಅವನ ಭಾವನೆ ಹಂಚಿಕೊಳ್ಳುವ ಮನದೆನ್ನೆ, ಸಾಂತ್ವನಕ್ಕೆ ಅಮ್ಮ, ಕಷ್ಟಕ್ಕೆ ಸಮಾಧಾನ, ಯಶಸ್ಸಿಗೆ ಊರುಗೋಲು, ಸಾಧನೆಗೆ ಪ್ರೇರಣೆ ಎಲ್ಲವೂ ಆದಳು. ಅದಾಗಿ, ಊರಿಗೆ ಹೋದಾಗ ಅವಳನ್ನೊಮ್ಮೆ ಕಾಣಬೇಕೆನ್ನುವ ಆಸೆಯೂ ಅವನಿಗಿತ್ತು. ಪರಿಣಾಮ ಇಬ್ಬರೂ ಆ ಪೇಟೆಯ ಇಕ್ಕೆಲಗಳಲ್ಲಿ ಕೈ ಕೈ ಹಿಡಿದು ಸಂಭ್ರಮಿಸಿದರು, ಆ ಹೊತ್ತಿಗೆ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದರು. ಅಂದು ಗಂಟೆಗಳು ಬೇಗ ಓಡಿದ್ದಕ್ಕೆ ಮತ್ತೆ ಇಬ್ಬರಿಗೂ ವಿಷಾದ. ಫೋನು ಮಾತುಕತೆಯಾದರೂ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಂಡರು.
ನಂಗೆ ನೀನು ಇಷ್ಟವಿಲ್ಲ!
ದಿನ ಕಳೆಯುತ್ತಿದ್ದಂತೆ ಅಂಥಾದ್ದೊಂದು ವಿಷಯ, ಆಗ ಬಾರದ್ದು ನಡೆದೇ ಹೋಯಿತು. ಮನೆಯಲ್ಲಿ ಕೇಳಿದರೋ, ಹಿರೀಕರಿಗೆ ಗೊತ್ತಾಯಿತೋ ಒಂದೂ ಇವನಿಗೆ ಗೊತ್ತಾಗಲಿಲ್ಲ. ಹುಡುಗ ಹುಚ್ಚು ಪ್ರೀತಿಯಲ್ಲಿ ಮುಳುಗಿದ್ದರೆ, ಅವಳು ಮೆಲ್ಲನೆ ಹಿಂದೆ ಸರಿಯುವ ಯತ್ನ ಮಾಡುತ್ತಿದ್ದಳು. ಕಾರಣ ಹುಡುಗನ ಕಿರಿಕಿರಿ. ಮದ್ವೆಯಾಗೋದು ಯಾವಾಗ, ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿದ್ದೇನೆ. ನಾಡಿದ್ದು, ನಿಮ್ಮ ಮನೆಗೆ ಬಂದು ಹುಡುಗಿ ಕೇಳುವ ಶಾಸ್ತ್ರ. ರೆಡಿಯಾಗಿರು ಎನ್ನುವುದು ಮುಗಿಯುತ್ತಿರಲಿಲ್ಲ. ಬಹುಶಃ ಅವಳಿಗೆ ತಲೆ ಕೆಟ್ಟು ಹೋಗಿರಬೇಕು. ಮದುವೆಯಾಗುವ ಮೊದಲೇ ಹೀಗೆ ಹುಚ್ಚನಂತಿದ್ದರೆ ಇನ್ನೇನೋ ಎಂದು ಗ್ರಹಿಸಿದ್ದಿರಬೇಕು ಪರಿಣಾಮ ನಿತ್ಯ ಒಂದು ಅಂತರವನ್ನು ಕಾಯ್ದುಕೊಂಡಳು. ಮದುವೆ, ಪ್ರೀತಿ ಮಾತೆತ್ತಿದ್ದರೆ ಪ್ಲೇಟ್ ಚೇಂಜ್.
ನಾಲ್ಕು ದಿನ ಕಳೆಯುವಷ್ಟರಲ್ಲಿ ಹುಡುಗನಿಗೆ ಹುಡುಗಿ ಕೈತಪ್ಪುವ ಭೀತಿ ಹುಟ್ಟತೊಡಗಿತು. ಎಲ್ಲ ಹುಡುಗಿಯರಂತೆ ನಾನಲ್ಲ ಎನ್ನುವ ಅವಳ ಮಾತು ಇವನಿಗೆ ಹಾಸ್ಯಾಸ್ಪದವಾಗಿ ಕಾಣತೊಡಗಿತು. ಪರಿಣಾಮ ಸಣ್ಣದೊಂದು ತಾತ್ಸಾರ ಭಾವನೆ. ಮೆಸೇಜು ಕುಟ್ಟುವುದು, ಫೋನು ಕಡಿಮೆಯಾಯಿತು. ಅಲ್ಲಿಗೆ ಮದುವೆಯಾಗುವ, ಪ್ರೀತಿ ದಡ ಎತ್ತಿಸುವ ವಿಚಾರಗಳೆಲ್ಲ.. ಹಿಂದೆ ಹಿಂದೆ ಸರಿಯಲು ಆರಂಭಿಸಿದವು. ಇದು ಮಾತುಗಳಲ್ಲೇ ವ್ಯಕ್ತವಾಗತೊಡಗಿತು. ಹುಡುಗಿ ಬಾಯಿಬಿಟ್ಟು ಹೇಳೇ ಬಿಟ್ಟಳು. ಮರೆತುಬಿಡು ಎಂಬಂತೆ. ಆದರೂ ಇಬ್ಬರ ಸಾಮೀಪ್ಯ ಕಡಿಮೆಯಾಗಿರಲಿಲ್ಲ. ಹುಡುಗನಿಗೂ ಏನನಿಸಿತೋ ಕೆಲವೊಮ್ಮೆ ಅವಳ ಮೆಸೇಜ್ಗೆ ಉತ್ತರ ಕಳುಹಿಸುತ್ತಿರಲಿಲ್ಲ. ಹುಡುಗ ಹೀಗೆ ಮಾಡಿದರೆ ಹುಡುಗಿ ಬಿಡುತ್ತಾಳಾ.. ಅವಳೂ ದೂರವಾಗತೊಡಗಿದಳು. ಇವನು ಅಪ್ಪಿತಪ್ಪಿ ಮದ್ವೆ ಮಾತೆತ್ತಿದ್ದರೆ, ಮರೆಯುವ ನಿನಗೇಕೆ ನನ್ನ ಚಿಂತೆ ಎಂಬ ಮಾತುಗಳು ಇಬ್ಬರಲ್ಲೂ ಕೇಳುತ್ತಿದ್ದವು. ಅಲ್ಲಿಗೆ ಒಂದು ಪ್ರೀತಿಯೋ, ಫ್ಲರ್ಟಿಂಗ್ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿತ್ತು! ಒಂದು ದಿನವಂತೂ ಕರೆ ಮಾಡಿದ ಅವನಿಗೆ ಅವಳು ಎಚ್ಚರಿಕೆಯ ಮಾತುಗಳನ್ನಾಡಿ ನನಗೆ ಇಷ್ಟವಿಲ್ಲ ಎಂದೂ ಹೇಳಿ ಬಿಟ್ಟಳು. ಹಾಗೆ ಹೇಳಿದ್ದೇ ಹುಡುಗ ತಲೆ ಕೆಡಿಸಿ, ಭಾವನಾತ್ಮಕವಾಗಿ ನೂರು ಮೆಸೇಜು ಕುಟ್ಟಿದ, ಏನೂ ಪರಿಣಾಮವಾಗಲಿಲ್ಲ. ತಲೆ ಕೆಟ್ಟುಹೋಯಿತೇನೋ.. ಊಟ ತಿಂಡಿ ನಿದ್ದೆ ಯಾವುದೂ ಬೇಡವಾಯಿತು. ಇವನ ಹಪಾಹಪಿಗೆ ಹುಡುಗಿ ಅದಾಗಲೇ ದೂರ ಹೋಗಿದ್ದಳು.
ಬಸ್ ಸ್ಟ್ಯಾಂಡ್ನಲ್ಲಿ ರೈಲಿಗೆ ಕಾದ!
ಹುಡುಗಿ ವಿಚಾರದಲ್ಲಿ ಆ ಹುಡುಗ ಸ್ವಲ್ಪ ಹುಚ್ಚನಾಗಿದ್ದ ಎಂದು ಬೇರೆ ಹೇಳಬೇಕಿಲ್ಲ ತಾನೇ..? ಅದಕ್ಕೆ ತಕ್ಕಂತೆ ಇವನ ಕನವರಿಕೆಗಳೂ ಇದ್ದವು.. ಅವಳು ಮಾತನಾಡದ, ದೂರ ಹೋದ ವಿಚಾರವೆಲ್ಲ ಅಮ್ಮನ ಬಳಿ ಹೇಳಿದ್ದ. ಅಳಲು ತೋಡಿಕೊಂಡಿದ್ದ. ಅವಳು ಬಿಟ್ಟು ಹೋದ್ದಕ್ಕೆ ಇವನ ಕೆಲ ಸ್ವಭಾವ ಕಾರಣವಾಯಿತು ಎಂದು ಅರ್ಥ ಮಾಡಿಸಿಕೊಳ್ಳುವವರು ಇರಲಿಲ್ಲ. ಹೋಗಲಿ ಬಿಡು ಎಂದು ಆಕೆ ಹೇಳುತ್ತಿದ್ದಳು. ಆದರೆ ಕೇಳುವ ವ್ಯವಧಾನ ಇವನಿಗೆ ಸ್ವಲ್ಪವೂ ಇರಲಿಲ್ಲ. ಅದಾಗಿ ತಿಂಗಳುಗಳು ಕಳೆದರೂ, ಅವಳ ನೆನಪು ಇವನಲ್ಲಿ ಮಾಸಲಿಲ್ಲ. ರಾತ್ರಿ ಎಲ್ಲ ಬರುತ್ತಿದ್ದಳು. ಮಾತನಾಡಿದ ಅನುಭವವಾಗುತ್ತಿದ್ದಂತೆ ಇವನು ಎದ್ದು ಕುಳಿತುಕೊಳ್ಳುತ್ತಿದ್ದ. ಮುಸುಕೆಳೆದರೆ ನಿದ್ದೆ ಇಲ್ಲ.. ರಸ್ತೆಯಲ್ಲಿ, ಕಂಪ್ಯೂಟರಿನಲ್ಲಿ, ತಲೆಯಲ್ಲಿ ಅವಳದೇ ಚಿತ್ರ. ಊರಿಗೆ ಹೋದರೆ ಪೇಟೆ ಕಾಣುವಾಗಲೆಲ್ಲ ಕಣ್ಣರಳಿಸಿ ನೋಡುತ್ತಿದ್ದ ಅವಳೆಲ್ಲಿದ್ದಾಳೋ ಎಂಬಂತೆ. ಒಂದು ದಿನವೂ ಅವಳು ಕಾಣಲಿಲ್ಲ. ಇವನ ಚಡಪಡಿಕೆ ಮುಗಿಯಲೂ ಇಲ್ಲ. ಮೊದಲೆಲ್ಲ ರಾತ್ರೆ ಹನ್ನರೆಡಾದರೂ ಅವಳ ಮೆಸೇಜು ಬರುತ್ತಿತ್ತು.. ಅದೇ ಅಭ್ಯಾಸದಲ್ಲಿ ಬೇರೆ ಯಾವ ಮೆಸೇಜ್ ಬಂದರೂ ಇವನಿಗೆ ಇದು ಅವಳ ಮೆಸೇಜ್ ಇರಬಹುದಾ ಎಂಬ ಕುತೂಹಲ, ಅನ್ನೋನ್ ನಂಬರ್ ಕರೆ ಬಂದರೆ ಬೇರೆ ನಂಬರ್ ನಿಂದ ಕರೆ ಮಾಡುತ್ತಿದ್ದಾಳಾ ಎಂಬ ಸಂಶಯ..ಫೇಸ್ ಬುಕ್ ಲ್ಲಿ ಮಾತನಾಡುತ್ತಾಳಾ ಎಂಬ ಕಾತರ ಸದಾ ಕಾಡುತ್ತಿತ್ತು. ಅವಳು ಮೆಸೇಜೂ ಕಳುಹಿಸುತ್ತಿರಲಿಲ್ಲ ಫೇಸ್ಬುಕ್ನಲ್ಲಿ ಕಂಡರೂ ಮಾತನಾಡುತ್ತಿರಲಿಲ್ಲ. ಇದು ಕೊನೆಗೆ ಹುಡುಗನಿಗೆ ಅಭ್ಯಾಸವಾಗಿ ಪುಣ್ಯಕ್ಕೆ ನನ್ನ ಫ್ರೆಂಡ್ಲಿಸ್ಟ್ನಲ್ಲಾದರೂ ಇದ್ದಾಳಲ್ಲ.. ಎಂದು ಆಕೆ ಆನ್ಲೈನ್ಗೆ ಬಂದಾಗಲೆಲ್ಲ ಮಾತನಾಡದಿದ್ದರೂ ಸಂಭ್ರಮಪಟ್ಟುಕೊಳ್ಳುತ್ತಿದ್ದ.. ಅಷ್ಟಾದರೂ ಅವಳು ಮತ್ತೆಂದಿಗೂ ಬರಲಾರಳು ಎಂಬುದು ತಲೆಗೇ ಹೋಗುತ್ತಿರಲಿಲ್ಲ. ಹುಡುಗ ಏನೋ ಸರಿ ಇಲ್ಲ ಎಂಬುದು ಅದೊಂದು ದಿನ ಮನೆಯವರಿಗೂ ಗೊತ್ತಾಗಿ ಬೇರೆ ಹುಡುಗಿ ನೋಡುವುದು ಎಂಬ ಮಾತನ್ನೆತ್ತಿದ್ದರು. ಮನೆಗೂ ಕರೆಸಿ ಆ ಹುಡುಗಿ ಮರೆಯಲು ಬುದ್ಧಿವಾದ ಹೇಳಿದರು. ಮನೆಯವರ ಯತ್ನ ಯಾವುದೂ ವರ್ಕ್ ಔಟ್ ಆಗಲಿಲ್ಲ. ಪದವಿ, ಎಂ.ಎ ಕಲಿತ  ಹುಡುಗಿಯರು ಎಂದೆಲ್ಲ ಎರಡು ಉತ್ತಮ ಜಾತಕವನ್ನೂ ತಂದು ತೋರಿಸಿದರು. ಇವನದ್ದು ಅದೇ ಧ್ಯಾನ. ಜಾತಕದ ಆ ಹುಡುಗಿಯರು ಯಾರಿಗೇನು ಕಡಿಮೆ ಇಲ್ಲದಿದ್ದರೂ, ಮನದಲ್ಲಿರುವಾಕೆಯೊಂದಿಗೆ ಕೈಕೈ ಹಿಡಿದು ನಡೆದಾಡಿದ ನೆನಪು ಇವನಿಗೆ ಸುಳಿಯುತ್ತಿತ್ತು. ಯಾವ ಹುಡುಗಿಯೂ ನನಗೆ ನೋಡಬೇಡಿ. ನಾನು ಮದುವೆಯೇ ಆಗಲ್ಲ ಎಂದು ಅಪ್ಪ-ಅಮ್ಮನ ಎದುರು ಅಬ್ಬರಿಸಿಯೂ ಬಿಟ್ಟ. ಪಾಪ ಅವರೇನು ಪಾಪ ಮಾಡಿದ್ದರೋ ಹುಡುಗನ ಶೋಚನೀಯ ಪಾಡು ಅವರಿಗೆ ನುಂಗಲಾರದ ತುತ್ತು. ಅವಳು ಬರುವುದಿಲ್ಲ ಎಂಬುದನ್ನು ನಂಬುವುದಿಲ್ಲ. ಬೇರೆ ಮದುವೆಗೂ ಒಪ್ಪುವುದಿಲ್ಲ ಎಂದರೆ ಕಥೆ ಏನು? ಹೇಳಬೇಕಾದವರ ಬಳಿ ಹೇಳಿಸಿದರು. ಬುದ್ಧಿಮಾತು, ಎಚ್ಚರಿಕೆ, ಸಣ್ಣ ಗದರಿಕೆ ಯಾವುದನ್ನೂ ಹುಡುಗ ಕೇಳಲಿಲ್ಲ. ಹಾಗೆ ದಿನ, ತಿಂಗಳು,, ವರ್ಷ ಕಳೆಯಿತು. ಅವಳ ಬಗೆಗಿನ ಒಲವು ಕಡಿಮೆಯಾಯಿತೋ ಗೊತ್ತಿಲ್ಲ. ಅದೊಂದು ಬಾರಿ ಊರಿಗೆ ಹೋದವನಿಗೆ ಅವಳ ದರ್ಶನವಾಗಿತ್ತು. ಇವನಿಗೆ ಹೃದಯ ಬಾಯಿಗೆ ಬರುವುದೊಂದು ಬಾಕಿ. ಇಬ್ಬರೂ ಏನಾದರೂ ಮಾತನಾಡಿಕೊಂಡರೋ, ಅವಳು ಮೊದಲು ಇವನ್ನು ಮಾತನಾಡಿಸಿದಳಾ, ಅಲ್ಲಾ ಇವನೇ ಮಾತನಾಡಿಸಿದನಾ, ಎರಡು ಹನಿ ಕಣ್ಣೀರು ಬಂತಾ ಗೊತ್ತಿಲ್ಲ. ಅದಾಗಿ ನಾಲ್ಕಾರು ದಿನ ಮತ್ತೆ ಮುದುಡಿದಂತಿದ್ದ. ಆದರೆ ಅವಳ ವಿಚಾರ ಗೆಳೆಯರಲ್ಲಿ ಹೇಳಿಕೊಂಡು ಸಂಭ್ರಮದಲ್ಲಿದ್ದ. ಅವಳು ಮತ್ತೆ ಬರುವುದಿಲ್ಲ. ನೀನು ತಲೆಕೆಡಿಸಿಕೊಳ್ಳುವ ಮಾತೇ ಇಲ್ಲ. ಸಾವಧಾನದಿಂದರು ಎಂದು ಅವರೂ ಸಾಕಷ್ಟು ಬುದ್ಧಿವಾದ ಹೇಳಿದರು. ಕೆಲವೊಮ್ಮೆ ಅತಿ ವಿರಹಿ, ಕೆಲವೊಮ್ಮೆ ಅತಿ ಸಂತೋಷ, ವಿಕ್ಷಿಪ್ತ ಭಾವನೆಗಳಿಗೆಲ್ಲ ಅವನ ಮುಖದಲ್ಲಿ ಕಾಣುತ್ತಿತ್ತು. ದಿನಗಳು ಓಡುತ್ತಿದ್ದವು. ಅವನು ಅವನ ಪಾಡಿಗೆ? ಇವಳು ಇವಳ ಪಾಡಿಗೆ ಇದ್ದರು. ಒಂದು ದಿನ ಊರಿನಿಂದ ಇವನ ಗೆಳೆಯನೊಬ್ಬ ಫೋನ್ ಮಾಡಿದ, ಅವಳಿಗೆ ಮದುವೆ ಫಿಕ್ಸ್ ಆಗಿದೆ. ಮುಂದೆ ಅವಳ ಬಗ್ಗೆ ನೀನು ಮಾತನಾಡಕೂಡದು. ನೀನು ಮರೆಯದಿದ್ದರೆ ಬೇಡ. ನಿನ್ನಿಂದಾಗಿ ಅವಳ್ಯಾಕೆ ಹಾಗೇ ಕೂರಬೇಕು? ನೀನು ಇನ್ನಾದರೂ ಸಂಪೂರ್ಣವಾಗಿ ಮರೆಯಬೇಕು ಎಂಬುದಕ್ಕೆ ಈ ವಿಚಾರ ಹೇಳಿದ್ದು ಟೇಕ್ ಕೇರ್ ಎಂದು ಫೋನಿಟ್ಟ. ಇವನ ಮುಖದಲ್ಲಿ ಸಣ್ಣ ವಿಷಾದದ ನಗೆ ಹಾದು ಹೋಯಿತು. ಅದಾಗಿ ಅವಳು ಮದುವೆಯೂ ಆಗಿ ದೂರದ ಊರಿಗೆಲ್ಲೋ ಹೋದಳು. ಇಷ್ಟೆಲ್ಲಾ ಆದರೂ, ಅವಳ ನೆನಪೇ ಇವನ ಜೀವನವಾಗಿ ಹೋಯಿತು. ಹುಚ್ಚು ಪ್ರೀತಿಯ ಅಮಲು ಇಳಿದಿರಲೇ ಇಲ್ಲ!
ಅಂದಹಾಗೆ..
ಮೊನ್ನೆ ಮೊನ್ನೆ ಆ ಹುಡುಗನ ರೂಮಿಗೆ ಹೋಗಿದ್ದೆ. ಒಳಗೆ ಯಾವುದೋ ಹಳೆ ಪಾತ್ರೆ ತಿಕ್ಕುತ್ತಿದ್ದ. ನನಗೆ ನಗು ಬಂತು. ಏನು ಮಾರಾಯ ಇದು. ಮದುವೆ ಆಗದ ಕರ್ಮಕ್ಕೆ ಈ ಅವಸ್ಥೆಯಲ್ಲಿ ಅಂದೆ ಅಷ್ಟಕ್ಕೆ ಅವನ ಮುಖಭಾವ ಬದಲಾಯಿತು. ಹಳೆ ಪಾತ್ರೆ ತಿಕ್ಕುವುದರಲ್ಲಿಯೂ ಖುಷಿ ಇದೆ. ಹಳೆ ನೆನಪುಗಳಂತೆ, ತಿಟ್ಹತ್ತಿ ತಿರುಗಿದಂತೆ, ಅದು ಹೊಳಪು ಕಂಡಾಗೆಲ್ಲ ನೆನಪು ಮತ್ತೆ ಮರುಕಳಿಸುತ್ತದೆ ಎಂದ. ಕಥೆ ಎಲ್ಲ ಹೇಳಿದ. ಬಹುಶಃ ಆ ಹುಡುಗಿ ನೆನಪು ಪಾತ್ರೆಯ ಹೊಳಪಲ್ಲಿ ಕಾಣುತ್ತಿದ್ದಿರಬೇಕು. ನನ್ನೆದುರಿಗೆ ಭಾರೀ ಸೆಕೆ ಅಂದು ಕಣ್ಣೀರು ಒರೆಸಿದ ಪುಣ್ಯಾತ್ಮ! 

ಶುಕ್ರವಾರ, ಏಪ್ರಿಲ್ 27, 2012


ಕಳ್ಳನೋಟು ವ್ಯವಹಾರದ ವೃತ್ತಾಂತವು...

ವಿ.ಸೂ: ಇದು ಮಸಾಲಾ ಕಥೆಯಲ್ಲ.. ಒಂದು ವೇಳೆ ನಿಮಗೆ ಇದು ಸುಳ್ಳೇ ಸುಳ್ಳು ಎಂದು ಕಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ!

ಒಂದಾನೊಂದು ದಿನ.. ಒಂದಾನೊಂದು ಬ್ಯಾಂಕಿಗೆ ವ್ಯವಹಾರ ನಿಮಿತ್ತ ನನ್ನ ಭೇಟಿಯಾಗಿತ್ತು. ಲಕ್ಷಗಟ್ಟಲೆ?, ಸಾವಿರಗಟ್ಟಲೆ? ಹೊರತಾಗಿ ‘ಚಿಲ್ಲರೆ’ ವ್ಯವಹಾರ ಅದು. ಇಂಥದ್ದೊಂದು ವ್ಯವಹಾರಕ್ಕೆ, ಮಹಡಿ ಮೇಲಿನ ಬ್ಯಾಂಕಿಗೆ ಮೆಟ್ಟಿಲೇರಿ ಹೋಗಿ ಹಣಕಟ್ಟುವ 5 ನಿಮಿಷದ ಕೆಲಸಕ್ಕೆ ಟೋಕನ್ ಪಡೆದು ಗಂಟೆಗಟ್ಟಲೆ ಕಾದು ಕುಳಿತಿದ್ದೆ. ಅಂತೂ ನನ್ನ ಸರದಿ ಬಂದು ಹಣ ಕಟ್ಟುವ ಅಮೋಘ ಕಾರ್ಯಕ್ರಮ ಇನ್ನೇನು ಶುರುವಾಗಬೇಕು.. ಕೌಂಟರ್ನೊಳಗೆ ಸ್ಲಿಪ್ ಮತ್ತು 500 ರೂ. ನೋಟನ್ನು ಇಟ್ಟಿದ್ದೆ. ಒಳಗಿದ್ದ ಕ್ಯಾಶಿಯರ್, ಹಣ ತೆಗೆದುಕೊಂಡು, ಸ್ಲಿಪ್ ಬದಿಗೆ ಸರಿಸಿ ನೋಟನ್ನು ಅಮೂಲಾಗ್ರ ಶೋಧನೆಗೆ ಶುರು ಮಾಡಿದ. ಸಾಮಾನ್ಯವಾಗಿ ಎಲ್ಲರೂ ನೋಟನ್ನು ನೋಡಿಯೇ ತೆಗೆದುಕೊಳ್ಳುತ್ತಾರೆ. ಬೇಕಾದರೆ ಆಲ್ಟ್ರಾವಾಯ್ಲೆಟ್ ಮಶೀನ್ ಬಾಯಿಗೊಮ್ಮೆ ತಳ್ಳುತ್ತಾರೆ. ಆದರೆ ಆತನಿಗೆ ಯಾಕೋ ಏನೋ ನೋಟಿನ ಮೇಲೆ ಡೌಟು... ಎರಡು ಬಾರಿ ಅದನ್ನು ಕಿವುಚಿ, ಮಶೀನ್ಗೆ ಇಟ್ಟು.. ನನ್ನತ್ತ ಮುಖ ಮಾಡಿ ಲಿಟ್ಲ್ ಡೌಟ್ಫುಲ್ ಅಂದ.
ಅಂದ.. ಹೋ.. ಇದ್ಯಾಕೋ ಕಷ್ಟವಾಯಿತು ಅಂತಾ ಸುಮ್ಮನಿದ್ದೆ. ಆದರೆ ಅಸಾಮಿ ಬಿಡಲಿಲ್ಲ. ಅವನ ಸನಿಹಕ್ಕೆ ಕೂತ ಕ್ಯಾಶಿಯರ್ ಗಳಿಗೆಲ್ಲ.. ನೋಟನ್ನು ದಾಟಿಸಿ ನೋಡಲು ಹೇಳಿ.. ಬಹುದೊಡ್ಡ ಸಂಶೋಧನೆಯೇ ಮಾಡಿದರು. ಅವರೂ ಮುಖ ಸೊಟ್ಟಗೆ ಮಾಡಿ ನೋಟು ವಾಪಾಸು ಕೊಟ್ಟರು. ಅಲ್ಲಿಗೆ ನನ್ನ ಹಣ ಕಟ್ಟುವ ವ್ಯಾಪಾರಕ್ಕೆ ಸಣ್ಣ ಬ್ರೇಕ್! ಅದಾಗಿ ವಿಚಾರಣೆ ಶುರು ಮಾಡಿದ. ಎಲ್ಲಿ ಸಿಕ್ಕಿತು ಈ ನೋಟು.. ಇತ್ಯಾದಿ.. ನಾನು ಕೆಲಸಮಾಡುವ ಸ್ಥಳದಲ್ಲಿನ ಎಟಿಎಮ್ ಒಂದರಲ್ಲಿ  ತೆಗೆದಿದ್ದು.. ಎಂದು 2 ಬಾರಿ ಸ್ಪಷ್ಟನೆ ನೀಡಿಯೂ ಆಯಿತು. ಆದರೆ ಸಮಾಧಾನವಾಗಲಿಲ್ಲ.
ಸ್ವಲ್ಪ ಹೊತ್ತಿಗೆ ಮ್ಯಾನೇಜರ್ ರೂಮ್ಗೆ ಹೋಗಿ ಅಂದ.. ಸರಿ ಅದರಲ್ಲೇನು ಅಂತಾ ನಾನು ಬಿಡುಬೀಸಾಗಿ ಹೋದೆ. ಒಳಗೆ ಒಂದು ಕಾಲಿಟ್ಟಿಲ್ಲ.. ಎ.ಸಿ.ರೂಮಿನಲ್ಲಿದ್ದ ಮ್ಯಾನೇಜರ್ ವೇರ್ ಡಿಡ್ ಯೂ ಗೆಟ್ ದಿಸ್ ಎಂಬ ಪ್ರಶ್ನೆ ತೂರಿಬಂತು.
ಯಾಕೋ ಸ್ವಲ್ಪ ಎಡವಟ್ಟಾಗುತ್ತಿದೆ ಅಂದುಕೊಂಡು, ಇಟ್ಸ್ ಫ್ರಮ್ ಎಟಿಎಮ್ ಸರ್ ಎಂದೆ. ಹೌ ಮಚ್ ಕರೆನ್ಸಿ ಯು ಹ್ಯಾವ್, ಶೋ ಮಿ ಯುವರ್ ಪರ್ಸ್ ಆ್ಯಂಡ್ ಕರೆನ್ಸೀಸ್... ಎಲ್ಲಾ ಕೇಳಿಯೂ ಆಯಿತು.. ನಾನು 10, 20ರ ಎರಡು ನೋಟು ಅವನತ್ತ ಚಾಚಿದೆ. ಅದು ಬಿಟ್ಟು ಬೇರೆ ಹಣವೂ ನನ್ನಲ್ಲಿರಲಿಲ್ಲ. ಮತ್ತೆ ಎಲ್ಲಿ ಕೆಲಸ, ಪ್ರವರ, ಗೋತ್ರ ಇತ್ಯಾದಿ ವಿಚಾರಣೆಯೂ ಆಯಿತು. (ಅಷ್ಟಕ್ಕೆ ಕಳ್ಳ ನೋಟು ವ್ಯವಹಾರದಲ್ಲಿ ಸಿಕ್ಕಿಬಿದ್ದೆನಾ ಎಂಬ ಸಂಶಯ ಕೊರೆಯ ತೊಡಗಿತ್ತು.) ಯಾಕೋ ಮ್ಯಾನೇಜರ್ ಗೆ ವಿಷಯ ಫಲ ಕಾಣಲಿಲ್ಲ. ಅಷ್ಟರಲ್ಲಿ ಡೆಪ್ಯುಟಿ ಮ್ಯಾನೇಜರ್ ಮತ್ತಿಬ್ಬರು ಚೇಂಬರ್ಗೆ ನುಗ್ಗಿ.. 3ನೇ ಸುತ್ತಿನ ವಿಚಾರಣೆ ಆರಂಭಿಸಿದರು.
ನಾನು ಅಮಾಯಕ ಅಂತಾ ಹೇಳಲೂ ಸಾಧ್ಯವಿಲ್ಲ.. ಕೆಲವೊಮ್ಮೆ ನಗು ಬರುತ್ತಿತ್ತು.. ಪ್ರತಿಯಾಗಿ ಪ್ರಶ್ನೆಯನ್ನೂ ಕೇಳಿದೆ. ಓರ್ವ ಸಾಮಾನ್ಯ ಮನುಷ್ಯ ಸರ್ ನಾನು.. ನನಗೆ ನೋಟಿನ ಬಗ್ಗೆ ಸಂಶಯ/ಕಳ್ಳನೋಟು ಅನ್ನೋದು ಹೇಗೆ ಗೊತ್ತಾಗಬೇಕು. ಗಾಂಧೀಜಿ ವಾಟರ್ ಮಾರ್ಕ್ ಅಡ್ಡಕೆ ಬರೆದ 500 (ಬಾರ್ ಕೋಡ್) ನೋಡುವುದು ಬಿಟ್ಟರೆ ನೋಟಿನ ಬಗ್ಗೆ ನನಗೇನೂ ಗೊತ್ತಿಲ್ಲ ಅಂದೆ. ಅದ್ಯಾವುದಕ್ಕೂ ಅವರ ಬಳಿ ಉತ್ತರವೇ ಇಲ್ಲ. ಮತ್ತೂ ಸ್ವಲ್ಪ ಹೊತ್ತು ಕಳೆಯಿತು. ಯಾಕೋ ಇವರ ವ್ಯವಹಾರ ಮುಗಿಯುತ್ತಿಲ್ಲ ಎಂದೆನಿಸಿತು. ವಾಚು ನೋಡಿಕೊಂಡೆ, ಬ್ಯಾಂಕ್ಗೆ ಬಂದು ಒಂದೂಕಾಲು ಗಂಟೆ ಕಳೆದಿತ್ತು. ಇನ್ನೂ ಇಲ್ಲೇ ಇದ್ದರೆ ನನ್ನ ಕೆಲಸಗಳೆಲ್ಲ ಢಮಾರ್ ಎಂದೆನಿಸಿತು. ಮ್ಯಾನೇಜರ್ ಕೇಳಿದೆ. ನಾನು ಹೊರಡಲಾ ಎಂಬಂತೆ. ವೇರ್ ಆರ್ ಯೂ ಗೋಯಿಂಗ್ ಅಂತಾ ಪುನಃ ಪ್ರಶ್ನೆ. ನನ್ನನ್ನು ಬಿಟ್ಟು ಬಿಡಬಾರದು. ಕಳ್ಳನೋಟಿನ ಖದೀಮ ಸಿಕ್ಕಿದ್ದಾನೆ, ಪೊಲೀಸರಿಗೆ ಫೋನ್ ಮಾಡಲು ಪ್ಲಾನ್ ಇದ್ಯೇನೋ ಅಂದುಕೊಂಡೆ ಇರಲಿಕ್ಕಿಲ್ಲ. ಬರೇ 500ರೂ.ಗೆ ಅಷ್ಟು ದೊಡ್ಡ ಸೀನ್ ಯಾಕೆ ಅಂದುಕೊಂಡೆ. ಮ್ಯಾನೇಜರ್ಗೆ ಸ್ವಲ್ಪ ಕಿಚಾಯಿಸೋಣ ಎಂದೆನಿಸಿತು.. ಕೇಳಿಯೇ ಬಿಟ್ಟೆ ಅಲ್ಲಾ ಸಾರ್, ಕಳ್ಳನೋಟು ವ್ಯವಹಾರ ಮಾಡೋರು ಯಾರಾದ್ರೂ ಬ್ಯಾಂಕ್ಗೆ ಬಂದು ಮಾಡ್ತಾರಾ? ಅಷ್ಟೂ ನಿಮ್ಗೆ ಗೊತ್ತಾಗಲ್ವಾ ? ಮ್ಯಾನೇಜರ್ ಮುಖ ಸ್ವಲ್ಪ ಬಿಳುಚಿತು. ಉತ್ತರ ಹೇಳಲು ಸಾಧ್ಯವಾಗಲಿಲ್ಲ. ಮತ್ತೂ ಸಮಯ ಜಾರಿ ಹೋಗುತ್ತಲೇ ಇತ್ತು. ಕೊನೆಗೆ ಮತ್ತೊಬ್ಬ ಯಾರೋ ಬಂದು ಚೇಂಬರ್ ಮುಂದೆ ನಿಂತ. ಅಷ್ಟಕ್ಕೆ ಹಿಂದೆ ಹೇಳಿದ್ದು ಮ್ಯಾನೇಜರ್ಗೆ ಮರೆತಿತ್ತೋ ಏನೋ ಮತ್ತೆ ಪ್ರಶ್ನೆ ಎಲ್ಲಿ ಕೆಲಸ..? ಐಡಿ ಕಾರ್ಡ್ ಇದೆಯಾ? ಇದೆ ಸಾರ್ ಎಂದು ಐಡಿ ಕಾರ್ಡ್ ಚಾಚಿದೆ. ಕಾರ್ಡ್ ನೋಡಿ ಮ್ಯಾನೇಜರ್ಗೆ ಗಲಿಬಿಲಿ. ಸಾರಿ ಕೇಳಿದ. ನಮಗೆ ಸಂಶಯ ಬಂದರೆ ಸ್ವಲ್ಪ ವಿಚಾರಣೆ ಮಾಡುತ್ತೇವೆ ಡೋಂಟ್ ಮೈಂಡ್ ಸರ್. ಹೀಗೆಲ್ಲ ನನ್ನ ಸಮಾಧಾನ ಮಾಡುವ ಕಾರ್ಯಕ್ರಮ ನಡೆಯಿತು. ನಾನೂ ಏನೂ ಹೇಳಿಲ್ಲ. ನೀವು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೇನೆ ಅಂದೆ. ಕೂಡಲೇ ಸ್ಲಿಪ್ಗೆ ಸೀಲ್, 500ರೂ.ಗೆ ಚೇಂಜ್ ಎಲ್ಲಾ ಕೈಗೆ ಬಂತು. ಕುರ್ಚಿಯಲ್ಲಿ ಕುಳ್ಳಿರಿಸಿ 500 ರೂ. ಒರಿಜಿನಲ್ ನೋಟು? ತಂದು ಇದು ಹೀಗಿದೆ, ನಿಮ್ಮ ನೋಟು ಹೀಗಿದೆ ಎಂದು ಪ್ರಾತ್ಯಕ್ಷಿಕೆ ನಡೆಯಿತು. ನಾನು ಅಡ್ಡಡ್ಡ ತಲೆ ಅಲ್ಲಾಡಿಸಿದೆ. ತೀರ ಸಾಮಾನ್ಯರಿಗೆ ಇದು ಗೊತ್ತಾಗುತ್ತಾ ಅಂತಾ ಕೇಳಿದೆ. ಎಲ್ಲರೂ ಸುಮ್ಮನೆ ನಿಂತರು. ನಾನು ಹೋಗಬೇಕು ಅಂದೆ.. ಮೆಟ್ಟಿಲು ಇಳಿವಲ್ಲಿವರೆಗೆ ಡೆಪ್ಯುಟಿ ಮೆನೇಜರ್ ಬಂದು (ಕಳುಹಿಸಿ ಕೊಡುವ ನೆವ) 2 ಬಾರಿ ಸಾರಿ ಕೇಳಿದ. ನಾನು ಬೈಕ್ ಏರುವಲ್ಲಿವರೆಗೆ ಆತ ಅಲ್ಲೇ ನಿಂತು ನನ್ನ ನೋಡುತ್ತಿದ್ದುದನ್ನು  ಕನ್ನಡಿಯಲ್ಲೇ ನೋಡಿ ನಕ್ಕೆ. ಪುಣ್ಯಕ್ಕೆ ನನ್ನ ಬಳಿ ಆ ಹಾಳು ಎಡವಟ್ಟಿನ ನಾಲ್ಕು 500 ನೋಟಿರಲಿಲ್ಲ.. ಇದ್ದಿದ್ದರೆ ನಾನು ಮುದ್ದೆ ಮೆಲ್ಲುವುದು ಖಚಿತವಾಗುತ್ತಿತ್ತು.