Pages

ಶುಕ್ರವಾರ, ಡಿಸೆಂಬರ್ 2, 2011

ಯುನಾನಿ ಪಂಡಿತ ಕುತ್ತಿಗೆ ಹಿಚುಕಿದ ಕಥೆ..!

ಊರಿಂದ ಬಂದು ನವರಂಗದಲ್ಲಿ ಇಳಿಯುವ ಹೊತ್ತಿಗೆ ಗಂಟೆ ಆರೂಕಾಲು. ಮನೆಗೆ ಹೋಗುತ್ತಲೇ ಪ್ರೀತಿಯ ನಾಯಿ ಕಾಲಿಗೆ ಸೋಕುವಂತೆ ಬಸ್ ಇಳಿಯುವಾಗಲೇ ಸಾರ್ ಬನ್ನಿ ಸಾರ್ ಅಟೋ ಬೇಕಾ.. ಅನ್ನುವ ಜನ. ನವರಂಗದಿಂದ ನನ್ನ ರೂಮಿಗೆ  ಒಂದು ಕಿಲೋಮೀಟರ್ ದೂರ. ಊರಿಂದ ಎಷ್ಟು ಹೊತ್ತಿಗೆ ಬಂದಿಳಿದರೂ ನನ್ನ ಪಾದಯಾತ್ರೆ ಶತಸಿದ್ಧ. ಬೆಳ್ಳಂಬೆಳಗ್ಗೆಯೇ ಸ್ಮಶಾನ ದರ್ಶನ (ಹರಿಶ್ಚಂದ್ರ ಘಾಟ್) ಮುಗಿಸಿ ಮನೆಗೆ ತೆರಳುತ್ತಿದ್ದೆ. ಅಷ್ಟರಲ್ಲಿ ಗೆಳೆಯನ ಫೋನು. ಬೆಂಗಳೂರಿಗೆ ಬಂದಿದ್ದೇನೆ ನಿನ್ನ ಮನೆಗೆ ಬರುತ್ತೇನೆ ಎರಡು ದಿನ ಕೆಲಸವಿದೆ. ನಿನ್ನ ಮನೆ ಯಾವ ಏರಿಯಾ ಎಂದು ಗೊತ್ತಿಲ್ಲ ಎಂದ. ನಾನೇ ರೈಲ್ವೇ ಸ್ಟೇಷನ್ಗೆ ಬಂದು ಕರೆದುಕೊಂಡು ಹೋಗುತ್ತೇನೆ ಅಂದೆ. ಅಂತೂ ನನ್ನ ಕೆಲಸ ಮುಗಿಸಿ ಬೈಕು ಸ್ಟಾರ್ಟ್ ಮಾಡಿ ಹೊರಟೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಬಳಿ ಬೆಂಗಳೂರಿಗರ ಬೆಳಗ್ಗಿನ ಪಡಿಪಾಟಲುಗಳನ್ನು ನಿಂತುಕೊಂಡು ನೋಡುತ್ತಿದ್ದ ಅವನನ್ನು ಕುಳ್ಳಿರಿಸಿಕೊಂಡು ಬಂದಿದ್ದೆ. ದಾರಿ ಮಧ್ಯೆಯೇ ಬೆಂಗಳೂರು ಕಡೆಗೆ ಪಾದ ಬೆಳೆಸಿದ ಕಾರಣವನ್ನು ಆತ ಹೇಳತೊಡಗಿದ.
ಎಂಥದ್ದೋ ತಲೆನೋವು ಮಾರಾಯ. ನಮ್ಮ ಕಡೆಯಲ್ಲೊಬ್ಬರು ಇಂತಿಂಥವರನ್ನು.. ಇಂಥಕಡೆಯಲ್ಲಿ ಹೋಗಿ ಕಾಣು ಎಂದು ಹೇಳಿದ್ದಾರೆ. ಅಲ್ಲಿಗೊಮ್ಮೆ ಹೋಗಬೇಕು. ನಾನೂ ತಲೆ ಅಲ್ಲಾಡಿಸಿದ್ದೆ. ಊರಿನಿಂದ ಬಂದಿರುವವರಿಗೆ, ಹೆಚ್ಚೇಕೆ ಬೆಂಗಳೂರಿನಲ್ಲಿ  ಇರುವವರಿಗೇ ಇಲ್ಲಿನ ವಿಳಾಸ ಪತ್ತೆ ಮಾಡುವುದು ಕಷ್ಟ.  ಸರಿ ಆ ಯುನಾನಿ ಪಂಡಿತನ ಅನ್ವೇಷಣೆಗೆ ಶುರು ಮಾಡಿದ್ದವು.. ಹೆಚ್ಚೇನೂ ಕಷ್ಟವಾಗಲಿಲ್ಲ.  ಬ್ರಿಗೇಡ್ ರೋಡ್ನಿಂದಾಚೆಗೆ ರಿಚ್ಮಂಡ್ ಸರ್ಕಲ್ ರೋಡ್ ಬಳಿಯ ಸಂದು ಗೊಂದಿಗಳಲ್ಲಿ ತಡಕಾಡಿದಾಗ ಪಂಡಿತ ಸಿಕ್ಕಿದ್ದ. ನನಗೆ ಮೊದಲಿಗೆ ಅನಿಸಿತ್ತು ಇವ ಏನು ಔಷಧ ಕೊಡಬಹುದು ಎಂಬಂತೆ. ಕಾರಣ ಒಂದು ಮುರುಕಲು ಮನೆ. ಬೈಕ್ ನಿಲ್ಲಿಸಿ ಬಾಗಿಲು ತೆರೆದರೆ ಕಿಟಾರನೆ ಕಿರುಚಿ ತೆಗೆದುಕೊಂಡಿತ್ತು. ಅದರ ಬದಿಯಲ್ಲೇ ಒಂದು ಸಣ್ಣ ಕೋಣೆಯ ಮಂಚದಲ್ಲಿ ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಸುಮಾರು 65-70ರ ಪ್ರಾಯದ ವ್ಯಕ್ತಿ ಕೂತಿದ್ದ. ನಮ್ಮನ್ನು ಕಂಡಕೂಡಲೇ ‘ಆವೋ ಆವೋ...  ಮಂಗಳೂರಿಂದ ಬಂದಿದ್ದೀರಾ..?’ ಪ್ರಶ್ನೆ.. ನಾನು ಎಲಾ ಇವನಾ ಅಂದುಕೊಂಡೆ..! ನಮ್ಮನ್ನು ನೋಡಿದ ಒಂದೇ ಬಾರಿಗೆ ಮಂಗಳೂರಿನವರು ಎನ್ನಬೇಕಾದರೆ ಅದೂ ಒಂದು ಮಾತು ಮಾತನಾಡದೇ.. ಭಲೇ ಅಂದುಕೊಂಡಿದ್ದೆ. ಆತನ ಕೋಣೆಯೊಳಗೆ ಹೋಗಲು ಜಾಗವೂ ಇರಲಿಲ್ಲ.  ಘಾಟು ವಾಸನೆ ಬೇರೆ..  ಇಬ್ಬರನ್ನೂ ಒಳಗೆ ಕುಳ್ಳಿರಿಸಿ ಕೇಳಿದ ಪ್ರಯಾಣ ಹೇಗಿತ್ತು ಇತ್ಯಾದಿ.. ಮತ್ತೆ ಅವನೊದ್ದೊಂದು ಪ್ರಶ್ನೆ ನಿಮಗೆ ತಲೆನೋವಾ.. ಸ್ವಾಮಿ ಕಳಿಸಿದ್ದಾರಾ ಎಂದು ಉರ್ದು, ಕನ್ನಡ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಗೆಳೆಯನನ್ನು ಕೇಳಿದ ನನಗೆ ಮತ್ತೆ ಕುತೂಹಲ. ಅಸಾಮಿ ಸಾಧಾರಣದ್ದಲ್ಲ ಎಂದು ತೀರ್ಮಾನಿಸಿಕೊಂಡೆ. ಒಂದೋ ಕಳುಹಿಸಿದವರು ಈತನಿಗೆ ಫೋನು ಮಾಡಿರಬೇಕು.. ಇತ್ಯಾದಿ ಎಲ್ಲ ನನ್ನ ತಲೆಯಲ್ಲಿ ತಿರುಗುತ್ತಿತ್ತು. ಅಷ್ಟರಲ್ಲಿ ಅವನೇ ಸಂಶಯ ಪರಿಹಾರ ಮಾಡಿದ.. ನನಗೆ ನೀವು ಕಳುಹಿಸಿದ ಜನ ಯಾರು ಎಂದೇ ಗೊತ್ತಿಲ್ಲ.. ಈ ಮೊದಲು ನಾಲ್ಕು ಮಂದಿ ಇಲ್ಲಿಗೆ ಬಂದಿದ್ದಾರೆ. ನಾನು ಅವರನ್ನು ನೋಡಿಯೂ ಇಲ್ಲ, ಮಾತಾಡಿಯೂ ಇಲ್ಲ. ಆದರೆ ನನ್ನ ಮೇಲಿನ ನಂಬಿಕೆಯಿಂದ ನಿಮ್ಮನ್ನು ಕಳುಹಿಸಿದ್ದಾರೆ ಎಂದು ಕಿರುನಗೆಯಲ್ಲೇ ಹೇಳಿದ.
ಉಭಯ ಕುಶಲೋಪರಿ ಎಲ್ಲ ಕೇಳಿ ಬಳಿಕ ಆತ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ.. ನಿಮ್ಗೆ ನಾಳೆ ಔಷಧ ಹಾಕ್ತಾನು.. ಬೆಳಗೆ 7 ಗಂಟೆಗೆ ತಿಂಡಿ ತಿಂದು ಇಲ್ಗೇ ಬನ್ನಿ ಇತ್ಯಾದಿ’ ಇದನ್ನೆಲ್ಲ ಹೇಳುವಷ್ಟರ ಹೊತ್ತಿಗೆ 2 ಬಾರಿ ಬಾಯಿಗೆ ಹೊಗೆಸೊಪ್ಪು ‘ಮಧು‘ ಇಟ್ಟು ನಾಲ್ಕು ಬಾರಿ ಅದನ್ನು ಕರಂಡಕಕ್ಕೆ ಉಗುಳಿದ್ದ. ಆತನ ಹಾವ ಭಾವ ಮಾತನಾಡುವ ಶೈಲಿ ಎಂಥವರನ್ನೂ ಮರುಳುಗೊಳಿಸಿವಂತಿತ್ತು. ಅಷ್ಟರಲ್ಲೇ ಆತ ‘ವಿಷಯ’ಕ್ಕೆ ಬಂದ. ನಿಮ್ಮ ಚಿಕಿತ್ಸೆಗೆ ಮೂರು ಸಾವಿರ ಆಗುತ್ತದೆ.! ನನಗೆ ಎದೆ ಧಸಕ್ಕೆಂದಿತು.  ಒಂದು ಬಾರಿ ಗೆಳೆಯನ ಮುಖ ನೋಡಿದೆ. ಅವ ಹಣ ನೀಡಲು ಬ್ಯಾಗು ತಡಕಾಡುತ್ತಿದ್ದ. ನಾನು ಸುಮ್ಮನೆ ಕೂತೆ.
ಈ ನಡುವೆ ಯುನಾನಿ ಪಂಡಿತನ ಗಮನ ನನ್ನೆಡೆಗೆ ತಿರುಗಿತ್ತು. ಯೂ ಆರ್ ಲುಕಿಂಗ್ ಸೋ ಎನೆರ್ಜೆಟಿಕ್.. ಬಟ್.. ನಾಟ್ ವೆರಿ ಹ್ಯಾಪಿ ಎನ್ನುತ್ತಲೇ ಎದ್ದುನಿಂತು ನನ್ನತ್ತ ತಿರುಗಿ ಕುತ್ತಿಗೆ ಹಿಡಿದುಕೊಂಡ.. ಇದ್ಯಾಕೋ ಎಡವಟ್ಟಾಗುತ್ತಿದೆ ಅನ್ನಿಸತೋಡಗಿತು.. ಗೆಳೆಯನ ಬಳಿ ಕೈ ಭಾಷೆ ಮಾಡುತ್ತಿದ್ದೆ. ಪಂಡಿತ ಒಂದು ಉಸಿರು ತೆಗೆದು ಹಿಡಿತ ಮತ್ತಷ್ಟು ಬಿಗಿ ಮಾಡಿದ ಮನೆಯರೆಲ್ಲ ಕಣ್ಮುಂದೆ ಬಂದರು ಅಷ್ಟೇ.. ನನ್ನ ಕಣ್ಣು ಮೇಲಕ್ಕೆ ಹೋಯಿತು.. ಭರ್ತಿ 15-20 ಸೆಕೆಂಡಾಗಿರಬೇಕು.. ಆತ ಪಟ್ಟು ಸಡಿಲಿಸಿದ. ನನ್ನ ಹೋದ ಜೀವ ಮರಳಿ ಬಂದಿತು ಅಬ್ಬಾ ದೇವರೆ.. ಇವನ ಚಿಕಿತ್ಸೆಯೇ ಬೇಡಪ್ಪಾ ಅಂದುಕೊಂಡೆ. ನನಗೆ ಪ್ರಾಣಾಂತಿಕವಾದ್ದನ್ನು ನೋಡಿ ಚಿಕಿತ್ಸೆ ತೆಗೆದುಕೊಳ್ಳಲಿರುವ ಗೆಳೆಯ ಬೆಪ್ಪಾಗಿದ್ದ.. ನಾಳೆ ಬರುವುದೋ ಬೇಡವೋ ಎನ್ನುವಲ್ಲಿವರೆಗೆ ಬಂದಿದ್ದ.
ಆದರೆ ಬಂದ ಕಾರ್ಯವಾಗಬೇಕು ನೋಡಿ. ಬ್ಯಾಂಗ್ನಿಂದ ಅಡ್ವಾನ್ಸ್ ಎಂದು ಐನೂರರ ಎರಡು ನೋಟುಗಳನ್ನು ಕೊಟ್ಟೇ ಬಿಟ್ಟ.. ಪಂಡಿತ ಹಣ ತೆಗೆದುಕೊಂಡವನೇ ತನ್ನ ಸನಿಹದ ಲಟಾರಿ ಕಪಾಟಿಗೆ ಅದನ್ನು ಎಸೆದುಬಿಟ್ಟ.. ಅದರಲ್ಲಿದ್ದ ರಾಶಿ ಔಷಧ ಡಬ್ಬಿಗಳು, ಪೇಪರ್, ಎಂಥದ್ದೋ ಬಾಕ್ಸ್ ಬದಿಗೆ ಹೋಗಿ ನೋಟುಗಳು ಬಿದ್ದಿದ್ದವು. ನನಗೆ ತೀರ ಅಚ್ಚರಿ. ಕೊಟ್ಟ ಹಣವನ್ನು ಹೀಗ್ಯಾರಾದರೂ ಎಸೆಯುತ್ತಾರಾ..? ಬಹುಶಃ ನನ್ನ ನೋಟ ಅವನಿಗೆ ಅರ್ಥವಾಗಿರಬೇಕು. ವೇದಾಂತ ಮಾತನಾಡಲು ಶುರುವಿಟ್ಟುಕೊಂಡ ‘ಮನಿ ಇಂಪಾರ್ಟ್ಟೆಂಟ್ ನಹೀ ಹೆ.. ಒಳ್ಳೆ ಮನಸ್ಸು ಬೇಕು. ಸಂಪಾದ್ನೆ ಮಾಡ್ತಿದ್ರೆ ನಾನು ರಾಜ ಆಗ್ತಿದ್ದೆ.. ಆಗ ಸಂಪಾದನೆ ಮಾಡಿಲ್ಲ. ನನ್ನ ತಲೆತಲಾಂತರದ ವೃತ್ತಿಯನ್ನು ನಡೆಸಿಕೊಂಡು ಬರಬೇಕಿತ್ತು. ಉಳಿದವರೆಲ್ಲ ಏನೇನೋ ಹೇಳಿ ಸಂಪಾದನೆ ಮಾಡುವಾಗ ಸಂಪಾದನೆ ಮಾಡಬೇಕಿತ್ತು ಅನಿಸುತ್ತದೆ.. ಈಗ ಕಾಲ ಕಳೆದುಹೋಗಿದೆ. ದುಡ್ಡಿನ ಅವಶ್ಯಕತೆ ನನಗಿಲ್ಲ.. ಸಾಯುವ ವರಗೆ ಸೇವೆ ಮಾಡಿಕೊಂಡಿರುತ್ತೇನೆ. ನಿಮ್ಮ ಕೈಂದ ಪಡೆದ ದುಡ್ಡು ಔಷಧ ರೆಡಿ ಮಾಡೋಕೆ’ ಅಷ್ಟರಲ್ಲಿ ನನಗ್ಯಾಕೋ ಈತ ಬಹಳ ವಿಚಿತ್ರ ಮನುಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದೆ.
ಅದಾಗಿ ಮರುದಿನ ಬೆಳಗ್ಗೆ ಹೋಗಿ ಗೆಳೆಯ ಔಷಧ ಪಡೆದಿದ್ದೂ ಆಯ್ತು.. ನೀವು ಸೋಲ್ಜರ್ ಥರಾ, ಐ ವಿಲ್ ಮೇಕ್ ಯು ಪರ್ಫೆಕ್ಟ್ ಎನ್ನುತ್ತ ಅಮೋಘ 2 ನೇ ಬಾರಿಗೆ ಕುತ್ತಿಗೆ ಹಿಚುಕಿದ್ದ. ಆದರೆ ಆ ಅನುಭವ ಮರೆಯಲು ಸಾಧ್ಯವೇ ಇಲ್ಲ. ಪ್ರಾಣ ಹೋಗುತ್ತದೆ ಎಂದೆನಿಸಿದರೂ, ಆತ ಕೈಬಿಟ್ಟ ಬಳಿಕ ಮನಸ್ಸಿಗೆ ಬಹಳ ಮುದವಾಗುತ್ತಿತ್ತು. ಒಂಥರಾ ಸ್ನಾನ ಮಾಡಿ ಬಂದು ಫ್ಯಾನ್ ಅಡಿಯಲ್ಲಿ ಕೂತರೆ ಆಗುವ ಅನುಭವದಂತೆ. ಫುಲ್ ರಿಫ್ರೆಶ್ ಅಂತಾರಲ್ಲ ಹಾಗೆ. ಸಾಲದ್ದಕ್ಕೆ ತುಮಾರಾ ಐ ಸೈಟ್ ಶಾರ್ಪ್ ಕರೇಗಾ ಎಂದು ಹೇಳುತ್ತಾ ಎಂಥದ್ದೋ ಔಷಧವನ್ನು ಬೇಡ ಬೇಡವೆಂದರೂ ಬಿಟ್ಟಿದ್ದ. 10 ನಿಮಿಷ ನನಗೆ ಕಣ್ಣೇ ಕಂಡಿರಲಿಲ್ಲ.. ಉರಿಯೋ ಉರಿ. ಈ ಜನ್ಮದಲ್ಲಿ ಆ ಕಡೆ ತಲೆಹಾಕಿ ಮಲಗಲ್ಲ ಅಂದುಕೊಂಡಿದ್ದೆ. ಅಲ್ಲಿಗೆ ಆ ದಿನದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದೆ. ಅಂದಹಾಗೆ 2ನೇ ದಿನವೂ ಪಂಡಿತನ ಲಟಾರಿ ಕಪಾಟು ನನ್ನ ಕಣ್ಣಿಗೆ ಬಿದ್ದಿತ್ತು. ಅಚ್ಚರಿ ಎಂದರೆ, ಹಿಂದಿನ ದಿನ ಮುದ್ದೆ ಮಾಡಿ ಬಿಸಾಕಿದ್ದ ಐನೂರರ ನೋಟು ಹಾಗೇ ಬಿದ್ದುಕೊಂಡಿದ್ದವು. ನಿನ್ನೆ ಬಿಸಾಕಿದ ರೀತಿ ನಮ್ಮೆದುರಿಗೆ ಸ್ಪೆಷಲ್ ಆಗಿ ತೋರಿಸಿದ್ದಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು.     
ಮತ್ತೆ ಮೂರನೇ ದಿನ ಕಿಷ್ಕಿಂಧೆಯಂಥಾ ಅವನ ಕೋಣೆಯೊಳಗೆ ನುಗ್ಗಿದ್ದೂ ಆಯ್ತು.. ಮತ್ತಿನ್ನೇನೋ ಔಷಧವನ್ನೂ ನೀಡಿದ್ದ.. ಅಲ್ಲದೇ ನನಗೂ ಸಣ್ಣ ಬಾಟಲಿಯಲ್ಲಿ ಕಂದು ಬಣ್ಣದ ಎಂಥದ್ದೋ ಔಷಧ ನೀಡಿ ಇದನ್ನು ಕಣ್ಣಿಗೆ ಹಾಕಿ.. ಒಳ್ಳೇದಾಗ್ತದೆ ಅಂದಿದ್ದ. ನನಗಾವಾಗಲೇ ಇದು ಅದೇ ಉರಿ ಔಷಧ ಎಂದು ಗೊತ್ತಾಗಿತ್ತು. ಅಲ್ಲಿಗೆ ನಮ್ಮ ಅಭಿಯಾನ ಮುಕ್ತಾಯಗೊಂಡಿತ್ತು. ಮೂರು ದಿನಗಳ ಭೇಟಿಯಾದರೂ, ವೇದಾಂತ, ಹಿತವಚನ, ಬದುಕು ಕಷ್ಟಕಾರ್ಪಣ್ಯ, ನಾವು ಆಫ್ಘಾನಿಸ್ತಾನದವರು, ಎಲ್ಲಿಂದಲೋ ಬಂದು ಎಲ್ಲಿಗೋ ತಲುಪುವವರು.. ಹಾಗೆ ಹೀಗೆ ಎಲ್ಲಾ ಅಲ್ಲಾನ ದಯೆ ಎನ್ನುವಲ್ಲಿವರೆಗೆ ಬಂದಿದ್ದ. ಉಳಿದ ಹಣವನ್ನೂ ನೀಡುತ್ತಿರುವಾಗಲೇ, ನನ್ನ ಔಷಧದಿಂದ ನಿಮಗೆ ಫಲಿತಾಂಶ ಸಿಗದಿದ್ದರೆ ಹಣ ವಾಪಸ್ ಎಂದು ಕೈಮೇಲೆ ಕೈಯಿಟ್ಟು ಹೇಳಿದ್ದ.
ನನಗೆ ಅತೀವ ಕುತೂಹಲಕ್ಕೆ ಕಾರಣವಾದ ಯುನಾನಿ ಪಂಡಿತ ಸಾಧಾರಣದವನಲ್ಲ ಎಂಬುದು ಖಚಿತವಾಗಿತ್ತು. ಒಂದು ಅತ್ಯುದ್ಭುತ ಜೀವನಾನುಭವ, ಎಂಥವರನ್ನೂ ಒಲಿಸಿಕೊಳ್ಳುವ ತಾಕತ್ತು ಅವನಿಗಿದೆ ಅನಿಸಿತ್ತು. ಆತ ಕೊಟ್ಟ ಔಷಧ ಕಣ್ಣಿಗೆ ಹಾಕದಿದ್ದರೂ (ಉರಿಯ ಹೆದರಿಕೆ) ಮನೆಯಲ್ಲಿಟ್ಟಿರುವ ಆ ಬಾಟಲ್ ಆತನನ್ನು ಪದೇ ಪದೇ ನೆನಪಿಸುತ್ತಿದೆ.





ಮಂಗಳವಾರ, ನವೆಂಬರ್ 29, 2011

ಕಳೆದು ಹೋದ ಅವಳ ನೆನಪಲ್ಲಿ...

ತ್ತೆ ಮತ್ತೆ ಅವಳ ನೆನಪು.. ಅದು ಕಾಡುವ ನೆನಪು.. ಒಂದೊಮ್ಮೆ ಮರೆತು ಹೋದರೂ, ಕೆಲವೊಮ್ಮೆ ನೆನಪಾಗಲೇ ಬೇಕು.. ಅವಳಂಥವಳನ್ನು ಕಂಡಾಗಲಾದರೂ ನೆನಪಾಗಬೇಕು. ಅಂಥಾ ಒಂದು ಸ್ಥಿತಿಗೆ ನಾನು ಬಂದಿದ್ದೇನೆ. ಬೆಂಗಳೂರಿಗೆ ಬಂದ ಸಮಯದಲ್ಲಿ ಅವಳ ಬಗ್ಗೆ ಹಲವು ಕನಸು.. ಬೀದಿ ಬೀದಿಗಳಲ್ಲಿ ಅವಳ ಜೊತೆ ಓಡಾಡಬೇಕು. ವಾರದ ರಜೆ ದಿನ ಅವಳೇ ಎಲ್ಲ ಇತ್ಯಾದಿ. ನಿರೀಕ್ಷೆ ನಿಜವಾಗಲು ಹೆಚ್ಚು ದಿನವೇನೂ ಹಿಡಿಯಲಿಲ್ಲ. ಶಿವಾಜಿನಗರದ ಬೀದಿ ಬದಿಯಲ್ಲಿ ಸಾಗುತ್ತಿದ್ದವನಿಗೆ ನೀರಿಕ್ಷಿಸಿದವಳೇ ಸಿಕ್ಕಿದ್ದಳು. ಒಂದಲ್ಲ ನಾಲ್ಕಾರು ಬಾರಿ ಅಲೋಚನೆ. ಇವಳು ಆಗಬಹುದಾ ಎಂಬಂತೆ. ನಿನ್ನ ಸ್ಥಿತಿ ಗತಿಗೆ ಅವಳೇ ಆಗಬಹುದು ಮಾರಾಯಾ ಅಂತಾ ಗೆಳೆಯ ರಾಗ ತೆಗೆದಿದ್ದ. ಮುಂದಿನ ಒಂದು ಶುಭ ಸಂದರ್ಭದಲ್ಲಿ ಅವಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಅದಕ್ಕಿಂತಲೂ ಮೊದಲು ಅವಳ ಬಗ್ಗೆ ಮನೆಯಲ್ಲಿ ಅಪ್ಪ-ಅಮ್ಮನಿಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ ಹೇಳಿಯೂ ಇದ್ದೆ. ಮೊದಲಿಗೆ ಅಪ್ಪ ಬೇಡ ಎಂದರೂ ನನ್ನ ಮಾತಿಗೆ ಕಟ್ಟು ಬಿದ್ದು ನಿನಗೆ ಒಳ್ಳೆದಾಗುವುದಾದರೆ ಆಗಲಿ ಅಂದಿದ್ದರು. ಸರಿ. ಮತ್ತಿನ್ಯಾರನ್ನೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗೆಳೆಯನನ್ನು ಕೂಡಿಕೊಂಡು ಅವಳನ್ನು ನೋಡಲೊಮ್ಮೆ ಹೋಗಿದ್ದೆ. ಮೊದಲೇ ಇಷ್ಟವಾದವಳು ಅಲ್ಲವೇ? ಮತ್ತೆ ತಡಮಾಡಲಿಲ್ಲ. ನನ್ನೊಂದಿಗೆ ಬರುತ್ತೀಯಾ ಎಂದು ಕೇಳಿದೆ. ಆಕೆಗೂ ಮನಸ್ಸಿತ್ತು. ಮಾರನೇ ದಿನ ಹೋದಾಗ ಬಾಗಿಲಲ್ಲೇ ನಿಂತಿದ್ದಳು. ನಾನು ಅಪಾರ ಖುಷಿಯಿಂದ ಅವಳನ್ನು ಕರೆದುಕೊಂಡು ಬಂದೆ.
ನಿಜವಾದ ಕಥೆ ಶುರುವಾಗುವುದೇ ಇನ್ನು, ಅವಳು ಬಂದ ಮೇಲಿನ ಸಂಭ್ರಮ ಹೇಳಬೇಕೆ. ಸಣ್ಣ ಮಕ್ಕಳಿಗೆ ಪ್ರೀತಿಯ ವಸ್ತುಕೊಟ್ಟರೆ ಆಗುವಷ್ಟೇ ಸಂತಸ ನನಗಾಗಿತ್ತು. ದಿನವೂ ಅವಳೊದಂದಿಗೆ ಸಂಭ್ರಮಿಸುವುದೇನು, ಕನ್ನಿಂಗ್ಹ್ಯಾಮ್ ರಸ್ತೆಯಿಂದ ಪ್ಯಾಲೇಸ್ ರೋಡ್ನವರೆಗೆ, ಕಬ್ಬನ್ ಪಾರ್ಕ್, ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ಕೈಕೈ ಹಿಡಿದು ಅಡ್ಡಾಡಿದ್ದೇನು ಒಂದಾ ಎರಡಾ. ಆಫೀಸ್ಗೂ ಅವಳ ಜೊತೆಯೇ ಹೋಗುವುದೆಂದು ಬಳಿಕ ನಿರ್ಧಾರ ಮಾಡಿಕೊಂಡೆ. ಹೋಗುವುದು ಬರುವುದು ಜೊತೆಯಲ್ಲೇ. ದಿನಕಳೆದದ್ದೇ ಗೊತ್ತಾಗಲಿಲ್ಲ. ನಾನು ಇವಳ ಜೊತೆ ಬರುವುದೆಂದು ಆಫೀಸ್ನಲ್ಲಿ ಕೆಲವರಿಗೆ ತೀವ್ರ ಕುತೂಹಲ ಹುಟ್ಟಿತ್ತು. ಸೆಕ್ಯುರಿಟಿ ಗಾರ್ಡ್ ನಿಂದ ಹಿಡಿದು, ಬಾಸ್.. ಎಲ್ಲರೂ ನನ್ನನ್ನು ನೋಡುವವರೇ. ಕೆಲವರು ಮನಸ್ಸು ತಡೆಯಲಾರದೆ ಕೇಳಿಬಿಟ್ಟಿದ್ದರು. ಹೇಗಿದೆ ಲೈಫು ಎಂಬತೆ. ಇನ್ನು ಕೆಲವರು ನನ್ನದೇ ಮನಸ್ಥಿತಿಯವರು ಇಂಥವಳು ನಮಗೂ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದೂ ಹೇಳಿದ್ದರು. ಅಷ್ಟರ ಮಟ್ಟಿಗೆ ನಾನು ಅದೃಷ್ಟವಂತ.
ಹೀಗೆ ದಿನಗಳು ಉರುಳುತ್ತಿದ್ದಂತೆ, ಸಂತೋಷವೂ ಹಾಗೇ ಇರಬೇಕೆಂದೇನಿಲ್ಲವಲ್ಲ.. ಅಷ್ಟಕ್ಕೂ ಆ ಘಟನೆ ನಡೆದೇ ಹೋಗಬಹುದೆಂಬ ಅನುಮಾನವೂ ನನಗಿರಲಿಲ್ಲ. ನಾನಿದ್ದ ಮನೆ, ನೆರೆಕರೆಯವರಿಗೂ ಇವಳು ಇಷ್ಟವಾಗಿದ್ದಳು. ನಾನು ಇವಳೊಂದಿಗೆ ಹೋಗುವಾಗ ಬರುವಾಗ ಎಲ್ಲರೂ ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿದ್ದರು. ನಾನೂ ಒಳಗೊಳಗೇ ಸಂಭ್ರಮಿಸುತ್ತಿದ್ದೆ. ನನ್ನ ಗೆಳೆಯರಂತೂ ನನಗಿಂತಲೂ ನನ್ನ ಖುಷಿಯ ಮನಸ್ಥಿಗೆ ಸಂಭ್ರಮಪಟ್ಟಿದ್ದರು. ಆದರೆ...
ಆ ದಿನ ಬಂದೇ ಬಿಟ್ಟಿತು.  ಅಂದು ನಾನು ಅವಳೊಂದಿಗೆ ಆಫೀಸಿಗೆ ಹೋಗೇ ಇರಲಿಲ್ಲ. ಬೆಳಗ್ಗೆ ಎಲ್ಲೋ ಸುತ್ತಾಡಿ, ಅಲ್ಲಿಂದಲೇ ಆಫೀಸಿಗೆ ಹೋಗಿದ್ದೆ. ಅವಳು ಮನೆಯಲ್ಲಿದ್ದಳು. ಹೋಗುವಾಗ ನನಗೆ ಕಂಪನಿಯಿಲ್ಲ ಎಂದು ಅನಿಸುತ್ತಿತ್ತು. ಇಂದು ಒಂದೇ ದಿನ ಮಾತ್ರ ಹೀಗೆ ನಾಳೆಯಿಂದ ಅವಳ ಕಂಪನಿ ಇದ್ದೇ ಇದೆಯಲ್ಲ ಅಂದುಕೊಂಡಿದ್ದೆ.
ಅಂದು ನನಗೆ ಮಧ್ಯಾಹ್ನ ಮೇಲೆ ಕೆಲಸ. ಮಧ್ಯಾಹ್ನ ಎರಡೂವರೆ ಹೊತ್ತಿಗೆ ಆಫೀಸಿಗೆ ತಲುಪಿ, ರಾತ್ರಿ ಹನ್ನೆರಡು ಗಂಟೆ ಪರ್ಯಂತ ನಿರಂತರ ದುಡಿಮೆ ಮಾಡಿ ಮನೆಗೆ ಹೊರಟಿದ್ದೆ. ಆಫೀಸ್ನ ಮೆಟ್ಟಿಲಿಳಿಯುತ್ತಿರುವಾಗಲೊಮ್ಮೆ ಮತ್ತೆ ಅವಳ ನೆನಪು. ಛೇ ಇವತ್ತಿಲ್ಲ ಅವಳು ಎಂಬಂತೆ. ಸರಿ ಬೀದಿ ದೀಪದ ಬೆಳಕಿನಲ್ಲೇ ಅವರಳನ್ನು ನೋಡುವ ನೆವದಲ್ಲಿ ಅವಸರವಸರವಾಗಿ ನಡೆದುಕೊಂಡು ಹೋಗಿದ್ದೆ. ಇನ್ನೇನು ಮನೆ ತಲುಪಲಿದೆ ಅನ್ನುವಷ್ಟರಲ್ಲಿ ಮನಸ್ಸು ಭಾರವಾಗಿತ್ತು.. ಏನೋ ಆಗಬಾರದ್ದು ಆಗಿದೆ ಎಂಬಂತೆ. ಹಾಗಾದಿರಲಪ್ಪಾ, ಅವಳು ಚೆನ್ನಾಗಿರಲಿ ಅಂತ ಮನದಲ್ಲೇ ಅಂದುಕೊಂಡಿದ್ದೆ. ಕೆಲವೊಮ್ಮೆ ಗ್ರಹಿಸಿದ್ದು ನಿಜವಾಗುತ್ತದಂತೆ.. ಇಲ್ಲೂ ಹಾಗೇ ಆಯಿತು. ನನ್ನ ಕನಸು ಚೂರು ಚೂರಾಗಿತ್ತು. ಅವಳು ಮನೆಯಲ್ಲಿ ಇರಲೇ ಇಲ್ಲ. ಒಮ್ಮೆ ಕುತೂಹಲ, ಹೊರಗಡೆ ಹೋಗಿರಬಹುದಾ ಎಂಬಂತೆ. ಅಲ್ಲೇ ಮಲಗಿದ್ದ ಸ್ನೇಹಿತನನ್ನು ಕೇಳಿದೆ. ಅವಳೆಲ್ಲಿದ್ದಾಳೆ ಎಂದು ‘ಗೊತ್ತಿಲ್ಲ.. ಇರಬಹುದು ಇಲ್ಲೇ’ ಎಂದು ಮುಸುಕೆಳೆದು ಮಲಗಿಕೊಂಡ. ನನಗೆ ಕ್ಷಣ ಕ್ಷಣ ಕಷ್ಟವಾಗುತ್ತಿತ್ತು. ಹಾಗಾದರೆ ಈ ರಾತ್ರಿ 1 ಗಂಟೆ ಸುಮಾರಿಗೆ ಎಲ್ಲಿಗೆ ಹೋಗಿರಬಹುದು ಎಂಬ ಪ್ರಶ್ನೆಯೊಂದಿಗೆ ಹುಡುಕಲು ಶುರುಮಾಡಿದೆ. ಎಲ್ಲೂ ಇಲ್ಲ ಮನೆಯ ಹಿಂಭಾಗ ಆ ವಠಾರದ ಸಂದು ಗೊಂದಿಗಳಲ್ಲೆಲ್ಲೂ ಇಲ್ಲ.. ಬಿಟ್ಟು ಹೋದ್ದಕ್ಕೆ ಆಗಬಾರದ್ದು ಆಯಿತಲ್ಲಾ ಎಂಬ ದುಃಖ ಉಮ್ಮಳಿಸಿ ಬರುತ್ತಿತ್ತು. ಉಪಾಯ ಕಾಣದೆ ಅವಳ ನೆನಪಲ್ಲಿ ಕದ ಹಾಕಿ ಮಲಗಿದೆ. ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಇನ್ನೊಂದು ರೌಂಡ್ ಹುಡುಕುವ ಮನಸ್ಸಾಯಿತು. ಎಲ್ಲಿ ನೋಡಿದರೂ ಅವಳ ಪತ್ತೆಯಿಲ್ಲ. ಹತ್ತಿರದ ಮನೆಯವರಿಗೆ ಆಶ್ಚರ್ಯ, ಬೇಸರ. ಕೆಲವರು ನೋಡಿದ್ರೆ ಹೇಳ್ತೀವಪ್ಪಾ.. ಅಂದರು. ನನ್ನ ಕಷ್ಟ ಗೆಳೆಯರಿಗೂ ಹೇಳಿಕೊಂಡೆ ಆದರೆ ಪ್ರಯೋಜನವಾಗಲಿಲ್ಲ. ನಾಲ್ಕಾರು ತಿಂಗಳಿಂದ ಒಟ್ಟಿಗಿದ್ದವಳು ಒಂದು ಹೊತ್ತಿನಲ್ಲಿ ನನ್ನ ಬಿಟ್ಟೇ ಹೋಗಿದ್ದಳು. ಮತ್ತೆ ಏಕಾಂಗಿ ಬದುಕಿಗೆ ಮರಳಿದ್ದೆ.
ಅಲ್ಲಿಂದ ಬಳಿಕ ನನಗೆ ಕೆಲವೊಮ್ಮೆ ಅವಳ ನೆನಪು ಕಾಡುತ್ತದೆ. ಅವಳು ಅವಳೇ ಅಲ್ಲವೇ.? ಬೇರೆಯವರು ಆ ಜಾಗ ತುಂಬುವುದು ಕಷ್ಟ. ಭಾವನಾತ್ಮಕ ವಿಷಯ ಅದು. ಮೊನ್ನೆ ಮೊನ್ನೆ ಗೆಳತಿಯ ಮನೆಗೆ ಹೋಗಿದ್ದವನಿಗೆ ಅವಳಂತೇ ಒಬ್ಬಳು ಕಂಡಿದ್ದಳು. ಅಷ್ಟಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಅದು ನನ್ನ ಪ್ರೀತಿ ಪಾತ್ರದ ಸೈಕಲ್. ಚೈನಿನಲ್ಲಿ ಬಿಗಿದಿದ್ದರೂ ದೊಡ್ಡ ಬೀಗ ಕತ್ತರಿಸಿ ಲಪಟಾಯಿಸಿದ್ದರು. ಖದೀಮರ  ಐದೋ ನಾಲ್ಕೋ ಸಾವಿರದ ಆಸೆಗೆ ನನ್ನ ಕನಸು ಹಾಗೇ ತೊಳೆದು ಹೋಗಿತ್ತು.
 

ಶನಿವಾರ, ನವೆಂಬರ್ 5, 2011

ಶವಯಾತ್ರೆಗಳ ನಡುವೆ

ಬ್ಲಾಗ್ ಬರೆಯದೇ ಹಲವು ಕಾಲವೇ ಆಗಿ ಹೋಯಿತು.. ಇನ್ನೇನು ಮರೆತೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ವಿನಾಕಾರಣ ಬ್ಲಾಗ್ ನೆನಪಾಗಿದೆ. ಬೆಂಗಳೂರಿಗೆ ಬಂದು ಕಳೆದ ಬಾರಿ ಭಿಕ್ಷುಕರ ತವಕ ತಲ್ಲಣಗಳ ಬಗ್ಗೆ ಬರೆದಿದ್ದು. ಒಂದಷ್ಟು ಸಮಾನ ಮನಸ್ಕರು ಹೌದಾ.. ಹಾಗಾ ಎಂಬಂತೆ ಕೇಳಿದ್ದೂ ಆಯಿತು. ಅಲ್ಲಿಗೆ ಬದುಕಿನ ಜಂಜಾಟದಲ್ಲಿ ಬ್ಲಾಗ್ ಮರೆತೇ ಹೋಗಿತ್ತು. ಈಗ್ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ವಿಶೇಷ ಕಾರಣವಿದೆ. ಅಂತಹ ಸಂದರ್ಭವೂ ಸೃಷ್ಟಿಯಾಗಿದೆ. ನಾನಿರುವ ಸ್ಥಳ ಅಂಥದ್ದೇ ಆಗಿ ಹೋಗಿದೆ. ಹೇಳಿದರೆ ಆಶ್ಚರ್ಯ ಪಡುತ್ತೀರಿ.. ನನ್ನ (ಈಶ್ವರ) ಹೆಸರಿಗೆ ನಿಜವಾದ ಅನ್ವರ್ಥವೇ ಆಗಿದೆ.
ಹರಿಶ್ಚಂದ್ರ ಘಾಟ್..!! ಯಾರಿಗೆ ಗೊತ್ತಿಲ್ಲ ಹೇಳಿ.. ಬೆಂಗಳೂರು ಆಜು ಬಾಜಿನ ಸುತ್ತ.. ಹೊರವಲಯದಲ್ಲೂ ಬಹಳ ಫೇಮಸ್ಸು.. ಈ ಸ್ಥಳ... ಅದೊಂದು ಸ್ಮಶಾನ.. ಹೆಣ ಸುಡುವ ಅಥವಾ ಹೆಣ ಹೂಳುವ ಸ್ಥಳ.. ಬೆಂಗಳೂರಿನಲ್ಲೇ ಅತಿ ದೊಡ್ಡದು.. ವಿದ್ಯುತ್ ಮತ್ತು ಕಟ್ಟಿಗೆಯ ಸುಸಜ್ಜಿತ ಚಿತಾಗಾರಗಳಿರುವ ಸ್ಥಳ. ಅದರ ಎದುರು ಒಂದು ಬಸ್ ನಿಲ್ದಾಣ... ನೂರಾರು ಮಂದಿ ಆಫೀಸ್ಗೆ, ಮಕ್ಕಳು ಶಾಲಾ ಕಾಲೇಜಿಗೆ ಬಸ್ಸು ಹತ್ತುವ ಸ್ಥಳ. ಬದಿಯ ಓಣಿಯಲ್ಲಿ, ಸ್ವಲ್ಪ ಮುಂದೆ ಸಾಗಿ ಸ್ವಲ್ಪ ಎಡಕ್ಕೆ ತಿರುಗಿದರೆ ಅಲ್ಲೆ ನನ್ನ ಬಾಡಿಗೆ ಮನೆ. ಮನೆಗಿಂತಲೂ ಅದು ರೂಂ ಎಂದರೆ ಸೂಕ್ತ. ಇಂತಿಪ್ಪ.. ನಾನು ಹೇಳಲೇ ಬೇಕಾದ್ದು.. ಶವಗಳ ಕುರಿತು.. ಶವಯಾತ್ರೆಯ ಕುರಿತು.. ಮತ್ತು ಮನುಷ್ಯನ ಅಂತಿಮ ಯಾತ್ರೆಯ ಒಂದು ಸೂಕ್ಷ್ಮ ಮನಸ್ಥಿತಿ ಬಗ್ಗೆ.
ಹೇಳಿ ಕೇಳಿ ಇಂಥ ಸ್ಥಳದಲ್ಲೇ ನಾನು ಬಂದು ಕುಳಿತದ್ದು.. ಅಚಾನಕ್ ಆಗಿ, ಒಂದು ಹಂತದಲ್ಲಿ ತೀವ್ರ ಅನಿವಾರ್ಯತೆಯಿಂದಾಗಿ. ನಂಬಿದರೆ ನಂಬಿ ದಿನಕ್ಕೆ ನಾನು ಕನಿಷ್ಟ 1/2 ಶವಯಾತ್ರೆಯನ್ನು ತಪ್ಪದೇ ನೋಡುತ್ತೇನೆ.. ಅಥವಾ ಶವಯಾತ್ರೆಯ ಗೌಜಿ ಗದ್ದಲ ಬ್ಯಾಂಡ್, ಪಟಾಕಿಗಳ ಅಬ್ಬರವನ್ನಾದರೂ ಕೇಳುತ್ತೇನೆ. ಶವವನ್ನು ಹೂವಿನಿಂದ ಅಲಂಕರಿಸಿರುವ ಅಂಬ್ಯುಲೆನ್ಸ್ನಲ್ಲಿಟ್ಟಿದ್ದರೆ ಅದರೆದುರು ಒಂದು ಬ್ಯಾಂಡ್ ಸೆಟ್.. ಅದರ ಹಿಂದೆ ಪಟಾಕಿ ಹೊಡೆಯುವ ಹುಡುಗರು.. ಅಂಬ್ಯುಲೆನ್ಸ್ ಹಿಂದೆ ಮೃತರ ಸಂಬಂಧಿಕರೋ, ಆತ್ಮೀಯರೋ ಇತ್ಯಾದಿ.. ಇನ್ನು ಅಂಬ್ಯುಲೆನ್ಸ್ ಒಳಗೆಯೂ ನಾಲ್ಕಾರು ಮಂದಿ. ಅವರಲ್ಲೆ ಅಂಬ್ಯುಲೆನ್ಸ್ಗೆ ಕಟ್ಟಿದ್ದ ಹೂವಿನ ಮಾಲೆಗಳನ್ನು ಕಿತ್ತು, ಹೀಗೆ ದಾರಿಗೆ ಚೆಲ್ಲುತ್ತಾ ಹೋಗುತ್ತಾರೆ.. ಹಿಂದಿನವರಿಂದ ಮೃತರ ಹೆಸರು ಹೇಳಿ ಜೈಕಾರವೋ, ಗೋವಿಂದ ನಾಮಸ್ಮರಣೆಯೋ ಎಂಥದ್ದೋ ಒಂದು. ಅವರೊಂದಿಗೆ ಅಳುವವರೂ ಇಲ್ಲದಿಲ್ಲ.. ಆದರೆ ಶವ ಮೆರವಣಿಗೆಯ ಬೊಬ್ಬೆಯಲ್ಲಿ ಅವರ ಅಳು, ಯಾವುದೂ ಕೇಳಿಸುವುದಿಲ್ಲ.. ಹಾಗೇ ಹೋದವರು ಸ್ಮಶಾನದ ಒಳಗೆ ಹೋಗಿ ಅಂಬ್ಯುಲೆನ್ಸ್ನಿಂದ ಶವ ಇಳಿಸಿ, ವಿದ್ಯುತ್ ಚಿತಾಗಾರದಲ್ಲೋ, ಕಟ್ಟಿಗೆ ಚಿತಾಗಾರದಲ್ಲೋ ಇಟ್ಟು ಕೈತೊಳೆಯುತ್ತಾರೆ. ಅಲ್ಲಿಗೆ ಶವದ್ದು, ಸಂಬಂಧಿಗಳದ್ದು ಕೆಲಸ ಮುಗಿದಂತೆ.. ಈ ವಿಚಾರಗಳಿಗೆಲ್ಲ ಆರಂಭದಲ್ಲಿ ಅಷ್ಟೆಲ್ಲ ತಲೆಕೆಡಿಸಿಕೊಳ್ಳದಿದ್ದರೂ, ಕ್ರಮೇಣ ನನ್ನಲ್ಲಿ ಕೆಲ ಕುತೂಹಲ ಹುಟ್ಟಿಸಿದ್ದವು. ಶವ ಮೆರವಣಿಗೆಯಲ್ಲಿ ಸಂಬಂಧಿಕರ ನಡೆ. ಹೂವು ಹಾಕಿದ ಅಂಬ್ಯುಲೆನ್ಸ್, ಮೌನವಾಗಿ ಹೋಗುತ್ತಾರಾ.? ಅಥವಾ ಬ್ಯಾಂಡ್ ಪಟಾಕಿಗಳ ಅಬ್ಬರ ಇದೆಯಾ ಇತ್ಯಾದಿ. ಅದಕ್ಕೂ ಹೆಚ್ಚಿಗೆ ಶವ ಮೆರವಣಿಗೆಯಲ್ಲಿ ಜನರೆಷ್ಟಿದ್ದಾರೆ ಎಂಬುದು. ಮೃತಪಟ್ಟವ ಅವರ ಏರಿಯಾದಲ್ಲಿ, ತನ್ನ ಪಾಳಯದಲ್ಲಿ ಒಂದಷ್ಟು ಹವಾ ಸೃಷ್ಟಿಸಿದ್ದನೆಂದರೆ ಈ ಮೆರವಣಿಗೆಯಲ್ಲಿ ಜನ ಹೆಚ್ಚು. ಅಂಬ್ಯುಲೆನ್ಸ್ ಎದುರು ಒಂದು ರಿಕ್ಷದಲ್ಲೋ ಜೀಪಿನಲ್ಲೋ ಆತನ ಫೋಟೋ ಹಾಕಿ ಒಂದು ಹೂವಿನ ಹಾರ ಹಾಕಿ ಗಡದ್ದು ಮೆರವಣಿಗೆ. ಮೆರವಣಿಗೆ ಹಿಂದೆ ಮುಂದೆ ಜನವೋ ಜನ. ಅಲ್ಲದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಯಂತ್ರಿಸಲು ಸ್ವಯಂಸೇವಕರಂತ ವ್ಯವಸ್ಥೆ. ಸಾಮಾನ್ಯರಾದರೆ ಅಂತಹ ಗೌಜಿ ಗದ್ದಲಗಳು ಕಡಿಮೆಯೇ..
ಇಂತಹ ಮೆರವಣಿಗೆಗಳೆಂದರೆ ನಾನಿರುವ ಪ್ರದೇಶದ ಜನರಿಗೆ ಸಾಮಾನ್ಯವಾಗಿ ಬಿಟ್ಟಿವೆ. ಅವರಿಗೆ ಏನೂ ಅನ್ನಿಸುವುದೇ ಇಲ್ಲ.. ನಿತ್ಯಕರ್ಮ ಅದು.. ಸಣ್ಣದಿರುವಾಗ ಒಂದು ಬ್ಯಾಂಡ್ ಶಬ್ದ, ಒಂದು ಮೋಟಾರು ವಾಹನದ ಶಬ್ದ ಕೇಳಿದರೆ ಎದ್ದು ಬಿದ್ದು ಅಂಗಳಕ್ಕೆ ಓಡುತ್ತಿದ್ದ ನನಗೆ, ದಿನವೂ ಬ್ಯಾಂಡ್ ಶಬ್ದ ಕೇಳುವಂತಾಗಿದೆ. ಇಷ್ಟಕ್ಕೂ ಅಲ್ಲೇ ಇರಬೇಕೆಂದೇನೂ ಇಲ್ಲ.. ಆದರೂ ಇದ್ದೇನೆ. ದಿನ ದಿನ ಕಳೆದಂತೆ ಶವಯಾತ್ರೆ ಕುತೂಹಲ ಹುಟ್ಟಿಸಿದ್ದರೂ. ಅದರ ಕುರಿತ ಒಳನೋಟದಲ್ಲಿ ಎಲ್ಲರೂ ಹೀಗೇ ಹೋಗುವವರೇ ಎಂದು ಅನಿಸಿದ್ದಿದೆ. ಜೀವಂತವಿದ್ದಾಗ ಯಾರಿಗೂ ಬೇಡವಾಗಿ ಮೃತಪಟ್ಟ ಬಳಿಕ ಅತ್ತೂ ಕರೆದು ಕಳುಹಿಸಿ ಕೊಡುವ ಗೌಜು ಗದ್ದಲಗಳೇನು.. ತೀರ ವಿಚಿತ್ರ ಅನ್ನಿಸಿ ಬಿಡುತ್ತದೆ. ಹುಟ್ಟಿನ ಸಂಭ್ರಮವನ್ನು ಸಾವಿನಲ್ಲೂ ಕಾಣಿ ಎಂಬುದು ಹಿಂದಿನ ಮಾತು. ಅದರಂತೆ ನನ್ನೆದುರು ಶವಯಾತ್ರೆಗಳೂ ಹೋಗುತ್ತವೆ. ಮೃತಪಟ್ಟವರನ್ನು ತುಂಬು ಮನಸ್ಸಿನಿಂದ ಯಾರಾದರೂ ಕಳುಹಿಸಿ ಕೊಡುತ್ತಾರಾ..? ನಿನ್ನ ಬದುಕು ಸಾರ್ಥಕವಾಯಿತು ಎಂದು ಯಾರಾದರೂ ಹೇಳುತ್ತಾರಾ? ಇಂಥ ಪ್ರಶ್ನೆಗಳೆಲ್ಲವನ್ನು ಶವಯಾತ್ರೆ ಹೋದಾಗೆಲ್ಲ ಆಗಿಂದಾಗ್ಗೆ ಮನಸಿಗೆ ಬರುತ್ತವೆ. ಅಂತ್ಯಕ್ರಿಯೆಯೊಂದಿಗೆ ವ್ಯಕ್ತಿಯ ಬದುಕು ಅಂತ್ಯವಾದರೂ, ಅವನಿಂದ ಸೃಷ್ಟಿಯಾದದ್ದು ಒಂದಿಬ್ಬರಿಗಾದರೂ ನೆನಪಿನಲ್ಲಿ ಉಳಿಯುತ್ತಾದಾ ಎಂಬುದನ್ನೂ ಕೇಳಿಕೊಳ್ಳುತ್ತೇನೆ.. ಇಷ್ಟು ಬರೆಯುವಷ್ಟರಲ್ಲಿ.. ಮತ್ತೆ ದೂರದಲ್ಲೆಲ್ಲೋ ಬ್ಯಾಂಡ್, ಪಟಾಕಿ ಶಬ್ದದಂತೆ ಕೇಳಿಸುತ್ತಿದೆ.

ಚಿತ್ರ: ಇಂಟರ್ನೆಟ್ ಕೃಪೆ

ಸೋಮವಾರ, ಸೆಪ್ಟೆಂಬರ್ 13, 2010


ನಮ್ಮ `ಗೆಸ್ಟ್'..!

ಇನ್ನೇನು ಚಪ್ಪಲಿ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಸ್ನೇಹಿತನ ಆಗಮನ. ಅವಸರವಸರವಾಗಿ ಬಂದವನೇ ನಮ್ಮ ಬಾಡಿಗೆ ಮನೆಗೆ ಒಳಹೊಕ್ಕು ಕೇಳಿದ... ಈರೆಡ ಪರತ್ ಟೀಶರ್ಟ್ ಉಂಡೇ...(ನಿಮ್ಮಲ್ಲಿ ಹಳೆ ಟೀಶರ್ಟ್ಇದೆಯಾ) ಅಂತಾ ಕೇಳಿದ.. ಏನಪ್ಪಾ ಇವನು ಹಳೆ ಟೀಶರ್ಟ್ ಕೇಳ್ತಾನೆ... ಅಂಗಿ ಏನಾದ್ರೂ ಹರಿದುಹೋಯ್ತಾ... ಅಂತಾ ಅಡಿಯಿಂದ ಮುಡಿಯುವವರೆಗೆ ಆರ್ಶರ್ಯಕರ ರೀತಿಯಲ್ಲಿ ನೋಡಿದೆ... ಬಹುಶಃ ನನ್ನ ಅವನಿಗೆ ಭಾವನೆ ಕೂಡಲೇ ಅರ್ಥವಾಗಿರಬೇಕು..... ಎಂಕತ್ತ್ ಮಾರ್ರೆ... (ನನಗಲ್ಲ ಮಾರಾಯ್ರೆ) ಅಂದ.. ಪುನಃ ನನ್ನ ಪ್ರಶ್ನೆ.. ಮತ್ತೆ ಯಾರಿಗೆ....??  ಗೆಸ್ಟ್ ಬಂದಿದ್ದಾರೆ.. ಅವರಿಗೆ ಕೊಡಬೇಕು.. ಎಂದ.. ನಾನಂದೆ... ನನ್ನಲ್ಲಿ ಹಳೇ ಟೀಶರ್ಟ್ ಅಂತಾ ಯಾವುದೂ ಇಲ್ಲ... ಒಂದ್ಸಲ ಹಾಕೋದಾದ್ರೆ ಕೊಡೋಣ... ಅಲ್ಲ.. ಅದು ಅವ್ರಿಗೆ ಪರ್ಮನೆಂಟ್.. ಬೇಕು.... ಎಂದ ಸರಿ... ಎನ್ನುತ್ತಾ ನಾನು ಅಲ್ಲೇ ಇದ್ದ ನನ್ನ    ಟೀಶರ್ಟ್ ತೆಗೆದುಕೊಟ್ಟೆ... ಅದಕ್ಕಿಂತಲೂ ನನಗೆ ಸ್ನೇಹಿತ ಕರಕೊಂಡು ಬಂದ ಗೆಸ್ಟ್ ನೋಡೋ ಕುತೂಹಲ.. ಯಾರಪ್ಪ ಒಂದು ಬಟ್ಟೆಗೂ ಗತಿಯಿಲ್ಲದಿರೋನು  ಅಂತಾ ಆಶ್ಚರ್ಯವಾಗಿತ್ತು. ಮನೆಯಿಂದ ಹೊರಗೆ ಬಂದವನೇ...... ಎದುರಿಗೆ ಇವನ ಗೆಸ್ಟ್ ನಿಂತಿದ್ದಾನೆ.. ಖಾಕಿ ಅಂಗಿ, ಚಡ್ಡಿಯಲ್ಲಿ. ನಿರರ್ಗಳವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ......  ಅಸಹನೀಯ ಗಬ್ಬುನಾಥ ಬೇರೆ.. ವಾಕ್ ವಾಕ್.. ವಾಂತಿ ಬಂದತಾಯಿತು.. ಅಯ್ಯೋ... ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.

ಬಿಟ್ಟು ಬಿಡಿ ಪ್ಲೀಸ್....
ಅಂದಹಾಗೆ..ಗೆಸ್ಟ್ ಗೂ ಮೊನ್ನೆ ಮೊನ್ನೆ ಬೆಂಗಳೂರಿನ ಭಿಕ್ಷುಕರ ಕಾಲೊನಿಗೂ ಸಂಬಂಧವಿದೆ. ಕಾಲೊನಿಯದ್ದು ಹೇಳಲಾರದ... ಕರುಣಾಜನಕ ಕಥೆ.. ಇಡೀ ಮನವ ಸಮಾಜಕ್ಕೇ ನಾಚಿಕೆಗೇಡಿನ ವಿಚಾರ.  ಭಿಕ್ಷುಕರ ಕಾಲೊನಿ ಅನ್ನೋ ನರಕಸದೃಶ ವಾತಾವರಣದಲ್ಲಿ.. ಚಿಕಿತ್ಸೆ ಇಲ್ಲದೆ... ಬೀದಿ ನಾಯಿಗಿಂತಲೂ ತೀರ ನಿಕೃಷ್ಟ ಮಟ್ಟದಲ್ಲಿ ಒಂದೇ ತಿಂಗಳಿನಲ್ಲಿ ಸುಮಾರು 27 ಹೆಣಗಳುರುಳಿದ್ದವು.... ಅದಕ್ಕೂ ಮುನ್ನ ಮಲಗಿದ್ದಲ್ಲೇ ಹೆಣವಾದವರೆಷ್ಟೋ....? ಅಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡಿಕೊಳ್ಳುತ್ತಿಲ್ಲ ಅನ್ನೋದು ನನಗೆ ಅರಿವಾದದ್ದು ಸ್ನೇಹಿತ ಕರೆದುಕೊಂಡು ಬಂದಿದ್ದ `ಗೆಸ್ಟ್'ನ ಅವಸ್ಥೆ ನೋಡಿಯೇ...
ಮೈತುಂಬಾ ಕೊಳೆ, ಗಬ್ಬು ನಾರುವ ದೇಹ, ಬಟ್ಟೆಗಳು.... ಹಲ್ಲುಜ್ಜದೇ ವರ್ಷಗಳೇ ಕಳೆದುವೇನೋ ಅನ್ನೋ ಪರಿಸ್ಥಿತಿ.. ಆ ಮನುಷ್ಯನ ಹತ್ತಿರಕ್ಕೂ ಹೋಗಲಾಗುತ್ತಿರಲಿಲ್ಲ.. ಅಂತಾ ಮನುಷ್ಯನನ್ನು ಈ ಅಸಾಮಿ ಬೈಕ್ನಲ್ಲಿ ಕುಳ್ಳಿರಿಸಿ ಕರಕೊಂಡು ಬರಬೇಕಾದರೆ... ಅಬ್ಬಾ.. ಎಂದಿತ್ತು ಮನಸ್ಸು..
ಅವನ ಹೆಸರು ರಾಮಕೃಷ್ಣ... ವಯಸ್ಸು ಸುಮಾರು 55 ದಾಟಬಹುದು. ಶಿರಾ ಬಳಿಯ ಯಾವುದೋ ಒಂದು ಊರು.. ಪಾಶ್ರ್ವವಾಯು ಪೀಡಿತನಾಗಿದ್ದವನು ಚಿಕಿತ್ಸೆಗೆಂದು ಬೆಂಗಳೂರಿಗೆ  ಆಸ್ಪತ್ರೆಗೆ ಬಂದಿದ್ದ... ಬಟ್ಟೆಯೆಲ್ಲ ಕೊಳಕಾಗಿ ಭಿಕ್ಷುಕನಂತೆ ಕಾಣುತ್ತಿತ್ತೋ ಏನೋ.. ಆಸ್ಪತ್ರೆಯಲ್ಲಿ ಕುಳಿತಿದ್ದ ಇವನನ್ನು ಭಿಕ್ಷುಕರ ಕಾಲೊನಿಯ ಕಟುಕರು ನೋಡಿದವರೇ ಎತ್ತಾಕಿಕೊಂಡು ಹೋಗಿದ್ದರು.. ಇವನದೋ ಒಂದೇ ಸವನೆ ಬೊಬ್ಬೆ.. ಬಿಡಿ ನನ್ನ... ಊರಿಗೆ ಹೋಗ್ಬೇಕು.. ಉಹೂಂ... ಇವನ ರೋದನೆಗೆ ಅವ
ರಾರೂ ಜಗ್ಗಲಿಲ್ಲ.. ಎರಡೇಟು ಹಾಕಿ ಕಾಲೊನಿಯೊಳಕ್ಕೆ ದೂಡಿದ್ರೋ ಏನೋ...
2ವರ್ಷಗಳ ಹಿಂದೆ ಹಾಗೆ ಕಾಲೊನಿಯೊಳಕ್ಕೆ ಹೋದವನು... ಹೊರಕ್ಕೆ ಬಂದಿದ್ದು ಮೊನ್ನೆಯೇ.. ಅದಕ್ಕೂ ಹೆಚ್ಚಾಗಿ ಸುಲಲಿತವಾಗಿ ಇಂಗ್ಲಿಷ್ ಬರುತ್ತಿತ್ತು... ಸೋಪು, ಟವೆಲ್ ಕೊಟ್ಟು ಸ್ನಾನಕ್ಕೆ ಕಳುಹಿಸಿದಾಗಲೇ ಅಲ್ಪ ಸ್ವಲ್ಪ ಪ್ರವರ ತಿಳಿದುಕೊಂಡೆ.. ಅದು ನರಕ ಸ್ವಾಮಿ... ಅಲ್ಲಿ ಮನುಷ್ಯರಿಗೆ  ಬೆಲೆ ಇಲ್ಲ.. ಜೀವನವೇ ಬೇಡ ಅನಿಸುತ್ತಿತ್ತು.. ಹೋಗಲು ಬಿಡಿ ಎಂದರೆ.. ದನಕ್ಕೆ ಬಡಿಯುವಂತೆ ಬಡಿಯುತ್ತಾರೆ.. ಇನ್ನು.. ಊರಲ್ಲಿ ಮಗಳಿದ್ದಾಳೆ.. ಅವರನ್ನೆಲ್ಲಾ ನನಗೆ ನೋಡಬೇಕು.. ಮತ್ತೆ ಯಾವಾಗ ಮನೆ ಸೇರುತ್ತೇನೋ ಎಂಬಂತಿತ್ತು... ಅವನ ಮಾತು. ಹಲವು ಹೆಣಗುರುಳಿದ ಬಳಿಕ ಕಾಲೊನಿಯ ಗೇಟು ತೆಗೆದ ವೇಳೆ ಹಲವರು ಓಡಿ ಹೋದ್ರು.. ನನ್ನನ್ನು ನಿಮ್ಮವರು (ಸ್ನೇಹಿತನ ಬಗ್ಗೆ)  ಇಲ್ಲಿವರೆಗೆ ಕರಕೊಂಡು ಬಂದರು.. ಅಂತಾ ಎಲ್ಲವನ್ನೂ ಹೇಳಿದ.... ಬದುಕು ಹೀಗೂ ಉಂಟೇ ಎಂಬ ಪ್ರಶ್ನೆ ನಿಧಾನಕ್ಕೆ ನನ್ನನ್ನು ಸುಳಿಯತೊಡಗಿತು... ಅಲ್ಪ ಸ್ವಲ್ಪ ಕೊಳೆಯಾದ ಬಟ್ಟೆ ಹಾಕಿ ಬಸ್ಸ್ಟ್ಯಾಂಡ್... ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರೆ.. ಭಿಕ್ಷುಕರ ಕಾಲೊನಿಯವರು ಹಿಡಿದು ಕರಕೊಂಡುಹೋಗುತ್ತಾರೆಂದರೆ... ಅಬ್ಬಾ ಪರಿಸ್ಥಿತಿ ಎಷ್ಟು ಕಠೋರ ಬೆಚ್ಚಿ ಬಿದ್ದೆ....! ಕೊಡೋ ಊಟವನ್ನೂ ಸರಿಯಾಗಿ ಕೊಡದೇ.... ಬೀದಿನಾಯಿಗಿಂತಲೂ ಕಡೆಯಾಗಿ ಬದುಕುವ ಪರಿಸ್ಥಿಯಿದೆಯಲ್ಲ... ಅದು ಯಾರಿಗೂ ಬೇಡ.. ಇದು ರಾಮಕೃಷ್ಣನ ಕಥೆ ಮಾತ್ರವಲ್ಲ.. ಭಿಕ್ಷುಕರ ಕಾಲೊನಿಯ ಕಟುಕರು ಹೀಗೆ ಹಲವಾರು ಮಂದಿಯನ್ನು ವಿವಿಧೆಡೆಗಳಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡುಹೋಗಿದ್ದರು.. ಭಿಕ್ಷುಕರ ಕಾಲೊನಿಯ ದುರಂತ ಬಳಿಕ ಸತ್ಯಗಳು ಒಂದೊಂದಾಗಿ ಮೆಲ್ಲನೆ ಮಾಧ್ಯಮಗಳಲ್ಲಿ ಬರತೊಡಗಿದವು... ಆದರೆ ನನಗೆ ಭಿಕ್ಷುಕರ ಕಾಲೊನಿಯ `ವಿಶ್ವರೂಪ ದರ್ಶನ'ವಾದದ್ದು ರಾಮಕೃಷ್ಣನನ್ನು ನೋಡಿದ ಬಳಿಕವೇ....

ಇಂತಿಪ್ಪ ರಾಮಕೃಷ್ಣನನ್ನು ಬಟ್ಟೆಹಾಕಿಸಿ.. ಕೈಯಲ್ಲಿ ಒಂದಷ್ಟು ಕಾಸು ಕೊಟ್ಟು.... ಟಿಕೇಟ್ ತೆಗೆದು ರೈಲು ಹತ್ತಿಸಿ ಬಂದು ಸ್ನೇಹಿತ ನಿಜ ಮಾನವೀಯತೆ ಮೆರೆದ... ಒಂದರ್ಥದಲ್ಲಿ `ದೇವರೂ' ಆದ... ರಾಮಕೃಷ್ಣನ ಸನ್ನಿವೇಶದ ಬಳಿಕ 2 ದಿನ ನಾನು ಕೊಲೊನಿ ದುರಂತ ಬಗ್ಗೆ ಹೆಚ್ಚು ಅಲೋಚನೆ ಮಾಡುತ್ತಿದ್ದೆ.... ಅಲ್ಲಿ ಇಲ್ಲಿ ಪೇಟೆ ಸಂದುಗೊಂದುಗಳಲ್ಲಿದ್ದವರನ್ನೆಲ್ಲ ಎಳಕೊಂಡು ಹೋದರೆ... ಅವರ ಸಾವಿಗೆ ಮುನ್ನುಡಿ ಬರೆದಂತೆಯೇ.. ಭಿಕ್ಷುಕರ ಕಾಲೊನಿ ಕೊಲೆ ಕೇಂದ್ರವೇ ಅನ್ನೋ ಸಂಶಯವೂ ಮೂಡತೊಡಗಿತ್ತು. ಇಷ್ಟಕ್ಕೂ ದುರಂತ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಿ. ಸುಧಾಕರ್ ಸುವರ್ಣನ್ಯೂಸ್ನಲ್ಲಿ ಹೀಗೆ ಹೇಳಿದ್ದರು... `ಕಾಲೊನಿಲ್ಲಿ ಇದೆಲ್ಲ ಕಾಮನ್... ಆಶ್ಚರ್ಯವೇನೂ ಇಲ್ಲ... ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂಬಂತೆ.. ಆ ಬಳಿಕ ಸಚಿವರ ತಲೆದಂಡವಾಗಿ... ಭಿಕ್ಷುಕರ ಕಾಲೊನಿಗೆ ಮಂದಿಮಾಗಧರು ಬಂದು... ಕಾಲೊನಿಯ ಚಿತ್ರಣ ಅಲ್ಪಸ್ವಲ್ಪ ಬದಲಾಗಿದೆ. ಆದ್ರೆ... ದುರಂತದ ಬಗೆಗಿನ ಚಿತ್ರಣಗಳು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ.

ಶನಿವಾರ, ಏಪ್ರಿಲ್ 10, 2010

ನಿರುತ್ತರ...!
                                                               
ಮನುಷ್ಯ ಎನ್ನುವ ಪ್ರಾಣಿಯಲ್ಲಿರುವ `ಸ್ವಾರ್ಥ' ಎನ್ನುವುದು ವಿಪರೀತ ಮಟ್ಟಕ್ಕೆ ಹೋಗುವುದಿದೆ. ತಾನು ಮಾತ್ರ ಬದುಕಿದರೆ ಅಯಿತು ಉಳಿದವರು ಏನಾದರೂ ಮಾಡಿಕೊಳ್ಳಲಿ ಎನ್ನುವ ಗುಣ! ಆಹಾ!! ಅದಕ್ಕೊಂದು ಉದಾಹರಣೆ ಕಂಡದ್ದು ನಾನಿರುವ ಉಡುಪಿ ಮನೆಯಲ್ಲಿ! ಎಲ್ಲರಿಗೂ ಸ್ವಾರ್ಥ ಎನ್ನುವುದು ಇದ್ದೇ ಇರುತ್ತದೆ. ಅದರೆ ಅದು ಒಂದು ಮಟ್ಟ ಮೀರಿ ಹೋದರೆ ಏನು ಸುಖ ಹೇಳಿ... ಸೀದ ವಿಷಯಕ್ಕೇ ಬರುತ್ತೇನೆ!
         ನಾನು ಮಣಿಪಾಲಕ್ಕೆ ಬಂದು ಕೆಲ ಸಮಯವಾಯಿತು. ಇರೋದು ಉಡುಪಿ ಸನಿಹದ ಒಂದು ಮನೆಯಲ್ಲಿ. ಆಶ್ಚರ್ಯದ ಸಂಗತಿಯೆಂದರೆ ಈ ಮನೆ ನನಗೆ ಎಂದೂ ಪೇಟೆ ಎಂದೆನಿಸಿದ್ದಿಲ್ಲ. ರಾಷ್ಟ್ರೀಯ ಹೆದ್ದಾರಿ ಸನಿಹವೇ ಇದ್ದರೂ ಅಲ್ಪ ಸ್ವಲ್ಪ ಹಳ್ಳಿಯ ವಾತಾವರಣ ಇನ್ನೂ ಉಳಕೊಂಡಿದೆ.  ಅದಕ್ಕಿಂತಲೂ ಹೆಚ್ಚಿಗೆ ನಾಲ್ಕು ಮೈನಾ ಹಕ್ಕಿ, ಎರಡು ಕಾಗೆ, ಅಪರೂಪಕ್ಕೆ ಗೀಜಗ, ಕೋಗಿಲೆ. ಮಿಂಚುಳ್ಳಿ ಎಲ್ಲಾ ಹಕ್ಕಿಗಳ ದರ್ಶನವೂ ನನ್ನ ಮನೆ ಹೊರಭಾಗದಲ್ಲಿ ನಿಂತರೆ ಆಗುವುದಿದೆ. ಕಾರಣ, ಮನೆಯ ಕಂಪೌಂಡ್ ಒಳಗಿರುವ ಸಮೃದ್ಧ ಹಣ್ಣು ನೀಡುವ ಎರಡು ಪಪ್ಪಾಯಿ ಸಸಿಗಳು ಮತ್ತು ಸೀತಾಫಲದ ಸಸಿ. ಹಣ್ಣು ಕಾಯಿ ಆಗುವ ಈ ಸಮಯ ಹಕ್ಕಿಗಳ ಮೆರವಣಿಗೆ ಹಾಗೇ ನಮ್ಮ ಮನೆ ಮುಂದೆ. ಆದನ್ನು ನೋಡುವುದೇ ಒಂದು ಸಂಭ್ರಮ. ಬೆಳಗಾಗೆದ್ದು, ಸಿಟೌಟಿನಲ್ಲಿ ಕೂತರೆ, ಎಲ್ಲಾ ಹಕ್ಕಿಗಳೂ ಬಂದು ಮುಂದಿನ ಸರಳುಗಳ ಮೇಲೆ ಕೂತು ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಹೋಗುತ್ತವೆ.
ನಾಳೆ ಬರುತ್ತೇನೆ ಎನ್ನುವಂತೆ. ನಾನು ಬಂದ ಲಾಗಾಯ್ತು ಈ ಸಂಭಾಷಣೆ ನಿರಂತರ ನಡಕೊಂಡು ಬಂದಿದೆ.. ನನ್ನ ಬೇಸರ ಕಳೆಯಲು ಉಪಾಯವೂ ಆದ್ದಿದೆ.
          ಈ ಸಮಯ ಯಾವತ್ತೂ ಹೀಗೆ ಮುಂದುವರಿಯಬೇಕೆಂದೇನಿಲ್ಲವಲ್ಲ! ಹೌದು ಹಾಗೆಯೇ ಆಯಿತು.
ಮಹಡಿ ಮೇಲಿನ ಮನೆಯಲ್ಲಿ ನಾನಿರುವುದಾದರೆ, ಕೆಳಗಿನದ್ದು ಓನರ್ ಮನೆ. ಅವರಿಲ್ಲಿ ವಾಸ ಮಾಡದೇ ಕೆಲ ದಿನಗಳಾಗಿ ಧೂಳು, ಕಸ ತುಂಬಿ ನಮ್ಮ ಮನೆಗೆ ಬರುವವರಿಗೆ ನರಕ ದರ್ಶನವಾಗುತ್ತಿತ್ತು.  ಒಂದು ದಿನ ನಲ್ಕಾರು ಜನ ಬಂದು ಶುಚಿಗೊಳಿಸುವ ಕಾರ್ಯಕ್ರಮ ಆರಂಭವಾಯಿತು.ನನ್ನ ಮನೆಯಲ್ಲಿರುವ ಇಬ್ಬರು ಗೆಳೆಯರೂ ಸೇರಿದಂತೆ ನಮಗೆ ಖುಷಿಯಾಗಿತ್ತು. ಮನೆ ಪರಿಸರ ಸ್ವಚ್ಛ ಸುಂದರವಾಗುತ್ತಿದೆಯಲ್ಲ ಎಂದು.
        ಈ ಸಂತೋಷ ಎನ್ನುವುದೆಲ್ಲ ಅಲ್ಪಾಯುಷಿ! ಹೆಚ್ಚು ಸಮಯ ಇರುವುದಿಲ್ಲ. ಸ್ವಚ್ಛಗೊಳಿಸುವ ಕಾರ್ಯಕ್ರಮದ ಎರಡನೇ ಎಪಿಸೋಡ್ ಮರುದಿನ ಆರಂಭವಾಗಿತ್ತು. ಅಂದು ಯಥಾಪ್ರಕಾರ ಮಧ್ಯಾಹ್ನ ಆಫೀಸ್ಗೆ ಹೊರಟು ಹೋಗಿದ್ದೆ. ಹಾಗೆಯೇ ರಾತ್ರಿ ಮರಳಿ ಬಂದಿದ್ದೆ. ಮನೆ ಪರಿಸರ ಸ್ವಚ್ಛಗೊಳಿಸಿದ್ದಕ್ಕೆ ಮನಸ್ಸಿನಲ್ಲೇ ಓನರ್ಗೆ ಥ್ಯಾಂಕ್ಸ್ ಹೇಳಿದ್ದೆ.
ಯಾವತ್ತಿನಂತೆ ಮತ್ತೆ ಬೆಳಕು ಹರಿಯಿತು. ಬೆಳಗ್ಗೆ ಪೇಪರ್ ಓದಲು ಸಿಟೌಟ್ನಲ್ಲಿ ಕೂತದ್ದೂ ಆಯಿತು.
ಪೇಪರಿನ ಎರಡು ಪುಟ ತೆರೆಯಲಿಲ್ಲ. ಯಾವತ್ತೂ ನೊಡುವ ಮೈನಾ ಹಕ್ಕಿಗಳು ಕಾಣಲಿಲ್ಲ. ಬಹುಶಃ ಬ್ಯಸಿ ಇರಬಹುದೇನೋ ಅಂದುಕೊಂಡೆ.
       ಊಹುಂ! ನನ್ನ ಪೇಪರ್ ಓದುವಿಕೆ ಒಂದು ಹಂತ ಮುಗಿದು... ಬೇರೆ ಕೆಲಸಕ್ಕೆ ತೆರಳಿದರೂ ಈ ಹಕ್ಕಿ ಸಂಸಾರದ ಪತ್ತೆಯಿಲ್ಲ! ಸ್ವಲ್ಪ ಸಮಯದ ಬಳಿಕ ಹಾಗೇ ಮಹಡಿಯಿಂದ ಕೆಳಗಿಳಿದು ಯಾಕೋ ತಿರುಗಿ ನೋಡುತ್ತೇನೆ.....
ಅಯ್ಯೋ ರಾಮಾ...!! ಸೀತಾಫಲ ಸಸಿ ಮಂಗಮಾಯ!! ಬುಡದಿಂದ ಕತ್ತರಿಸಿಯಾಗಿದೆ.
ಬಾವಿಕಟ್ಟೆ ಸನಿಹ ಸುಮ್ಮನಿದ್ದ ಸಸಿಗೂ ಈ ಮಾರೀಚರು ಕೈಕೊಟ್ಟರಲ್ಲಾ ಅನಿಸಿತು.ಇದೇ ಕಾರಣ ಆ ದಿನ ಮೈನಾ ಬರಲಿಲ್ಲ. ಗೀಜಗ, ಅಳಿಲು, ಪಾರಿವಾಳ ಯಾವುದರ ಪತ್ತೆಯೂ ಇಲ್ಲ.ಇವರ ಸ್ವಚ್ಛತಾ ಅಭಿಯಾನ ನಾಲ್ಕು ಜೀವದ ಆಹಾರ ಕಸಿದಿತ್ತು.! ಬೇಸಿಗೆ ಕಾಲ ಬೇರೆ... ಎಲ್ಲಿಗೆ ಹೋದಾವು... ಅಂದು ಕೊಳ್ಳುತ್ತಿದ್ದೆ. ಆ ದಿನ ಬೇಸರದಲ್ಲೇ ಆಫೀಸ್ಗೆ ತಯಾರಾಗುತ್ತಿದ್ದೆ. ಸಿಟೌಟ್ ಹೊರಗಡೆ ಹಕ್ಕಿ ಸ್ವರ! ಅರೆ ಬಂದವು ಕೊನೆಗೂ ಅಂದು ಕೊಂಡೆ. ಸಿಟೌಟ್ ಸರಳಿನಲ್ಲಿ ಎರಡಲ್ಲ ಮೂರು ಮೈನಾ ಹಕ್ಕಿಗಳು... ಒಂದೇ ಸಮ ಕಿರುಚಾಟ... ಸೀತಾಫಲ ಸಸಿ ಕಡಿದವರನ್ನು ವಿಚಾರಿಸುವಂತಿತ್ತು. ಎರಡು ಬಾರಿ ಪುರ್ರನೆ ಹಾರಿ ಮತ್ತು ಬಂದು ಕೂತು ಕಿರುಚಾಟ... ಹೀಗೆ ಮುಂದುವರಿದಿತ್ತು ಸ್ವಲ್ಪ ಕಾಲ.. ನಮ್ಮ ಆಹಾರ ಕಸಿದರಲ್ಲಾ ಎನ್ನೋ ಹಾಗೆ...
ನನ್ನ ಮನಸ್ಸಂತೂ ತೀವ್ರ ಆದ್ರವಾಗಿತ್ತು. ಹಾಗೇ ಆ ದಿನವೂ ಕಳೆದಿತ್ತು.
        ಮರುದಿನ ಬೆಳಗ್ಗೆ ಹಕ್ಕಿ ಪಡೆಯ ಪತ್ತೆಯೇ ಇಲ್ಲ. ಯಾಕೋ ಎರಡು ಅಳಿಲು ಬಂದು ನೋಡಿ ಹೋದವು.
ಈ ಘಟನೆ ಬಳಿಕವೂ ಬೆಳಗ್ಗೆ ಸಿಟೌಟಿನಲ್ಲಿ ಕೂರುವ ಅಭ್ಯಾಸವಿದೆ. ಆದರೆ ಬೆಳಗಿನ ಕ್ಷೇಮ ಸಮಾಚಾರದ ಅತಿಥಿಗಳ ಪತ್ತೆ ಇಲ್ಲ... ಮತ್ತೆ ನಾಲ್ಕಾರು ದಿನ ಬಿಟ್ಟು ಯಾವುದೋ ಹಕ್ಕಿಗಳು ಬಂದರೂ ಅವುಗಳ ಕೂಗು ಸೀತಾಫಲ ಸಸಿ ಬಗ್ಗೆ ಕೇಳಿದಂತೆಯೇ ಭಾಸವಾಗುತ್ತಿದೆ. ಅವುಗಳ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ. ಪರಿಸರದ ಜೀವಿಗಳ ಆಹಾರ ಕಸಿದುಕೊಂಡ ಪಾಪಪ್ರಜ್ಞೆ ಕಾಡಲು ಶುರುವಾಗಿದೆ!!

ಶನಿವಾರ, ಜನವರಿ 9, 2010


ಮರೆಯಾದ ಗೋಲಿಸೋಡ!
 
      ಪೆಪ್ಸಿ, ಕೋಕಾಕೋಲ, ಮಿರಿಂಡ ಎಲ್ಲ ಆಷ್ಟಾಗಿ
ಬಾಧಿಸದಿದ್ದ ಕಾಲದಲ್ಲಿ ಹಳ್ಳಿಗಳಲ್ಲೆಲಲ್ಲ  ಬಾಯಾರಿದವರ ಅಮೃತವೆಂಬತಿದ್ದದ್ದು ಗೋಲಿಸೋಡ. ಎಂಟಾಣೆ-ಒಂದು ರೂಪಾಯಿ, ಹೆಚ್ಚೆಂದರೆ ಒಂದೂವರೆ ರೂಗಳಿಗೆಲ್ಲ ಬಾಯಾರಿದವರ ದಾಹ ತಣಿಸುತ್ತಿದ್ದ ಗೋಲಿಸೋಡ ಇಂದು ಮಾಯವಾಗಿದೆ. ಸ್ವಲ್ಪ ಫ್ಲಾಶ್ಬ್ಯಾಕ್ಗಿಳಿದರೆ, ಗೋಲಿಸೋಡ ಕುಡಿಯುವುದರ ಗಮ್ಮತ್ತೇ ಬೇರೆ ಎಂಬಂತಿತ್ತು. ಬಾಟಲಿ ಹೇರಿಕೊಂಡು ಬರುವ ಶಬ್ದ ಕೇಳಿದರೆ ಸಾಕು ಅದು ಗೋಲಿಸೋಡ ಎಂಬುದು ಖಾತರಿ. ಅಂಗಡಿಗೆ ಹೋಗಿ ಗೋಲಿಸೋಡ ಪಡೆದು ಬಾಟಲಿನ ಬಾಯಲ್ಲಿದ್ದ ಗೋಲಿಯನ್ನು ಅದುಮಿದರೆ, 'ಠುಸ್' ಎಂಬ ಶಬ್ದದೊಂದಿಗೆ ಗೋಲಿ ಬಾಟಲಿಯಲ್ಲೇ ಕೆಳಕ್ಕೆ ಜಾರಿ ಕುಡಿಯಲು ರೆಡಿ. ಅದಕಕ್ಕಿಂತಲೂ ಹೆಚ್ಚಿಗೆ, ಗೋಲಿಸೋಡ ಕುಡಿಯುವುದೆಂದರೆ ಅದೊಂದು ಕಲೆ. ಗೋಲಿ ನಿಲ್ಲುವ ಜಾಗವನ್ನು ಸರಿಯಾಗಿ ತಿರುಗಿಸಿ ಹಿಡಿದರೇ ಕುಡಿಯುವವನ ಬಯಿಗೆ ಸೋಡ ಬಿದ್ದೀತು. ಬಾಲರಿಂದ ಮುದುಕರವರೆಗೆ ಬಾಯಾರಿದಾಗಲೆಲ್ಲ ಗೂಡಂಗಡಿಗೆ ಹೋಗಿ ಕೇಳುತ್ತಿದ್ದದು `ಒಂಜಿ ಗೋಲಿಸೋಡ ಕೊರ್ಲೆ' ಎಂದೇ. ಗೋಲಿಸೋಡದಲ್ಲಿಯೂ ಈಗಿನ ತಂಪು ಪಾನೀಯದಂತೆ ಜಿಂಜರ್, ಲೆಮೆನ್, ಖಾಲಿ ಸೋಡ ಎಂಬ ವಿಧಗಳಿದ್ದವು. ಕಾಲಾಂತರದಲ್ಲಿ ತಂಪು ಪಾನೀಯ ಕಂಪೆನಿಗಳ ಭರಾಟೆಯಲ್ಲಿ ಸೋಡ ನೆಲಕ್ಕಚ್ಚಿತು. ಗೋಲಿಸೋಡದಿಂದಲೇ ಬದುಕು ಸಾಗಿಸುತ್ತಿದ್ದವರು ಆ ಕೆಲಸಕ್ಕೇ ತಿಲಾಂಜಲಿ ಇತ್ತರು.
               ಆದಾಗ್ಯೂ, ಗೋಲಿಸೋಡ ಉದ್ದಿಮೆ ಸಂಪೂರ್ಣ ನೆಲಕ್ಕಚ್ಚಿತು ಎಂದು ಹೇಳುವ ಮೊದಲೇ ಅಲ್ಲೊಂದು ಇಲ್ಲೊಂದು ತಯಾರಿಕಾ ಕೇಂದ್ರಗಳು ಇನ್ನೂ ಉಳಕೊಂಡಿವೆ.  ಒಂದು ಗ್ಯಾಸ್ ಸಿಲಿಂಡರ್, ಹಿಡಿಕೆಯಿರುವ ಒಂದು ಸಣ್ಣ ಮೆಷಿನ್ ಇದಷ್ಟೇ ಗೋಲಿಸೋಡ ತಯಾರಿಕೆಯವರ ಅಸ್ತಿ. ಗೋಲಿಸೋಡಕ್ಕೆಂದೇ ತಯಾರಾದ ಗೋಲಿಯಿರುವ ದಪ್ಪ ಬಾಟಲಿಗೆ ನೀರು ತುಂಬಿಸಿ ಮೂರು ಸುತ್ತು ತಿರುಗಿಸಿದರೆ ಗೋಲಿಸೋಡಾ ರೆಡಿಯಾಗಿರುತ್ತದೆ.
ಅಂಥದ್ದೊಂದು ಕೇಂದ್ರ ಮಲ್ಪೆ-ಕೋಡಿಬೆಂಗ್ರೆ ದಾರಿಯ ತೊಟ್ಟಂ ಬಳಿ ಈಗಲೂ ಇದೆ. ಸೈಕಲಲ್ಲಿ ಸೋಡಾ ಬಾಟ್ಲಿ ಹೇರಿ ಹೋಗುತ್ತಿದ್ದವರೊಬ್ಬರನ್ನು ಹಿಡಿದು ನಿಲ್ಲಿಸಿ ಮಾತನಾಡಿದಾಗ, ಗೋಲಿಸೋಡ ತಯಾರಿದಾರರ ಕಥೆ, ಆದಾಯ, ಮಾರುಕಟ್ಟೆ ಇಲ್ಲದಿರುವುದನ್ನೆಲ್ಲಾ ಆವರು ಹೇಳುತ್ತಲೇ ಹೋದರು.
ಅವರ ಹೆಸರು ವಾಸು. ಸೋಡ ವಾಸು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ. ಮೊದಲಿನಿಂದಲೂ ಇದೇ ಉದ್ದಿಮೆ. ಒಬ್ಬರೇ ತಯಾರು ಮಾಡುತ್ತಾರೆ. ತಯಾರಿಸಿದ ಸೋಡ ಸಮೀಪದ ವೈನ್ಶಾಪ್ಗೆ ಮೀಸಲು. ಅದರಿಂದಲೇ ಅವರ ಆದಾಯ.
ಹಾಗಾದರೆ ಕಂಪೆನಿ ಸೋಡ ಅಲ್ಲಿಗೆ ಸರಬರಾಜು ಆಗುವುದಿಲ್ಲವೇ ಎಂಬ ಪ್ರಶ್ನೆಗೆ, `ಪಾಪದಕ್ಲೆಗ್ ಕಮ್ಮಿದಾವೋಡತ್ತೇ!' (ಬಡವರಿಗೆ ಕಡಿಮೆ ಕಾಸಿನದ್ದೇ ಆಗಬೇಕಲ್ಲ!) ಎಂದು ವಾಸು ನಗುತ್ತಲೇ ಉತ್ತರಿಸಿದರು.
ಅಂದಹಾಗೆ ವಾಸು ದಿನಕ್ಕೆ 75ರಿಂದ100 ಬಾಟಲಿ ಗೋಲಿಸೋಡ ತಯಾರಿಸುತ್ತಾರೆ. ಅವರು ವೈನ್ಶಾಪ್ಗೆ ಸೋಡ ಮಾರುವುದು 75ಪೈಸೆಗೆ. ವೈನ್ಶಾಪಲ್ಲಿ ಗೋಲಿಸೋಡ ಉಚಿತವಾಗಿ ಕೊಡುತ್ತಾರೆ. ಅದು ಹೊರತು ವಾಸುವಿಗೆ ಬೇರೆ ಮಾರುಕಟ್ಟೆ ಇಲ್ಲ. ಅವರ ನಾಲ್ಕು ಮಂದಿಯ ಕುಟುಂಬಕ್ಕೆ ಇದೇ ಪ್ರಮುಖ ಆದಾಯ.  ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟಿದ್ದರಲ್ಲೇ ನಾಕು ಕಾಸು ಸಂಪಾದನೆ.
        ಗೋಲಿಸೋಡ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ಗೆ 400 ರೂ ಇದೆ. ಸುಮಾರು 2500 ಬಾಟಲಿ ಸೋಡ ತಯಾರಿಸಬಹುದು ಎಂದು ಹೇಳುತ್ತಾರೆ. ವ್ಯಾಪಾರ ವೃದ್ಧಿ ಬಗ್ಗೆ ವಾಸು ಅವರಿಗೆ ತೀವ್ರ ನಿರಾಸೆ.  ಗೋಲಿಸೋಡ ಈಗ ಯಾರೂ ಕುಡಿಯುವುದಿಲ್ಲ. ಪರಿಣಾಮ ಬೇಡಿಕೆ ಇಲ್ಲ. ತಂಪು ಪಾನೀಯ, ಐಸ್ಕ್ಯಾಂಡಿ, ಲಾಲಿಪಾಪ್ ಒಟ್ಟಾಗಿ ಗೋಲಿಸೋಡವನ್ನು ಹೊಸಕಿ ಹಾಕಿದೆ ಎಂದು ಹೇಳುತ್ತಾರೆ. ಹಿಂದೆಲ್ಲಾ ಜಾತ್ರೆ, ಯಕ್ಷಗಾನ ಬಯಲಾಟ, ಕೋಳಿಆಂಕ,  ನಾಟಕ, ಸ್ಕೂಲ್ ಡೇ, ಇತ್ಯಾದಿ... ಇತ್ಯಾದಿ...  ಸಮಯದಲ್ಲಿ ಗೋಲಿಸೋಡದ್ದೇ ಕಾರುಬಾರು. ಆ ಸಮಯದಲ್ಲಿ ಆದಾಯವೂ ಚೆನ್ನಾಗಿತ್ತು ಎಂದು ಕಳೆದ ಸುಂದರ ದಿನಗಳನ್ನು ವಾಸು ಮೆಲುಕು ಹಾಕುತ್ತಾರೆ.  ಆ ಕಾಲದಲ್ಲಿ ಮೆಷಿನ್ ಖರೀದಿಗೆ ಸಹಕಾರಿ ಬ್ಯಾಂಕ್ಗಳಿಂದ ಧನಸಹಾಯವೂ ದೊರಕುತ್ತಿತ್ತು. ಈಗ ಉದ್ದಿಮೆಯನ್ನು ಜೀವಂತಗೊಳಿಸಲು ಸಾಧ್ಯವೇ ಇಲ್ಲ, ಅದೆಲ್ಲಾ ಕನಸಿನ ಮಾತು ಎಂಬುದು ಅವರ ಅಂಬೋಣ.
          ಅಂಗಡಿಗಳೆಲ್ಲೆಲ್ಲಾ ಅದರದ್ದೇ ಆದ ಸ್ಥಾನ ಪಡೆದಿದ್ದ, ಬಾಯಾರಿಕೆ ತಣಿಸುತ್ತಿದ್ದ ಗೋಲಿಸೋಡಾ ಈಗ ನೇಪಥ್ಯಕ್ಕೆ ಸರಿದಿದೆ. ಅದನ್ನೇ ನಂಬಿ ಬದುಕುತ್ತಿದ್ದ, ಸೋಡಾ ಮೆಷೀನ್ ತಿರುಗಿಸುತ್ತಿದ್ದ ಕೈಗಳೆಲ್ಲ, ಉದ್ಯಮ ನೆಲಕ್ಕಚ್ಚಿದ ಕೂಡಲೇ ಬೇರೆ ಬೇರೆ ಕೆಲಸಗಳಿಗೆ ತೊಡಗಿಕೊಂಡಿವೆ. ಆಧುನಿಕತೆಯ ಭರದಲ್ಲೋ ಅಥವಾ ತಂಪು ಪಾನೀಯ ತಯಾರಿಕಾ ಕಂಪೆನಿಗಳ ಸಾಲು ಸಾಲು ದಾಳಿಗೆ ಗೋಲಿಸೋಡ ಉದ್ಯಮ ನಶಿಸಿ ಹೋಗಿದೆ. ಹಾಗಾಗಿ ಗೋಲಿಸೋಡದ ಬಗ್ಗೆ ಚಿತ್ರದಲ್ಲೋ ಅಥವಾ ಹಳಬರ ಬಾಯಲ್ಲೋ ಕೇಳಬೇಕಾದ ಪರಿಸ್ಥಿತಿ ಹಾಗೆ..... ನಿಧಾನಕ್ಕೆ ಬರುತ್ತಿದೆ !

ಮಂಗಳವಾರ, ಡಿಸೆಂಬರ್ 8, 2009

 ಆನೆ ಬಂತೊಂದಾನೆ...........!!


ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯ ಕೆಂಪುಹೊಳೆ ಕಿರು ಜಲ ವಿದ್ಯುತ್ ಯೋಜನೆಯ ಪ್ರದೇಶ ಸಮೀಪ ಶನಿವರ ಸಂಜೆ ಹೊತ್ತು ಸಾಗುತ್ತಿದ್ದವರಿಗೆ ಇದ್ದಕ್ಕಿಂದ್ದಂತೆ   ಒಂಟಿ ಸಲಗವೊಂದರ ದರ್ಶನವಾಗಿದೆ. ಈ ಪ್ರದೇಶದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಮತ್ತು ಇತರ ಕಾಮಗಾರಿಗಳಿಂದ ಇತ್ತೀಚೆಗೆ ವನ್ಯಜೀವಿಗಳು ಅಪರೂಪವೇ ಅಗಿತ್ತು.
ನೇತ್ರಾವತಿ ನದಿಗೆ ಅಡ್ಡಲಾಗಿ ಹಲವು ಕಿರು ಜಲವಿದ್ಯುತ್ ಯೋಜನೆಗಳು ಕಾಯರ್ಾರಂಭ ಮಾಡಿದ್ದು,
ಅಪರೂಪದ ಮಳೆಕಾಡು, ಪರಿಸರ, ವನ್ಯಜೀವಿ ಸಂತತಿ ನಾಶದ ಭೀತಿಯುಂಟಾಗಿದೆ. ಈ ಮಧ್ಯೆ ಒಂಟಿ ಸಲಗ ದರ್ಶನದಿಂದ ವನ್ಯಜೀವಿ ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿದೆ ಎಂದು ಕುದ್ರೆಮುಖ ವೈಲ್ಡ್ ಲೈಫ್ ಫೌಂಡೇಷನ್ನ ನಿರೇನ್ ಜೈನ್ ಹೇಳಿದ್ದಾರೆ.