Pages

ಶನಿವಾರ, ನವೆಂಬರ್ 5, 2011

ಶವಯಾತ್ರೆಗಳ ನಡುವೆ

ಬ್ಲಾಗ್ ಬರೆಯದೇ ಹಲವು ಕಾಲವೇ ಆಗಿ ಹೋಯಿತು.. ಇನ್ನೇನು ಮರೆತೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ವಿನಾಕಾರಣ ಬ್ಲಾಗ್ ನೆನಪಾಗಿದೆ. ಬೆಂಗಳೂರಿಗೆ ಬಂದು ಕಳೆದ ಬಾರಿ ಭಿಕ್ಷುಕರ ತವಕ ತಲ್ಲಣಗಳ ಬಗ್ಗೆ ಬರೆದಿದ್ದು. ಒಂದಷ್ಟು ಸಮಾನ ಮನಸ್ಕರು ಹೌದಾ.. ಹಾಗಾ ಎಂಬಂತೆ ಕೇಳಿದ್ದೂ ಆಯಿತು. ಅಲ್ಲಿಗೆ ಬದುಕಿನ ಜಂಜಾಟದಲ್ಲಿ ಬ್ಲಾಗ್ ಮರೆತೇ ಹೋಗಿತ್ತು. ಈಗ್ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ವಿಶೇಷ ಕಾರಣವಿದೆ. ಅಂತಹ ಸಂದರ್ಭವೂ ಸೃಷ್ಟಿಯಾಗಿದೆ. ನಾನಿರುವ ಸ್ಥಳ ಅಂಥದ್ದೇ ಆಗಿ ಹೋಗಿದೆ. ಹೇಳಿದರೆ ಆಶ್ಚರ್ಯ ಪಡುತ್ತೀರಿ.. ನನ್ನ (ಈಶ್ವರ) ಹೆಸರಿಗೆ ನಿಜವಾದ ಅನ್ವರ್ಥವೇ ಆಗಿದೆ.
ಹರಿಶ್ಚಂದ್ರ ಘಾಟ್..!! ಯಾರಿಗೆ ಗೊತ್ತಿಲ್ಲ ಹೇಳಿ.. ಬೆಂಗಳೂರು ಆಜು ಬಾಜಿನ ಸುತ್ತ.. ಹೊರವಲಯದಲ್ಲೂ ಬಹಳ ಫೇಮಸ್ಸು.. ಈ ಸ್ಥಳ... ಅದೊಂದು ಸ್ಮಶಾನ.. ಹೆಣ ಸುಡುವ ಅಥವಾ ಹೆಣ ಹೂಳುವ ಸ್ಥಳ.. ಬೆಂಗಳೂರಿನಲ್ಲೇ ಅತಿ ದೊಡ್ಡದು.. ವಿದ್ಯುತ್ ಮತ್ತು ಕಟ್ಟಿಗೆಯ ಸುಸಜ್ಜಿತ ಚಿತಾಗಾರಗಳಿರುವ ಸ್ಥಳ. ಅದರ ಎದುರು ಒಂದು ಬಸ್ ನಿಲ್ದಾಣ... ನೂರಾರು ಮಂದಿ ಆಫೀಸ್ಗೆ, ಮಕ್ಕಳು ಶಾಲಾ ಕಾಲೇಜಿಗೆ ಬಸ್ಸು ಹತ್ತುವ ಸ್ಥಳ. ಬದಿಯ ಓಣಿಯಲ್ಲಿ, ಸ್ವಲ್ಪ ಮುಂದೆ ಸಾಗಿ ಸ್ವಲ್ಪ ಎಡಕ್ಕೆ ತಿರುಗಿದರೆ ಅಲ್ಲೆ ನನ್ನ ಬಾಡಿಗೆ ಮನೆ. ಮನೆಗಿಂತಲೂ ಅದು ರೂಂ ಎಂದರೆ ಸೂಕ್ತ. ಇಂತಿಪ್ಪ.. ನಾನು ಹೇಳಲೇ ಬೇಕಾದ್ದು.. ಶವಗಳ ಕುರಿತು.. ಶವಯಾತ್ರೆಯ ಕುರಿತು.. ಮತ್ತು ಮನುಷ್ಯನ ಅಂತಿಮ ಯಾತ್ರೆಯ ಒಂದು ಸೂಕ್ಷ್ಮ ಮನಸ್ಥಿತಿ ಬಗ್ಗೆ.
ಹೇಳಿ ಕೇಳಿ ಇಂಥ ಸ್ಥಳದಲ್ಲೇ ನಾನು ಬಂದು ಕುಳಿತದ್ದು.. ಅಚಾನಕ್ ಆಗಿ, ಒಂದು ಹಂತದಲ್ಲಿ ತೀವ್ರ ಅನಿವಾರ್ಯತೆಯಿಂದಾಗಿ. ನಂಬಿದರೆ ನಂಬಿ ದಿನಕ್ಕೆ ನಾನು ಕನಿಷ್ಟ 1/2 ಶವಯಾತ್ರೆಯನ್ನು ತಪ್ಪದೇ ನೋಡುತ್ತೇನೆ.. ಅಥವಾ ಶವಯಾತ್ರೆಯ ಗೌಜಿ ಗದ್ದಲ ಬ್ಯಾಂಡ್, ಪಟಾಕಿಗಳ ಅಬ್ಬರವನ್ನಾದರೂ ಕೇಳುತ್ತೇನೆ. ಶವವನ್ನು ಹೂವಿನಿಂದ ಅಲಂಕರಿಸಿರುವ ಅಂಬ್ಯುಲೆನ್ಸ್ನಲ್ಲಿಟ್ಟಿದ್ದರೆ ಅದರೆದುರು ಒಂದು ಬ್ಯಾಂಡ್ ಸೆಟ್.. ಅದರ ಹಿಂದೆ ಪಟಾಕಿ ಹೊಡೆಯುವ ಹುಡುಗರು.. ಅಂಬ್ಯುಲೆನ್ಸ್ ಹಿಂದೆ ಮೃತರ ಸಂಬಂಧಿಕರೋ, ಆತ್ಮೀಯರೋ ಇತ್ಯಾದಿ.. ಇನ್ನು ಅಂಬ್ಯುಲೆನ್ಸ್ ಒಳಗೆಯೂ ನಾಲ್ಕಾರು ಮಂದಿ. ಅವರಲ್ಲೆ ಅಂಬ್ಯುಲೆನ್ಸ್ಗೆ ಕಟ್ಟಿದ್ದ ಹೂವಿನ ಮಾಲೆಗಳನ್ನು ಕಿತ್ತು, ಹೀಗೆ ದಾರಿಗೆ ಚೆಲ್ಲುತ್ತಾ ಹೋಗುತ್ತಾರೆ.. ಹಿಂದಿನವರಿಂದ ಮೃತರ ಹೆಸರು ಹೇಳಿ ಜೈಕಾರವೋ, ಗೋವಿಂದ ನಾಮಸ್ಮರಣೆಯೋ ಎಂಥದ್ದೋ ಒಂದು. ಅವರೊಂದಿಗೆ ಅಳುವವರೂ ಇಲ್ಲದಿಲ್ಲ.. ಆದರೆ ಶವ ಮೆರವಣಿಗೆಯ ಬೊಬ್ಬೆಯಲ್ಲಿ ಅವರ ಅಳು, ಯಾವುದೂ ಕೇಳಿಸುವುದಿಲ್ಲ.. ಹಾಗೇ ಹೋದವರು ಸ್ಮಶಾನದ ಒಳಗೆ ಹೋಗಿ ಅಂಬ್ಯುಲೆನ್ಸ್ನಿಂದ ಶವ ಇಳಿಸಿ, ವಿದ್ಯುತ್ ಚಿತಾಗಾರದಲ್ಲೋ, ಕಟ್ಟಿಗೆ ಚಿತಾಗಾರದಲ್ಲೋ ಇಟ್ಟು ಕೈತೊಳೆಯುತ್ತಾರೆ. ಅಲ್ಲಿಗೆ ಶವದ್ದು, ಸಂಬಂಧಿಗಳದ್ದು ಕೆಲಸ ಮುಗಿದಂತೆ.. ಈ ವಿಚಾರಗಳಿಗೆಲ್ಲ ಆರಂಭದಲ್ಲಿ ಅಷ್ಟೆಲ್ಲ ತಲೆಕೆಡಿಸಿಕೊಳ್ಳದಿದ್ದರೂ, ಕ್ರಮೇಣ ನನ್ನಲ್ಲಿ ಕೆಲ ಕುತೂಹಲ ಹುಟ್ಟಿಸಿದ್ದವು. ಶವ ಮೆರವಣಿಗೆಯಲ್ಲಿ ಸಂಬಂಧಿಕರ ನಡೆ. ಹೂವು ಹಾಕಿದ ಅಂಬ್ಯುಲೆನ್ಸ್, ಮೌನವಾಗಿ ಹೋಗುತ್ತಾರಾ.? ಅಥವಾ ಬ್ಯಾಂಡ್ ಪಟಾಕಿಗಳ ಅಬ್ಬರ ಇದೆಯಾ ಇತ್ಯಾದಿ. ಅದಕ್ಕೂ ಹೆಚ್ಚಿಗೆ ಶವ ಮೆರವಣಿಗೆಯಲ್ಲಿ ಜನರೆಷ್ಟಿದ್ದಾರೆ ಎಂಬುದು. ಮೃತಪಟ್ಟವ ಅವರ ಏರಿಯಾದಲ್ಲಿ, ತನ್ನ ಪಾಳಯದಲ್ಲಿ ಒಂದಷ್ಟು ಹವಾ ಸೃಷ್ಟಿಸಿದ್ದನೆಂದರೆ ಈ ಮೆರವಣಿಗೆಯಲ್ಲಿ ಜನ ಹೆಚ್ಚು. ಅಂಬ್ಯುಲೆನ್ಸ್ ಎದುರು ಒಂದು ರಿಕ್ಷದಲ್ಲೋ ಜೀಪಿನಲ್ಲೋ ಆತನ ಫೋಟೋ ಹಾಕಿ ಒಂದು ಹೂವಿನ ಹಾರ ಹಾಕಿ ಗಡದ್ದು ಮೆರವಣಿಗೆ. ಮೆರವಣಿಗೆ ಹಿಂದೆ ಮುಂದೆ ಜನವೋ ಜನ. ಅಲ್ಲದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಯಂತ್ರಿಸಲು ಸ್ವಯಂಸೇವಕರಂತ ವ್ಯವಸ್ಥೆ. ಸಾಮಾನ್ಯರಾದರೆ ಅಂತಹ ಗೌಜಿ ಗದ್ದಲಗಳು ಕಡಿಮೆಯೇ..
ಇಂತಹ ಮೆರವಣಿಗೆಗಳೆಂದರೆ ನಾನಿರುವ ಪ್ರದೇಶದ ಜನರಿಗೆ ಸಾಮಾನ್ಯವಾಗಿ ಬಿಟ್ಟಿವೆ. ಅವರಿಗೆ ಏನೂ ಅನ್ನಿಸುವುದೇ ಇಲ್ಲ.. ನಿತ್ಯಕರ್ಮ ಅದು.. ಸಣ್ಣದಿರುವಾಗ ಒಂದು ಬ್ಯಾಂಡ್ ಶಬ್ದ, ಒಂದು ಮೋಟಾರು ವಾಹನದ ಶಬ್ದ ಕೇಳಿದರೆ ಎದ್ದು ಬಿದ್ದು ಅಂಗಳಕ್ಕೆ ಓಡುತ್ತಿದ್ದ ನನಗೆ, ದಿನವೂ ಬ್ಯಾಂಡ್ ಶಬ್ದ ಕೇಳುವಂತಾಗಿದೆ. ಇಷ್ಟಕ್ಕೂ ಅಲ್ಲೇ ಇರಬೇಕೆಂದೇನೂ ಇಲ್ಲ.. ಆದರೂ ಇದ್ದೇನೆ. ದಿನ ದಿನ ಕಳೆದಂತೆ ಶವಯಾತ್ರೆ ಕುತೂಹಲ ಹುಟ್ಟಿಸಿದ್ದರೂ. ಅದರ ಕುರಿತ ಒಳನೋಟದಲ್ಲಿ ಎಲ್ಲರೂ ಹೀಗೇ ಹೋಗುವವರೇ ಎಂದು ಅನಿಸಿದ್ದಿದೆ. ಜೀವಂತವಿದ್ದಾಗ ಯಾರಿಗೂ ಬೇಡವಾಗಿ ಮೃತಪಟ್ಟ ಬಳಿಕ ಅತ್ತೂ ಕರೆದು ಕಳುಹಿಸಿ ಕೊಡುವ ಗೌಜು ಗದ್ದಲಗಳೇನು.. ತೀರ ವಿಚಿತ್ರ ಅನ್ನಿಸಿ ಬಿಡುತ್ತದೆ. ಹುಟ್ಟಿನ ಸಂಭ್ರಮವನ್ನು ಸಾವಿನಲ್ಲೂ ಕಾಣಿ ಎಂಬುದು ಹಿಂದಿನ ಮಾತು. ಅದರಂತೆ ನನ್ನೆದುರು ಶವಯಾತ್ರೆಗಳೂ ಹೋಗುತ್ತವೆ. ಮೃತಪಟ್ಟವರನ್ನು ತುಂಬು ಮನಸ್ಸಿನಿಂದ ಯಾರಾದರೂ ಕಳುಹಿಸಿ ಕೊಡುತ್ತಾರಾ..? ನಿನ್ನ ಬದುಕು ಸಾರ್ಥಕವಾಯಿತು ಎಂದು ಯಾರಾದರೂ ಹೇಳುತ್ತಾರಾ? ಇಂಥ ಪ್ರಶ್ನೆಗಳೆಲ್ಲವನ್ನು ಶವಯಾತ್ರೆ ಹೋದಾಗೆಲ್ಲ ಆಗಿಂದಾಗ್ಗೆ ಮನಸಿಗೆ ಬರುತ್ತವೆ. ಅಂತ್ಯಕ್ರಿಯೆಯೊಂದಿಗೆ ವ್ಯಕ್ತಿಯ ಬದುಕು ಅಂತ್ಯವಾದರೂ, ಅವನಿಂದ ಸೃಷ್ಟಿಯಾದದ್ದು ಒಂದಿಬ್ಬರಿಗಾದರೂ ನೆನಪಿನಲ್ಲಿ ಉಳಿಯುತ್ತಾದಾ ಎಂಬುದನ್ನೂ ಕೇಳಿಕೊಳ್ಳುತ್ತೇನೆ.. ಇಷ್ಟು ಬರೆಯುವಷ್ಟರಲ್ಲಿ.. ಮತ್ತೆ ದೂರದಲ್ಲೆಲ್ಲೋ ಬ್ಯಾಂಡ್, ಪಟಾಕಿ ಶಬ್ದದಂತೆ ಕೇಳಿಸುತ್ತಿದೆ.

ಚಿತ್ರ: ಇಂಟರ್ನೆಟ್ ಕೃಪೆ

3 ಕಾಮೆಂಟ್‌ಗಳು:

ಸೂರ್ಯ ವಜ್ರಾಂಗಿ ಹೇಳಿದರು...

ಸೊಗಸಾಗಿದೆ... ಬರವಣಿಗೆ.. ಶವ ಯಾತ್ರ ಮಾಡುವಾಗ ಈ ಗೌಜು ಗದ್ದಲ ಸಂಸ್ಕೃತಿ ಬೆಂಗಳೂರಿನಲ್ಲಿ ಮಾತ್ರ ಕಾಣುವುದೆಂದು ತೋರುತ್ತದೆ.

Unknown ಹೇಳಿದರು...

ಶವ ಮೆರವಣಿಗೆ ಬಗ್ಗೆ ಬರವಣಿಗೆ ಮಸ್ತಿದ್ದು ಮಾರಾಯ್ರೆ... ಅಲ್ಲ.. ನಾವೂ ಹಿಂಗೇ ಹೋಗಕಿದ್ರೆ ಯಾರಾರು ಬ್ಯಾಂಡ್ ಬಾರಿಸ್ಕಂಡ್ ಮುಂದೆ ಹೆಂಡ ಹೊಯ್ಕಂಡ್ ಕುಣಿತಾ ಹೋಗ್ತ್ವನ... ಅಲ್ದಾ..?!!

SHARATH HEGDE, KADTHALA ಹೇಳಿದರು...

ಉತ್ತಮ ಲೇಖನ. ಶವಯಾತ್ರೆಯ ೊಳನೋಟ ಚೆನ್ನಾಗಿದೆ. ಇನ್ನೂ ವಿಸ್ತರಿಸಬಹುದಿತ್ತು
-ಶರತ್