Pages

ಶುಕ್ರವಾರ, ಡಿಸೆಂಬರ್ 2, 2011

ಯುನಾನಿ ಪಂಡಿತ ಕುತ್ತಿಗೆ ಹಿಚುಕಿದ ಕಥೆ..!

ಊರಿಂದ ಬಂದು ನವರಂಗದಲ್ಲಿ ಇಳಿಯುವ ಹೊತ್ತಿಗೆ ಗಂಟೆ ಆರೂಕಾಲು. ಮನೆಗೆ ಹೋಗುತ್ತಲೇ ಪ್ರೀತಿಯ ನಾಯಿ ಕಾಲಿಗೆ ಸೋಕುವಂತೆ ಬಸ್ ಇಳಿಯುವಾಗಲೇ ಸಾರ್ ಬನ್ನಿ ಸಾರ್ ಅಟೋ ಬೇಕಾ.. ಅನ್ನುವ ಜನ. ನವರಂಗದಿಂದ ನನ್ನ ರೂಮಿಗೆ  ಒಂದು ಕಿಲೋಮೀಟರ್ ದೂರ. ಊರಿಂದ ಎಷ್ಟು ಹೊತ್ತಿಗೆ ಬಂದಿಳಿದರೂ ನನ್ನ ಪಾದಯಾತ್ರೆ ಶತಸಿದ್ಧ. ಬೆಳ್ಳಂಬೆಳಗ್ಗೆಯೇ ಸ್ಮಶಾನ ದರ್ಶನ (ಹರಿಶ್ಚಂದ್ರ ಘಾಟ್) ಮುಗಿಸಿ ಮನೆಗೆ ತೆರಳುತ್ತಿದ್ದೆ. ಅಷ್ಟರಲ್ಲಿ ಗೆಳೆಯನ ಫೋನು. ಬೆಂಗಳೂರಿಗೆ ಬಂದಿದ್ದೇನೆ ನಿನ್ನ ಮನೆಗೆ ಬರುತ್ತೇನೆ ಎರಡು ದಿನ ಕೆಲಸವಿದೆ. ನಿನ್ನ ಮನೆ ಯಾವ ಏರಿಯಾ ಎಂದು ಗೊತ್ತಿಲ್ಲ ಎಂದ. ನಾನೇ ರೈಲ್ವೇ ಸ್ಟೇಷನ್ಗೆ ಬಂದು ಕರೆದುಕೊಂಡು ಹೋಗುತ್ತೇನೆ ಅಂದೆ. ಅಂತೂ ನನ್ನ ಕೆಲಸ ಮುಗಿಸಿ ಬೈಕು ಸ್ಟಾರ್ಟ್ ಮಾಡಿ ಹೊರಟೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಬಳಿ ಬೆಂಗಳೂರಿಗರ ಬೆಳಗ್ಗಿನ ಪಡಿಪಾಟಲುಗಳನ್ನು ನಿಂತುಕೊಂಡು ನೋಡುತ್ತಿದ್ದ ಅವನನ್ನು ಕುಳ್ಳಿರಿಸಿಕೊಂಡು ಬಂದಿದ್ದೆ. ದಾರಿ ಮಧ್ಯೆಯೇ ಬೆಂಗಳೂರು ಕಡೆಗೆ ಪಾದ ಬೆಳೆಸಿದ ಕಾರಣವನ್ನು ಆತ ಹೇಳತೊಡಗಿದ.
ಎಂಥದ್ದೋ ತಲೆನೋವು ಮಾರಾಯ. ನಮ್ಮ ಕಡೆಯಲ್ಲೊಬ್ಬರು ಇಂತಿಂಥವರನ್ನು.. ಇಂಥಕಡೆಯಲ್ಲಿ ಹೋಗಿ ಕಾಣು ಎಂದು ಹೇಳಿದ್ದಾರೆ. ಅಲ್ಲಿಗೊಮ್ಮೆ ಹೋಗಬೇಕು. ನಾನೂ ತಲೆ ಅಲ್ಲಾಡಿಸಿದ್ದೆ. ಊರಿನಿಂದ ಬಂದಿರುವವರಿಗೆ, ಹೆಚ್ಚೇಕೆ ಬೆಂಗಳೂರಿನಲ್ಲಿ  ಇರುವವರಿಗೇ ಇಲ್ಲಿನ ವಿಳಾಸ ಪತ್ತೆ ಮಾಡುವುದು ಕಷ್ಟ.  ಸರಿ ಆ ಯುನಾನಿ ಪಂಡಿತನ ಅನ್ವೇಷಣೆಗೆ ಶುರು ಮಾಡಿದ್ದವು.. ಹೆಚ್ಚೇನೂ ಕಷ್ಟವಾಗಲಿಲ್ಲ.  ಬ್ರಿಗೇಡ್ ರೋಡ್ನಿಂದಾಚೆಗೆ ರಿಚ್ಮಂಡ್ ಸರ್ಕಲ್ ರೋಡ್ ಬಳಿಯ ಸಂದು ಗೊಂದಿಗಳಲ್ಲಿ ತಡಕಾಡಿದಾಗ ಪಂಡಿತ ಸಿಕ್ಕಿದ್ದ. ನನಗೆ ಮೊದಲಿಗೆ ಅನಿಸಿತ್ತು ಇವ ಏನು ಔಷಧ ಕೊಡಬಹುದು ಎಂಬಂತೆ. ಕಾರಣ ಒಂದು ಮುರುಕಲು ಮನೆ. ಬೈಕ್ ನಿಲ್ಲಿಸಿ ಬಾಗಿಲು ತೆರೆದರೆ ಕಿಟಾರನೆ ಕಿರುಚಿ ತೆಗೆದುಕೊಂಡಿತ್ತು. ಅದರ ಬದಿಯಲ್ಲೇ ಒಂದು ಸಣ್ಣ ಕೋಣೆಯ ಮಂಚದಲ್ಲಿ ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಸುಮಾರು 65-70ರ ಪ್ರಾಯದ ವ್ಯಕ್ತಿ ಕೂತಿದ್ದ. ನಮ್ಮನ್ನು ಕಂಡಕೂಡಲೇ ‘ಆವೋ ಆವೋ...  ಮಂಗಳೂರಿಂದ ಬಂದಿದ್ದೀರಾ..?’ ಪ್ರಶ್ನೆ.. ನಾನು ಎಲಾ ಇವನಾ ಅಂದುಕೊಂಡೆ..! ನಮ್ಮನ್ನು ನೋಡಿದ ಒಂದೇ ಬಾರಿಗೆ ಮಂಗಳೂರಿನವರು ಎನ್ನಬೇಕಾದರೆ ಅದೂ ಒಂದು ಮಾತು ಮಾತನಾಡದೇ.. ಭಲೇ ಅಂದುಕೊಂಡಿದ್ದೆ. ಆತನ ಕೋಣೆಯೊಳಗೆ ಹೋಗಲು ಜಾಗವೂ ಇರಲಿಲ್ಲ.  ಘಾಟು ವಾಸನೆ ಬೇರೆ..  ಇಬ್ಬರನ್ನೂ ಒಳಗೆ ಕುಳ್ಳಿರಿಸಿ ಕೇಳಿದ ಪ್ರಯಾಣ ಹೇಗಿತ್ತು ಇತ್ಯಾದಿ.. ಮತ್ತೆ ಅವನೊದ್ದೊಂದು ಪ್ರಶ್ನೆ ನಿಮಗೆ ತಲೆನೋವಾ.. ಸ್ವಾಮಿ ಕಳಿಸಿದ್ದಾರಾ ಎಂದು ಉರ್ದು, ಕನ್ನಡ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಗೆಳೆಯನನ್ನು ಕೇಳಿದ ನನಗೆ ಮತ್ತೆ ಕುತೂಹಲ. ಅಸಾಮಿ ಸಾಧಾರಣದ್ದಲ್ಲ ಎಂದು ತೀರ್ಮಾನಿಸಿಕೊಂಡೆ. ಒಂದೋ ಕಳುಹಿಸಿದವರು ಈತನಿಗೆ ಫೋನು ಮಾಡಿರಬೇಕು.. ಇತ್ಯಾದಿ ಎಲ್ಲ ನನ್ನ ತಲೆಯಲ್ಲಿ ತಿರುಗುತ್ತಿತ್ತು. ಅಷ್ಟರಲ್ಲಿ ಅವನೇ ಸಂಶಯ ಪರಿಹಾರ ಮಾಡಿದ.. ನನಗೆ ನೀವು ಕಳುಹಿಸಿದ ಜನ ಯಾರು ಎಂದೇ ಗೊತ್ತಿಲ್ಲ.. ಈ ಮೊದಲು ನಾಲ್ಕು ಮಂದಿ ಇಲ್ಲಿಗೆ ಬಂದಿದ್ದಾರೆ. ನಾನು ಅವರನ್ನು ನೋಡಿಯೂ ಇಲ್ಲ, ಮಾತಾಡಿಯೂ ಇಲ್ಲ. ಆದರೆ ನನ್ನ ಮೇಲಿನ ನಂಬಿಕೆಯಿಂದ ನಿಮ್ಮನ್ನು ಕಳುಹಿಸಿದ್ದಾರೆ ಎಂದು ಕಿರುನಗೆಯಲ್ಲೇ ಹೇಳಿದ.
ಉಭಯ ಕುಶಲೋಪರಿ ಎಲ್ಲ ಕೇಳಿ ಬಳಿಕ ಆತ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ.. ನಿಮ್ಗೆ ನಾಳೆ ಔಷಧ ಹಾಕ್ತಾನು.. ಬೆಳಗೆ 7 ಗಂಟೆಗೆ ತಿಂಡಿ ತಿಂದು ಇಲ್ಗೇ ಬನ್ನಿ ಇತ್ಯಾದಿ’ ಇದನ್ನೆಲ್ಲ ಹೇಳುವಷ್ಟರ ಹೊತ್ತಿಗೆ 2 ಬಾರಿ ಬಾಯಿಗೆ ಹೊಗೆಸೊಪ್ಪು ‘ಮಧು‘ ಇಟ್ಟು ನಾಲ್ಕು ಬಾರಿ ಅದನ್ನು ಕರಂಡಕಕ್ಕೆ ಉಗುಳಿದ್ದ. ಆತನ ಹಾವ ಭಾವ ಮಾತನಾಡುವ ಶೈಲಿ ಎಂಥವರನ್ನೂ ಮರುಳುಗೊಳಿಸಿವಂತಿತ್ತು. ಅಷ್ಟರಲ್ಲೇ ಆತ ‘ವಿಷಯ’ಕ್ಕೆ ಬಂದ. ನಿಮ್ಮ ಚಿಕಿತ್ಸೆಗೆ ಮೂರು ಸಾವಿರ ಆಗುತ್ತದೆ.! ನನಗೆ ಎದೆ ಧಸಕ್ಕೆಂದಿತು.  ಒಂದು ಬಾರಿ ಗೆಳೆಯನ ಮುಖ ನೋಡಿದೆ. ಅವ ಹಣ ನೀಡಲು ಬ್ಯಾಗು ತಡಕಾಡುತ್ತಿದ್ದ. ನಾನು ಸುಮ್ಮನೆ ಕೂತೆ.
ಈ ನಡುವೆ ಯುನಾನಿ ಪಂಡಿತನ ಗಮನ ನನ್ನೆಡೆಗೆ ತಿರುಗಿತ್ತು. ಯೂ ಆರ್ ಲುಕಿಂಗ್ ಸೋ ಎನೆರ್ಜೆಟಿಕ್.. ಬಟ್.. ನಾಟ್ ವೆರಿ ಹ್ಯಾಪಿ ಎನ್ನುತ್ತಲೇ ಎದ್ದುನಿಂತು ನನ್ನತ್ತ ತಿರುಗಿ ಕುತ್ತಿಗೆ ಹಿಡಿದುಕೊಂಡ.. ಇದ್ಯಾಕೋ ಎಡವಟ್ಟಾಗುತ್ತಿದೆ ಅನ್ನಿಸತೋಡಗಿತು.. ಗೆಳೆಯನ ಬಳಿ ಕೈ ಭಾಷೆ ಮಾಡುತ್ತಿದ್ದೆ. ಪಂಡಿತ ಒಂದು ಉಸಿರು ತೆಗೆದು ಹಿಡಿತ ಮತ್ತಷ್ಟು ಬಿಗಿ ಮಾಡಿದ ಮನೆಯರೆಲ್ಲ ಕಣ್ಮುಂದೆ ಬಂದರು ಅಷ್ಟೇ.. ನನ್ನ ಕಣ್ಣು ಮೇಲಕ್ಕೆ ಹೋಯಿತು.. ಭರ್ತಿ 15-20 ಸೆಕೆಂಡಾಗಿರಬೇಕು.. ಆತ ಪಟ್ಟು ಸಡಿಲಿಸಿದ. ನನ್ನ ಹೋದ ಜೀವ ಮರಳಿ ಬಂದಿತು ಅಬ್ಬಾ ದೇವರೆ.. ಇವನ ಚಿಕಿತ್ಸೆಯೇ ಬೇಡಪ್ಪಾ ಅಂದುಕೊಂಡೆ. ನನಗೆ ಪ್ರಾಣಾಂತಿಕವಾದ್ದನ್ನು ನೋಡಿ ಚಿಕಿತ್ಸೆ ತೆಗೆದುಕೊಳ್ಳಲಿರುವ ಗೆಳೆಯ ಬೆಪ್ಪಾಗಿದ್ದ.. ನಾಳೆ ಬರುವುದೋ ಬೇಡವೋ ಎನ್ನುವಲ್ಲಿವರೆಗೆ ಬಂದಿದ್ದ.
ಆದರೆ ಬಂದ ಕಾರ್ಯವಾಗಬೇಕು ನೋಡಿ. ಬ್ಯಾಂಗ್ನಿಂದ ಅಡ್ವಾನ್ಸ್ ಎಂದು ಐನೂರರ ಎರಡು ನೋಟುಗಳನ್ನು ಕೊಟ್ಟೇ ಬಿಟ್ಟ.. ಪಂಡಿತ ಹಣ ತೆಗೆದುಕೊಂಡವನೇ ತನ್ನ ಸನಿಹದ ಲಟಾರಿ ಕಪಾಟಿಗೆ ಅದನ್ನು ಎಸೆದುಬಿಟ್ಟ.. ಅದರಲ್ಲಿದ್ದ ರಾಶಿ ಔಷಧ ಡಬ್ಬಿಗಳು, ಪೇಪರ್, ಎಂಥದ್ದೋ ಬಾಕ್ಸ್ ಬದಿಗೆ ಹೋಗಿ ನೋಟುಗಳು ಬಿದ್ದಿದ್ದವು. ನನಗೆ ತೀರ ಅಚ್ಚರಿ. ಕೊಟ್ಟ ಹಣವನ್ನು ಹೀಗ್ಯಾರಾದರೂ ಎಸೆಯುತ್ತಾರಾ..? ಬಹುಶಃ ನನ್ನ ನೋಟ ಅವನಿಗೆ ಅರ್ಥವಾಗಿರಬೇಕು. ವೇದಾಂತ ಮಾತನಾಡಲು ಶುರುವಿಟ್ಟುಕೊಂಡ ‘ಮನಿ ಇಂಪಾರ್ಟ್ಟೆಂಟ್ ನಹೀ ಹೆ.. ಒಳ್ಳೆ ಮನಸ್ಸು ಬೇಕು. ಸಂಪಾದ್ನೆ ಮಾಡ್ತಿದ್ರೆ ನಾನು ರಾಜ ಆಗ್ತಿದ್ದೆ.. ಆಗ ಸಂಪಾದನೆ ಮಾಡಿಲ್ಲ. ನನ್ನ ತಲೆತಲಾಂತರದ ವೃತ್ತಿಯನ್ನು ನಡೆಸಿಕೊಂಡು ಬರಬೇಕಿತ್ತು. ಉಳಿದವರೆಲ್ಲ ಏನೇನೋ ಹೇಳಿ ಸಂಪಾದನೆ ಮಾಡುವಾಗ ಸಂಪಾದನೆ ಮಾಡಬೇಕಿತ್ತು ಅನಿಸುತ್ತದೆ.. ಈಗ ಕಾಲ ಕಳೆದುಹೋಗಿದೆ. ದುಡ್ಡಿನ ಅವಶ್ಯಕತೆ ನನಗಿಲ್ಲ.. ಸಾಯುವ ವರಗೆ ಸೇವೆ ಮಾಡಿಕೊಂಡಿರುತ್ತೇನೆ. ನಿಮ್ಮ ಕೈಂದ ಪಡೆದ ದುಡ್ಡು ಔಷಧ ರೆಡಿ ಮಾಡೋಕೆ’ ಅಷ್ಟರಲ್ಲಿ ನನಗ್ಯಾಕೋ ಈತ ಬಹಳ ವಿಚಿತ್ರ ಮನುಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದೆ.
ಅದಾಗಿ ಮರುದಿನ ಬೆಳಗ್ಗೆ ಹೋಗಿ ಗೆಳೆಯ ಔಷಧ ಪಡೆದಿದ್ದೂ ಆಯ್ತು.. ನೀವು ಸೋಲ್ಜರ್ ಥರಾ, ಐ ವಿಲ್ ಮೇಕ್ ಯು ಪರ್ಫೆಕ್ಟ್ ಎನ್ನುತ್ತ ಅಮೋಘ 2 ನೇ ಬಾರಿಗೆ ಕುತ್ತಿಗೆ ಹಿಚುಕಿದ್ದ. ಆದರೆ ಆ ಅನುಭವ ಮರೆಯಲು ಸಾಧ್ಯವೇ ಇಲ್ಲ. ಪ್ರಾಣ ಹೋಗುತ್ತದೆ ಎಂದೆನಿಸಿದರೂ, ಆತ ಕೈಬಿಟ್ಟ ಬಳಿಕ ಮನಸ್ಸಿಗೆ ಬಹಳ ಮುದವಾಗುತ್ತಿತ್ತು. ಒಂಥರಾ ಸ್ನಾನ ಮಾಡಿ ಬಂದು ಫ್ಯಾನ್ ಅಡಿಯಲ್ಲಿ ಕೂತರೆ ಆಗುವ ಅನುಭವದಂತೆ. ಫುಲ್ ರಿಫ್ರೆಶ್ ಅಂತಾರಲ್ಲ ಹಾಗೆ. ಸಾಲದ್ದಕ್ಕೆ ತುಮಾರಾ ಐ ಸೈಟ್ ಶಾರ್ಪ್ ಕರೇಗಾ ಎಂದು ಹೇಳುತ್ತಾ ಎಂಥದ್ದೋ ಔಷಧವನ್ನು ಬೇಡ ಬೇಡವೆಂದರೂ ಬಿಟ್ಟಿದ್ದ. 10 ನಿಮಿಷ ನನಗೆ ಕಣ್ಣೇ ಕಂಡಿರಲಿಲ್ಲ.. ಉರಿಯೋ ಉರಿ. ಈ ಜನ್ಮದಲ್ಲಿ ಆ ಕಡೆ ತಲೆಹಾಕಿ ಮಲಗಲ್ಲ ಅಂದುಕೊಂಡಿದ್ದೆ. ಅಲ್ಲಿಗೆ ಆ ದಿನದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದೆ. ಅಂದಹಾಗೆ 2ನೇ ದಿನವೂ ಪಂಡಿತನ ಲಟಾರಿ ಕಪಾಟು ನನ್ನ ಕಣ್ಣಿಗೆ ಬಿದ್ದಿತ್ತು. ಅಚ್ಚರಿ ಎಂದರೆ, ಹಿಂದಿನ ದಿನ ಮುದ್ದೆ ಮಾಡಿ ಬಿಸಾಕಿದ್ದ ಐನೂರರ ನೋಟು ಹಾಗೇ ಬಿದ್ದುಕೊಂಡಿದ್ದವು. ನಿನ್ನೆ ಬಿಸಾಕಿದ ರೀತಿ ನಮ್ಮೆದುರಿಗೆ ಸ್ಪೆಷಲ್ ಆಗಿ ತೋರಿಸಿದ್ದಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು.     
ಮತ್ತೆ ಮೂರನೇ ದಿನ ಕಿಷ್ಕಿಂಧೆಯಂಥಾ ಅವನ ಕೋಣೆಯೊಳಗೆ ನುಗ್ಗಿದ್ದೂ ಆಯ್ತು.. ಮತ್ತಿನ್ನೇನೋ ಔಷಧವನ್ನೂ ನೀಡಿದ್ದ.. ಅಲ್ಲದೇ ನನಗೂ ಸಣ್ಣ ಬಾಟಲಿಯಲ್ಲಿ ಕಂದು ಬಣ್ಣದ ಎಂಥದ್ದೋ ಔಷಧ ನೀಡಿ ಇದನ್ನು ಕಣ್ಣಿಗೆ ಹಾಕಿ.. ಒಳ್ಳೇದಾಗ್ತದೆ ಅಂದಿದ್ದ. ನನಗಾವಾಗಲೇ ಇದು ಅದೇ ಉರಿ ಔಷಧ ಎಂದು ಗೊತ್ತಾಗಿತ್ತು. ಅಲ್ಲಿಗೆ ನಮ್ಮ ಅಭಿಯಾನ ಮುಕ್ತಾಯಗೊಂಡಿತ್ತು. ಮೂರು ದಿನಗಳ ಭೇಟಿಯಾದರೂ, ವೇದಾಂತ, ಹಿತವಚನ, ಬದುಕು ಕಷ್ಟಕಾರ್ಪಣ್ಯ, ನಾವು ಆಫ್ಘಾನಿಸ್ತಾನದವರು, ಎಲ್ಲಿಂದಲೋ ಬಂದು ಎಲ್ಲಿಗೋ ತಲುಪುವವರು.. ಹಾಗೆ ಹೀಗೆ ಎಲ್ಲಾ ಅಲ್ಲಾನ ದಯೆ ಎನ್ನುವಲ್ಲಿವರೆಗೆ ಬಂದಿದ್ದ. ಉಳಿದ ಹಣವನ್ನೂ ನೀಡುತ್ತಿರುವಾಗಲೇ, ನನ್ನ ಔಷಧದಿಂದ ನಿಮಗೆ ಫಲಿತಾಂಶ ಸಿಗದಿದ್ದರೆ ಹಣ ವಾಪಸ್ ಎಂದು ಕೈಮೇಲೆ ಕೈಯಿಟ್ಟು ಹೇಳಿದ್ದ.
ನನಗೆ ಅತೀವ ಕುತೂಹಲಕ್ಕೆ ಕಾರಣವಾದ ಯುನಾನಿ ಪಂಡಿತ ಸಾಧಾರಣದವನಲ್ಲ ಎಂಬುದು ಖಚಿತವಾಗಿತ್ತು. ಒಂದು ಅತ್ಯುದ್ಭುತ ಜೀವನಾನುಭವ, ಎಂಥವರನ್ನೂ ಒಲಿಸಿಕೊಳ್ಳುವ ತಾಕತ್ತು ಅವನಿಗಿದೆ ಅನಿಸಿತ್ತು. ಆತ ಕೊಟ್ಟ ಔಷಧ ಕಣ್ಣಿಗೆ ಹಾಕದಿದ್ದರೂ (ಉರಿಯ ಹೆದರಿಕೆ) ಮನೆಯಲ್ಲಿಟ್ಟಿರುವ ಆ ಬಾಟಲ್ ಆತನನ್ನು ಪದೇ ಪದೇ ನೆನಪಿಸುತ್ತಿದೆ.





5 ಕಾಮೆಂಟ್‌ಗಳು:

BALAKRISHNA ಹೇಳಿದರು...

sathya vishayana lekhanadalli bahala chennagi bardiddiri.adaralliruva geleya naane annalu hemme anisuttide.yellavu realistic.naanu kotta advance maatra 500 ra 2 notalla badalaagi 4 notugalu.

Shyam ಹೇಳಿದರು...

revision madida hange aatu....;)
kelida kathe ida so :D

MURARI B K ಹೇಳಿದರು...

ಸುರುವಿಂಗೆ ಓದಿಯಪ್ಪಗ, ಬೊಂಡು ಇಲ್ಲೆ ಹೆಳಿ ಗ್ರೆಶಿದೆ...comment ನೊಡಿಯಪ್ಪಗ ..... ಅನ್ತು ಇಂತು ಓದುಸುತ್ತು,ಲೆಖನ.....

Keshava Prasad M ಹೇಳಿದರು...

satya appa idu???

ದೇವಧರ್ ಹೇಳಿದರು...

aa oshouda nijavaagiyoo nimma freind ge upayoga ayta?... neevu helta irodu nodidre aata eno adbuta vaada vaidya anno haage helta iddira..?... nanage nambalu sadya vaagta illa...(haaganta naanu nanna kattu hichikisikollallikkke alli baralla:P:P:P)