Pages

ಶನಿವಾರ, ಏಪ್ರಿಲ್ 10, 2010

ನಿರುತ್ತರ...!
                                                               
ಮನುಷ್ಯ ಎನ್ನುವ ಪ್ರಾಣಿಯಲ್ಲಿರುವ `ಸ್ವಾರ್ಥ' ಎನ್ನುವುದು ವಿಪರೀತ ಮಟ್ಟಕ್ಕೆ ಹೋಗುವುದಿದೆ. ತಾನು ಮಾತ್ರ ಬದುಕಿದರೆ ಅಯಿತು ಉಳಿದವರು ಏನಾದರೂ ಮಾಡಿಕೊಳ್ಳಲಿ ಎನ್ನುವ ಗುಣ! ಆಹಾ!! ಅದಕ್ಕೊಂದು ಉದಾಹರಣೆ ಕಂಡದ್ದು ನಾನಿರುವ ಉಡುಪಿ ಮನೆಯಲ್ಲಿ! ಎಲ್ಲರಿಗೂ ಸ್ವಾರ್ಥ ಎನ್ನುವುದು ಇದ್ದೇ ಇರುತ್ತದೆ. ಅದರೆ ಅದು ಒಂದು ಮಟ್ಟ ಮೀರಿ ಹೋದರೆ ಏನು ಸುಖ ಹೇಳಿ... ಸೀದ ವಿಷಯಕ್ಕೇ ಬರುತ್ತೇನೆ!
         ನಾನು ಮಣಿಪಾಲಕ್ಕೆ ಬಂದು ಕೆಲ ಸಮಯವಾಯಿತು. ಇರೋದು ಉಡುಪಿ ಸನಿಹದ ಒಂದು ಮನೆಯಲ್ಲಿ. ಆಶ್ಚರ್ಯದ ಸಂಗತಿಯೆಂದರೆ ಈ ಮನೆ ನನಗೆ ಎಂದೂ ಪೇಟೆ ಎಂದೆನಿಸಿದ್ದಿಲ್ಲ. ರಾಷ್ಟ್ರೀಯ ಹೆದ್ದಾರಿ ಸನಿಹವೇ ಇದ್ದರೂ ಅಲ್ಪ ಸ್ವಲ್ಪ ಹಳ್ಳಿಯ ವಾತಾವರಣ ಇನ್ನೂ ಉಳಕೊಂಡಿದೆ.  ಅದಕ್ಕಿಂತಲೂ ಹೆಚ್ಚಿಗೆ ನಾಲ್ಕು ಮೈನಾ ಹಕ್ಕಿ, ಎರಡು ಕಾಗೆ, ಅಪರೂಪಕ್ಕೆ ಗೀಜಗ, ಕೋಗಿಲೆ. ಮಿಂಚುಳ್ಳಿ ಎಲ್ಲಾ ಹಕ್ಕಿಗಳ ದರ್ಶನವೂ ನನ್ನ ಮನೆ ಹೊರಭಾಗದಲ್ಲಿ ನಿಂತರೆ ಆಗುವುದಿದೆ. ಕಾರಣ, ಮನೆಯ ಕಂಪೌಂಡ್ ಒಳಗಿರುವ ಸಮೃದ್ಧ ಹಣ್ಣು ನೀಡುವ ಎರಡು ಪಪ್ಪಾಯಿ ಸಸಿಗಳು ಮತ್ತು ಸೀತಾಫಲದ ಸಸಿ. ಹಣ್ಣು ಕಾಯಿ ಆಗುವ ಈ ಸಮಯ ಹಕ್ಕಿಗಳ ಮೆರವಣಿಗೆ ಹಾಗೇ ನಮ್ಮ ಮನೆ ಮುಂದೆ. ಆದನ್ನು ನೋಡುವುದೇ ಒಂದು ಸಂಭ್ರಮ. ಬೆಳಗಾಗೆದ್ದು, ಸಿಟೌಟಿನಲ್ಲಿ ಕೂತರೆ, ಎಲ್ಲಾ ಹಕ್ಕಿಗಳೂ ಬಂದು ಮುಂದಿನ ಸರಳುಗಳ ಮೇಲೆ ಕೂತು ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಹೋಗುತ್ತವೆ.
ನಾಳೆ ಬರುತ್ತೇನೆ ಎನ್ನುವಂತೆ. ನಾನು ಬಂದ ಲಾಗಾಯ್ತು ಈ ಸಂಭಾಷಣೆ ನಿರಂತರ ನಡಕೊಂಡು ಬಂದಿದೆ.. ನನ್ನ ಬೇಸರ ಕಳೆಯಲು ಉಪಾಯವೂ ಆದ್ದಿದೆ.
          ಈ ಸಮಯ ಯಾವತ್ತೂ ಹೀಗೆ ಮುಂದುವರಿಯಬೇಕೆಂದೇನಿಲ್ಲವಲ್ಲ! ಹೌದು ಹಾಗೆಯೇ ಆಯಿತು.
ಮಹಡಿ ಮೇಲಿನ ಮನೆಯಲ್ಲಿ ನಾನಿರುವುದಾದರೆ, ಕೆಳಗಿನದ್ದು ಓನರ್ ಮನೆ. ಅವರಿಲ್ಲಿ ವಾಸ ಮಾಡದೇ ಕೆಲ ದಿನಗಳಾಗಿ ಧೂಳು, ಕಸ ತುಂಬಿ ನಮ್ಮ ಮನೆಗೆ ಬರುವವರಿಗೆ ನರಕ ದರ್ಶನವಾಗುತ್ತಿತ್ತು.  ಒಂದು ದಿನ ನಲ್ಕಾರು ಜನ ಬಂದು ಶುಚಿಗೊಳಿಸುವ ಕಾರ್ಯಕ್ರಮ ಆರಂಭವಾಯಿತು.ನನ್ನ ಮನೆಯಲ್ಲಿರುವ ಇಬ್ಬರು ಗೆಳೆಯರೂ ಸೇರಿದಂತೆ ನಮಗೆ ಖುಷಿಯಾಗಿತ್ತು. ಮನೆ ಪರಿಸರ ಸ್ವಚ್ಛ ಸುಂದರವಾಗುತ್ತಿದೆಯಲ್ಲ ಎಂದು.
        ಈ ಸಂತೋಷ ಎನ್ನುವುದೆಲ್ಲ ಅಲ್ಪಾಯುಷಿ! ಹೆಚ್ಚು ಸಮಯ ಇರುವುದಿಲ್ಲ. ಸ್ವಚ್ಛಗೊಳಿಸುವ ಕಾರ್ಯಕ್ರಮದ ಎರಡನೇ ಎಪಿಸೋಡ್ ಮರುದಿನ ಆರಂಭವಾಗಿತ್ತು. ಅಂದು ಯಥಾಪ್ರಕಾರ ಮಧ್ಯಾಹ್ನ ಆಫೀಸ್ಗೆ ಹೊರಟು ಹೋಗಿದ್ದೆ. ಹಾಗೆಯೇ ರಾತ್ರಿ ಮರಳಿ ಬಂದಿದ್ದೆ. ಮನೆ ಪರಿಸರ ಸ್ವಚ್ಛಗೊಳಿಸಿದ್ದಕ್ಕೆ ಮನಸ್ಸಿನಲ್ಲೇ ಓನರ್ಗೆ ಥ್ಯಾಂಕ್ಸ್ ಹೇಳಿದ್ದೆ.
ಯಾವತ್ತಿನಂತೆ ಮತ್ತೆ ಬೆಳಕು ಹರಿಯಿತು. ಬೆಳಗ್ಗೆ ಪೇಪರ್ ಓದಲು ಸಿಟೌಟ್ನಲ್ಲಿ ಕೂತದ್ದೂ ಆಯಿತು.
ಪೇಪರಿನ ಎರಡು ಪುಟ ತೆರೆಯಲಿಲ್ಲ. ಯಾವತ್ತೂ ನೊಡುವ ಮೈನಾ ಹಕ್ಕಿಗಳು ಕಾಣಲಿಲ್ಲ. ಬಹುಶಃ ಬ್ಯಸಿ ಇರಬಹುದೇನೋ ಅಂದುಕೊಂಡೆ.
       ಊಹುಂ! ನನ್ನ ಪೇಪರ್ ಓದುವಿಕೆ ಒಂದು ಹಂತ ಮುಗಿದು... ಬೇರೆ ಕೆಲಸಕ್ಕೆ ತೆರಳಿದರೂ ಈ ಹಕ್ಕಿ ಸಂಸಾರದ ಪತ್ತೆಯಿಲ್ಲ! ಸ್ವಲ್ಪ ಸಮಯದ ಬಳಿಕ ಹಾಗೇ ಮಹಡಿಯಿಂದ ಕೆಳಗಿಳಿದು ಯಾಕೋ ತಿರುಗಿ ನೋಡುತ್ತೇನೆ.....
ಅಯ್ಯೋ ರಾಮಾ...!! ಸೀತಾಫಲ ಸಸಿ ಮಂಗಮಾಯ!! ಬುಡದಿಂದ ಕತ್ತರಿಸಿಯಾಗಿದೆ.
ಬಾವಿಕಟ್ಟೆ ಸನಿಹ ಸುಮ್ಮನಿದ್ದ ಸಸಿಗೂ ಈ ಮಾರೀಚರು ಕೈಕೊಟ್ಟರಲ್ಲಾ ಅನಿಸಿತು.ಇದೇ ಕಾರಣ ಆ ದಿನ ಮೈನಾ ಬರಲಿಲ್ಲ. ಗೀಜಗ, ಅಳಿಲು, ಪಾರಿವಾಳ ಯಾವುದರ ಪತ್ತೆಯೂ ಇಲ್ಲ.ಇವರ ಸ್ವಚ್ಛತಾ ಅಭಿಯಾನ ನಾಲ್ಕು ಜೀವದ ಆಹಾರ ಕಸಿದಿತ್ತು.! ಬೇಸಿಗೆ ಕಾಲ ಬೇರೆ... ಎಲ್ಲಿಗೆ ಹೋದಾವು... ಅಂದು ಕೊಳ್ಳುತ್ತಿದ್ದೆ. ಆ ದಿನ ಬೇಸರದಲ್ಲೇ ಆಫೀಸ್ಗೆ ತಯಾರಾಗುತ್ತಿದ್ದೆ. ಸಿಟೌಟ್ ಹೊರಗಡೆ ಹಕ್ಕಿ ಸ್ವರ! ಅರೆ ಬಂದವು ಕೊನೆಗೂ ಅಂದು ಕೊಂಡೆ. ಸಿಟೌಟ್ ಸರಳಿನಲ್ಲಿ ಎರಡಲ್ಲ ಮೂರು ಮೈನಾ ಹಕ್ಕಿಗಳು... ಒಂದೇ ಸಮ ಕಿರುಚಾಟ... ಸೀತಾಫಲ ಸಸಿ ಕಡಿದವರನ್ನು ವಿಚಾರಿಸುವಂತಿತ್ತು. ಎರಡು ಬಾರಿ ಪುರ್ರನೆ ಹಾರಿ ಮತ್ತು ಬಂದು ಕೂತು ಕಿರುಚಾಟ... ಹೀಗೆ ಮುಂದುವರಿದಿತ್ತು ಸ್ವಲ್ಪ ಕಾಲ.. ನಮ್ಮ ಆಹಾರ ಕಸಿದರಲ್ಲಾ ಎನ್ನೋ ಹಾಗೆ...
ನನ್ನ ಮನಸ್ಸಂತೂ ತೀವ್ರ ಆದ್ರವಾಗಿತ್ತು. ಹಾಗೇ ಆ ದಿನವೂ ಕಳೆದಿತ್ತು.
        ಮರುದಿನ ಬೆಳಗ್ಗೆ ಹಕ್ಕಿ ಪಡೆಯ ಪತ್ತೆಯೇ ಇಲ್ಲ. ಯಾಕೋ ಎರಡು ಅಳಿಲು ಬಂದು ನೋಡಿ ಹೋದವು.
ಈ ಘಟನೆ ಬಳಿಕವೂ ಬೆಳಗ್ಗೆ ಸಿಟೌಟಿನಲ್ಲಿ ಕೂರುವ ಅಭ್ಯಾಸವಿದೆ. ಆದರೆ ಬೆಳಗಿನ ಕ್ಷೇಮ ಸಮಾಚಾರದ ಅತಿಥಿಗಳ ಪತ್ತೆ ಇಲ್ಲ... ಮತ್ತೆ ನಾಲ್ಕಾರು ದಿನ ಬಿಟ್ಟು ಯಾವುದೋ ಹಕ್ಕಿಗಳು ಬಂದರೂ ಅವುಗಳ ಕೂಗು ಸೀತಾಫಲ ಸಸಿ ಬಗ್ಗೆ ಕೇಳಿದಂತೆಯೇ ಭಾಸವಾಗುತ್ತಿದೆ. ಅವುಗಳ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ. ಪರಿಸರದ ಜೀವಿಗಳ ಆಹಾರ ಕಸಿದುಕೊಂಡ ಪಾಪಪ್ರಜ್ಞೆ ಕಾಡಲು ಶುರುವಾಗಿದೆ!!

ಶನಿವಾರ, ಜನವರಿ 9, 2010


ಮರೆಯಾದ ಗೋಲಿಸೋಡ!
 
      ಪೆಪ್ಸಿ, ಕೋಕಾಕೋಲ, ಮಿರಿಂಡ ಎಲ್ಲ ಆಷ್ಟಾಗಿ
ಬಾಧಿಸದಿದ್ದ ಕಾಲದಲ್ಲಿ ಹಳ್ಳಿಗಳಲ್ಲೆಲಲ್ಲ  ಬಾಯಾರಿದವರ ಅಮೃತವೆಂಬತಿದ್ದದ್ದು ಗೋಲಿಸೋಡ. ಎಂಟಾಣೆ-ಒಂದು ರೂಪಾಯಿ, ಹೆಚ್ಚೆಂದರೆ ಒಂದೂವರೆ ರೂಗಳಿಗೆಲ್ಲ ಬಾಯಾರಿದವರ ದಾಹ ತಣಿಸುತ್ತಿದ್ದ ಗೋಲಿಸೋಡ ಇಂದು ಮಾಯವಾಗಿದೆ. ಸ್ವಲ್ಪ ಫ್ಲಾಶ್ಬ್ಯಾಕ್ಗಿಳಿದರೆ, ಗೋಲಿಸೋಡ ಕುಡಿಯುವುದರ ಗಮ್ಮತ್ತೇ ಬೇರೆ ಎಂಬಂತಿತ್ತು. ಬಾಟಲಿ ಹೇರಿಕೊಂಡು ಬರುವ ಶಬ್ದ ಕೇಳಿದರೆ ಸಾಕು ಅದು ಗೋಲಿಸೋಡ ಎಂಬುದು ಖಾತರಿ. ಅಂಗಡಿಗೆ ಹೋಗಿ ಗೋಲಿಸೋಡ ಪಡೆದು ಬಾಟಲಿನ ಬಾಯಲ್ಲಿದ್ದ ಗೋಲಿಯನ್ನು ಅದುಮಿದರೆ, 'ಠುಸ್' ಎಂಬ ಶಬ್ದದೊಂದಿಗೆ ಗೋಲಿ ಬಾಟಲಿಯಲ್ಲೇ ಕೆಳಕ್ಕೆ ಜಾರಿ ಕುಡಿಯಲು ರೆಡಿ. ಅದಕಕ್ಕಿಂತಲೂ ಹೆಚ್ಚಿಗೆ, ಗೋಲಿಸೋಡ ಕುಡಿಯುವುದೆಂದರೆ ಅದೊಂದು ಕಲೆ. ಗೋಲಿ ನಿಲ್ಲುವ ಜಾಗವನ್ನು ಸರಿಯಾಗಿ ತಿರುಗಿಸಿ ಹಿಡಿದರೇ ಕುಡಿಯುವವನ ಬಯಿಗೆ ಸೋಡ ಬಿದ್ದೀತು. ಬಾಲರಿಂದ ಮುದುಕರವರೆಗೆ ಬಾಯಾರಿದಾಗಲೆಲ್ಲ ಗೂಡಂಗಡಿಗೆ ಹೋಗಿ ಕೇಳುತ್ತಿದ್ದದು `ಒಂಜಿ ಗೋಲಿಸೋಡ ಕೊರ್ಲೆ' ಎಂದೇ. ಗೋಲಿಸೋಡದಲ್ಲಿಯೂ ಈಗಿನ ತಂಪು ಪಾನೀಯದಂತೆ ಜಿಂಜರ್, ಲೆಮೆನ್, ಖಾಲಿ ಸೋಡ ಎಂಬ ವಿಧಗಳಿದ್ದವು. ಕಾಲಾಂತರದಲ್ಲಿ ತಂಪು ಪಾನೀಯ ಕಂಪೆನಿಗಳ ಭರಾಟೆಯಲ್ಲಿ ಸೋಡ ನೆಲಕ್ಕಚ್ಚಿತು. ಗೋಲಿಸೋಡದಿಂದಲೇ ಬದುಕು ಸಾಗಿಸುತ್ತಿದ್ದವರು ಆ ಕೆಲಸಕ್ಕೇ ತಿಲಾಂಜಲಿ ಇತ್ತರು.
               ಆದಾಗ್ಯೂ, ಗೋಲಿಸೋಡ ಉದ್ದಿಮೆ ಸಂಪೂರ್ಣ ನೆಲಕ್ಕಚ್ಚಿತು ಎಂದು ಹೇಳುವ ಮೊದಲೇ ಅಲ್ಲೊಂದು ಇಲ್ಲೊಂದು ತಯಾರಿಕಾ ಕೇಂದ್ರಗಳು ಇನ್ನೂ ಉಳಕೊಂಡಿವೆ.  ಒಂದು ಗ್ಯಾಸ್ ಸಿಲಿಂಡರ್, ಹಿಡಿಕೆಯಿರುವ ಒಂದು ಸಣ್ಣ ಮೆಷಿನ್ ಇದಷ್ಟೇ ಗೋಲಿಸೋಡ ತಯಾರಿಕೆಯವರ ಅಸ್ತಿ. ಗೋಲಿಸೋಡಕ್ಕೆಂದೇ ತಯಾರಾದ ಗೋಲಿಯಿರುವ ದಪ್ಪ ಬಾಟಲಿಗೆ ನೀರು ತುಂಬಿಸಿ ಮೂರು ಸುತ್ತು ತಿರುಗಿಸಿದರೆ ಗೋಲಿಸೋಡಾ ರೆಡಿಯಾಗಿರುತ್ತದೆ.
ಅಂಥದ್ದೊಂದು ಕೇಂದ್ರ ಮಲ್ಪೆ-ಕೋಡಿಬೆಂಗ್ರೆ ದಾರಿಯ ತೊಟ್ಟಂ ಬಳಿ ಈಗಲೂ ಇದೆ. ಸೈಕಲಲ್ಲಿ ಸೋಡಾ ಬಾಟ್ಲಿ ಹೇರಿ ಹೋಗುತ್ತಿದ್ದವರೊಬ್ಬರನ್ನು ಹಿಡಿದು ನಿಲ್ಲಿಸಿ ಮಾತನಾಡಿದಾಗ, ಗೋಲಿಸೋಡ ತಯಾರಿದಾರರ ಕಥೆ, ಆದಾಯ, ಮಾರುಕಟ್ಟೆ ಇಲ್ಲದಿರುವುದನ್ನೆಲ್ಲಾ ಆವರು ಹೇಳುತ್ತಲೇ ಹೋದರು.
ಅವರ ಹೆಸರು ವಾಸು. ಸೋಡ ವಾಸು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ. ಮೊದಲಿನಿಂದಲೂ ಇದೇ ಉದ್ದಿಮೆ. ಒಬ್ಬರೇ ತಯಾರು ಮಾಡುತ್ತಾರೆ. ತಯಾರಿಸಿದ ಸೋಡ ಸಮೀಪದ ವೈನ್ಶಾಪ್ಗೆ ಮೀಸಲು. ಅದರಿಂದಲೇ ಅವರ ಆದಾಯ.
ಹಾಗಾದರೆ ಕಂಪೆನಿ ಸೋಡ ಅಲ್ಲಿಗೆ ಸರಬರಾಜು ಆಗುವುದಿಲ್ಲವೇ ಎಂಬ ಪ್ರಶ್ನೆಗೆ, `ಪಾಪದಕ್ಲೆಗ್ ಕಮ್ಮಿದಾವೋಡತ್ತೇ!' (ಬಡವರಿಗೆ ಕಡಿಮೆ ಕಾಸಿನದ್ದೇ ಆಗಬೇಕಲ್ಲ!) ಎಂದು ವಾಸು ನಗುತ್ತಲೇ ಉತ್ತರಿಸಿದರು.
ಅಂದಹಾಗೆ ವಾಸು ದಿನಕ್ಕೆ 75ರಿಂದ100 ಬಾಟಲಿ ಗೋಲಿಸೋಡ ತಯಾರಿಸುತ್ತಾರೆ. ಅವರು ವೈನ್ಶಾಪ್ಗೆ ಸೋಡ ಮಾರುವುದು 75ಪೈಸೆಗೆ. ವೈನ್ಶಾಪಲ್ಲಿ ಗೋಲಿಸೋಡ ಉಚಿತವಾಗಿ ಕೊಡುತ್ತಾರೆ. ಅದು ಹೊರತು ವಾಸುವಿಗೆ ಬೇರೆ ಮಾರುಕಟ್ಟೆ ಇಲ್ಲ. ಅವರ ನಾಲ್ಕು ಮಂದಿಯ ಕುಟುಂಬಕ್ಕೆ ಇದೇ ಪ್ರಮುಖ ಆದಾಯ.  ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟಿದ್ದರಲ್ಲೇ ನಾಕು ಕಾಸು ಸಂಪಾದನೆ.
        ಗೋಲಿಸೋಡ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ಗೆ 400 ರೂ ಇದೆ. ಸುಮಾರು 2500 ಬಾಟಲಿ ಸೋಡ ತಯಾರಿಸಬಹುದು ಎಂದು ಹೇಳುತ್ತಾರೆ. ವ್ಯಾಪಾರ ವೃದ್ಧಿ ಬಗ್ಗೆ ವಾಸು ಅವರಿಗೆ ತೀವ್ರ ನಿರಾಸೆ.  ಗೋಲಿಸೋಡ ಈಗ ಯಾರೂ ಕುಡಿಯುವುದಿಲ್ಲ. ಪರಿಣಾಮ ಬೇಡಿಕೆ ಇಲ್ಲ. ತಂಪು ಪಾನೀಯ, ಐಸ್ಕ್ಯಾಂಡಿ, ಲಾಲಿಪಾಪ್ ಒಟ್ಟಾಗಿ ಗೋಲಿಸೋಡವನ್ನು ಹೊಸಕಿ ಹಾಕಿದೆ ಎಂದು ಹೇಳುತ್ತಾರೆ. ಹಿಂದೆಲ್ಲಾ ಜಾತ್ರೆ, ಯಕ್ಷಗಾನ ಬಯಲಾಟ, ಕೋಳಿಆಂಕ,  ನಾಟಕ, ಸ್ಕೂಲ್ ಡೇ, ಇತ್ಯಾದಿ... ಇತ್ಯಾದಿ...  ಸಮಯದಲ್ಲಿ ಗೋಲಿಸೋಡದ್ದೇ ಕಾರುಬಾರು. ಆ ಸಮಯದಲ್ಲಿ ಆದಾಯವೂ ಚೆನ್ನಾಗಿತ್ತು ಎಂದು ಕಳೆದ ಸುಂದರ ದಿನಗಳನ್ನು ವಾಸು ಮೆಲುಕು ಹಾಕುತ್ತಾರೆ.  ಆ ಕಾಲದಲ್ಲಿ ಮೆಷಿನ್ ಖರೀದಿಗೆ ಸಹಕಾರಿ ಬ್ಯಾಂಕ್ಗಳಿಂದ ಧನಸಹಾಯವೂ ದೊರಕುತ್ತಿತ್ತು. ಈಗ ಉದ್ದಿಮೆಯನ್ನು ಜೀವಂತಗೊಳಿಸಲು ಸಾಧ್ಯವೇ ಇಲ್ಲ, ಅದೆಲ್ಲಾ ಕನಸಿನ ಮಾತು ಎಂಬುದು ಅವರ ಅಂಬೋಣ.
          ಅಂಗಡಿಗಳೆಲ್ಲೆಲ್ಲಾ ಅದರದ್ದೇ ಆದ ಸ್ಥಾನ ಪಡೆದಿದ್ದ, ಬಾಯಾರಿಕೆ ತಣಿಸುತ್ತಿದ್ದ ಗೋಲಿಸೋಡಾ ಈಗ ನೇಪಥ್ಯಕ್ಕೆ ಸರಿದಿದೆ. ಅದನ್ನೇ ನಂಬಿ ಬದುಕುತ್ತಿದ್ದ, ಸೋಡಾ ಮೆಷೀನ್ ತಿರುಗಿಸುತ್ತಿದ್ದ ಕೈಗಳೆಲ್ಲ, ಉದ್ಯಮ ನೆಲಕ್ಕಚ್ಚಿದ ಕೂಡಲೇ ಬೇರೆ ಬೇರೆ ಕೆಲಸಗಳಿಗೆ ತೊಡಗಿಕೊಂಡಿವೆ. ಆಧುನಿಕತೆಯ ಭರದಲ್ಲೋ ಅಥವಾ ತಂಪು ಪಾನೀಯ ತಯಾರಿಕಾ ಕಂಪೆನಿಗಳ ಸಾಲು ಸಾಲು ದಾಳಿಗೆ ಗೋಲಿಸೋಡ ಉದ್ಯಮ ನಶಿಸಿ ಹೋಗಿದೆ. ಹಾಗಾಗಿ ಗೋಲಿಸೋಡದ ಬಗ್ಗೆ ಚಿತ್ರದಲ್ಲೋ ಅಥವಾ ಹಳಬರ ಬಾಯಲ್ಲೋ ಕೇಳಬೇಕಾದ ಪರಿಸ್ಥಿತಿ ಹಾಗೆ..... ನಿಧಾನಕ್ಕೆ ಬರುತ್ತಿದೆ !

ಮಂಗಳವಾರ, ಡಿಸೆಂಬರ್ 8, 2009

 ಆನೆ ಬಂತೊಂದಾನೆ...........!!


ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯ ಕೆಂಪುಹೊಳೆ ಕಿರು ಜಲ ವಿದ್ಯುತ್ ಯೋಜನೆಯ ಪ್ರದೇಶ ಸಮೀಪ ಶನಿವರ ಸಂಜೆ ಹೊತ್ತು ಸಾಗುತ್ತಿದ್ದವರಿಗೆ ಇದ್ದಕ್ಕಿಂದ್ದಂತೆ   ಒಂಟಿ ಸಲಗವೊಂದರ ದರ್ಶನವಾಗಿದೆ. ಈ ಪ್ರದೇಶದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಮತ್ತು ಇತರ ಕಾಮಗಾರಿಗಳಿಂದ ಇತ್ತೀಚೆಗೆ ವನ್ಯಜೀವಿಗಳು ಅಪರೂಪವೇ ಅಗಿತ್ತು.
ನೇತ್ರಾವತಿ ನದಿಗೆ ಅಡ್ಡಲಾಗಿ ಹಲವು ಕಿರು ಜಲವಿದ್ಯುತ್ ಯೋಜನೆಗಳು ಕಾಯರ್ಾರಂಭ ಮಾಡಿದ್ದು,
ಅಪರೂಪದ ಮಳೆಕಾಡು, ಪರಿಸರ, ವನ್ಯಜೀವಿ ಸಂತತಿ ನಾಶದ ಭೀತಿಯುಂಟಾಗಿದೆ. ಈ ಮಧ್ಯೆ ಒಂಟಿ ಸಲಗ ದರ್ಶನದಿಂದ ವನ್ಯಜೀವಿ ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿದೆ ಎಂದು ಕುದ್ರೆಮುಖ ವೈಲ್ಡ್ ಲೈಫ್ ಫೌಂಡೇಷನ್ನ ನಿರೇನ್ ಜೈನ್ ಹೇಳಿದ್ದಾರೆ.

ಶನಿವಾರ, ನವೆಂಬರ್ 7, 2009

ದುಡ್ಡೇ ದೊಡ್ಡಪ್ಪ!!

ಮಣಿಪಾಲ ಎಂಬ ಪೇಟೆ ಓ ಇಲ್ಲೇ ಉಡುಪಿಗೆ ತಾಗಿಕೊಂಡಿರುವ ಪೇಟೆಯಾದರೂ ಎಲ್ಲ ಪೇಟೆಯಂತಲ್ಲ. ಕೆಲವೊಮ್ಮೆ ನನಗದು ಹೊರದೇಶವೋ ಅಥವಾ ಹಿಮಾಲಯದ ತಪ್ಪಲಿನ ಊರು ಅನ್ನಿಸುವುದಿದೆ... ಯಾಕಂದ್ರೆ,... ಇಲ್ಲಿ ಎಲ್ಲಾ ಭಾರೀ ಕಾಸ್ಟ್ಲಿ ಮಾರ್ರೆ...!!! ಒಂದು ಪ್ಲೇಟು ಗೋಳಿಬಜೆ ತಿಂದು ಬಂದರೆ... 15ರೂ ಗ್ಯಾರೆಂಟಿ... ಅಂಥದ್ರಲ್ಲಿ.. ಎರಡೆರಡು ಪ್ಲೇಟು ಜೋಬು ನೋಡದೇ ತಿಂದಿರೋ... ನೀವು ಪ್ಲೇಟು ತೊಳೆಯುವ ಸೀನು ಖಂಡಿತ! ಈ ಮಣಿಪಾಲದ ಹೋಟೆಲ್ನವರದ್ದು ಇನ್ನೂ ಒಂದು ಗುಟ್ಟಿದೆ. ನೀವು ಊರಿನವರೂ ಹೊರಗಿನ ಸ್ಟೂಡೆಂಟೋ.. ಮಲಯಾಳಿಗಳೋ.. ಘಟ್ಟದವ್ರೋ.. ಎಂಬ ಆಧಾರದ ಮೇಲೆ ತಿಂಡಿ ರೇಟು ಫಿಕ್ಸು ಆಗುತ್ತೆ... ಅದಕ್ಕೆ ನಾನು ಒಂದು ಒಳ್ಳೆ ಉಪಾಯ ಇದೆ... ಏನಪ್ಪ ಅಂದ್ರೆ... ತಿಂಡಿ ಎಲ್ಲ ಮುಗಿಸಿ ಕೌಂಟರ್ ಹತ್ರ ಬಂದು ಕೇಳೋದು... ತುಳುವಿನಲ್ಲಿ ... (ಏತಾಂಡ್ ಎನ್ನ ಬಿಲ್ಲ್ ?) ಅಲ್ಲಿಗೆ ಅವರಿಗೆ ಗೊತ್ತಗುತ್ತದೆ. ಈ ಅಸಾಮಿ ಉರಿದ್ದೇ ಎಂದು.. ಮತ್ತೆ ರೇಟು ಏರಿಸಲು ಅವಕಾಶವಿಲ್ಲ.!!
ಇದು ಹೋಟೇಲಿನ ವಿಷಯವಾದರೆ... ಅಂಗಡಿಗಳದ್ದು.. ಸಾಮಾನ್ಯ ಇದೇ ಕಥೆ... ಜನ ನೋಡಿ ರೇಟು... ತುಳು ಮಾತಾಡಿದವನಿಗೆ ೨ ರೂ ಕಡಿಮೆ. ಆದರೆ ಉಡುಪಿಯಿಂದ ಮಣಿಪಾಲಕ್ಕೆ ಕೇವಲ 6ಕಿಮೀ ಅಂತರಕ್ಕೆ ಬರೋಬ್ಬರಿ ೫ ರೂ ವ್ಯತ್ಯಾಸ ಇದೆ... ಇಲ್ಲಿಗೆ ಬರೋರೆಲ್ಲ.. ಕಾಸು ಇದ್ದವರೇ ಎಂಬ ಭಾವನೆಯೋ.. ಅಲ್ಲಾ ಕಾಸು ಇಲ್ಲದವರು ಬರುವುದೇ ಬೇಡ ಎಂಬುದೋ ಗೊತ್ತಿಲ್ಲ.... ಏನಾದರೂ ನಾನು ಮಾತ್ರ ಇಲ್ಲ ವ್ಯವಹಾರ ಮಾಡಬಾರದು ಎಂಬ ನಿಲುವಿಗೆ ಬಂದಿದ್ದೇನೆ....... ಜುಜುಬಿ 5ರೂ ೨ ರೂ ಗೆ ಆಸೆ ಮಾಡ್ತಿದ್ದಾನೆ ಅಂತ ನೀವಂದ್ಕಂಡ್ರೆ.. ತಪ್ಪು ತಪ್ಪು... ಎಲ್ಲ ಕಾಸು-ಚಿಲ್ಲರೆ ಮಹಿಮೆ........ಸ್ವಾಮೀ !!!

ಭಾನುವಾರ, ಮೇ 31, 2009

ಅಲ್ಲಾ ಸ್ವಾಮೀ ಎಲ್ಲರೂ ಎಲ್ಲದ್ರಲ್ಲೂ ಮೋಸ ಮಾಡ್ತಾರಾ ಅಲ್ಲಾ ನಾನೇ ದಡ್ಡನಾಗಿರೋದ್ರಿಂದ ಮೋಸ ಮಾಡ್ತಾರಾ ಗೊತ್ತಿಲ್ಲ! ಈ ಚಿತ್ರ ನೋಡಿ ನೀವೂ ಮೋಸ ಹೋಗ್ತೀರಿ ಖಂಡಿತ!


ಭಾನುವಾರ, ಏಪ್ರಿಲ್ 19, 2009

ಕುರುಡು ಕಾಂಚಾಣ....
ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ಅದೆಷ್ಟು ಕೋಟಿಗಟ್ಟಲೇ ದುಡ್ಡು ವಶಪಡಿಸಿದ್ದಾರೋ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ. ದಿನಾ ಅಲ್ಲಿ ಮೂರು ಇಲ್ಲಿ ಆರು.. ಮತ್ತೊಂದೆಡೆ ಎಂಭತ್ತು.. ತೊಂಭತ್ತು... ಐದು ಕೋಟಿ.... ಛೆ ಲೆಕ್ಕ... ಸಾಧ್ಯವೇ ಇಲ್ಲ... ಪ್ರಿಂಟ್ ಎಲ್ಲಿ ಇವರ ತಾತನ ಮನೇಲಿ ಆಗುತ್ತೋ ಗೊತ್ತಿಲ್ಲ. ಏನೋ ಕಪ್ಪು ಹಣ ಅಂತೆ.. ಪೋಲೀಸು ಸ್ಟೇಷನ್ನಿನ ಮೇಜಿನ ಮೇಲೆ ಕಂತೆ ಕಂತೆ... ಹರವಿದ್ದು ಮಾಧ್ಯಮದಲ್ಲಿ ಎಡೆಬಿಡದೆ ಪ್ರಚಾರವಾಗುತ್ತಿದೆ. ನಿಜಕ್ಕೂ ದುಡ್ಡು ಎಂದರೆ ಪುಕ್ಸಟ್ಟೆ ಆಗಿ ಹೋಯಿತಾ...! ಗೊತ್ತಿಲ್ಲ.. ತಿಂಗಳ ಕೊನೆಗೆ ಮಾಮೂಲಿಗೆ ಕೈಚಾಚುವ ಪೋಲೀಸರಿಗೇ ವೈರಾಗ್ಯ ಮೂಡಿರಬಹುದು...! ಒಂದು ಓಟಿಗೆ ಐನೂರು, ಸಾವಿರ ಕೊಡ್ತಾರಂತೆ... ಅಂತೆ ಕಂತೆಗಳ ಸುದ್ದಿ... ಕೆಲವೆಡೆ ಹಂಚಿದ್ದೂ ಇದೆ. ಪ್ರಚಾರಕ್ಕೆ ಹೋದವರಿಗೆಲ್ಲ ದಿನಕ್ಕೆ ಇನ್ನೂರು ಮುನ್ನೂರು ರೂಪಾಯಿಗಳ ಕೂಲಿ. ಆಹಾ ಲಕ್ಷ್ಮೀ ಕಟಾಕ್ಷ ಎಂದರೆ ಇದೇ.. ಓಟಿಗಾಗಿ ನೋಟು ಎಗ್ಗಿಲ್ಲದೇ ಹರಿಯುತ್ತಿರುವುದಂತೂ ಗ್ಯಾರಂಟಿ... ಓಟಿಗಾಗಿ ನೋಟು ತೆಗೆದುಕೊಳ್ಳಬೇಡಿ ಎಂದರೆ ಜನಸಾಮಾನ್ಯರಿಗೆ ಅರ್ಥಆಗುತ್ತದೆಯೇ ಗೊತ್ತಿಲ್ಲ. ಕೊಟ್ಟರೆ ತೆಗೆದುಕೊಳ್ಳುವುದಕ್ಕೇನು? ಎಂಬ ಮಾತು. ಸಿದ್ದರಾಮಯ್ಯ ಚುನಾವಣಾ ಪ್ರಚಾರವೊಂದರಲ್ಲಿ ಹೇಳಿದಂತೆ, ನೋಟು ಯಾರೇ ಕೊಟ್ಟರೂ ತೆಗೆದುಕೊಳ್ಳಿ.. ಆದರೆ ಓಟು ಮಾತ್ರ ನಮಗೇ ಹಾಕಿ! ಇದು ಈಗಿನ ಹೊಸ ವರಸೆ.. ಚುನಾವಣಾಧಿಕಾರಿಗಳಂತೂ ಈ ನೋಟಿನ ಹಾವಳಿ ಅಕ್ರಮಗಳಿಂದ ಹೈರಾಣಾಗಿ.... ಬೇಸತ್ತು ಕಂಗಾಲು. ಏನೇ ಆಗಲಿ ಓಟು ಯಾರಿಗಾದರೂ ಹಾಕಿ... ನೀವಂತೂ ನೋಟು ತೆಗೆದುಕೊಳ್ಳಬೇಡಿ..!
ಗುದ್ದು!: ಇಷ್ಟರವರೆಗೂ ಪೋಲೀಸರು ಹಿಡಿದದ್ದು ಹತ್ತು.. ಇಪ್ಪತ್ತು.. ಐವತ್ತು... ನೂರು... ಐನೂರು ಸಾವಿರಗಳ ಕಂತೆ ಕಂತೆ ನೋಟು. ಅಲ್ಲಿ ಎಲ್ಲೂ ಚಿಲ್ಲರೆ ಪತ್ತೆಯೇ ಇಲ್ಲ!

ಮನೆಯಲ್ಲಿ ಹಪ್ಪಳದ ಸಪ್ಪಳ!
ಬೇಸಿಗೆ ಎಂದರೆ ಕೆಲವರಿಗೆ ರಜೆ, ಪೇಟೆಯ ಮಕ್ಕಳಿಗೆ ಟ್ಯೂಷನ್ ಭೂತ.. ಹಳ್ಳಿಯ ಮಕ್ಕಳಿಗೆ ಅಜ್ಜನ ಮನೆಯ ನೀರಾಟ, ಐಸ್ಕ್ರೀಮ್, ಗಮ್ಮತ್ತು, ಹುಡುಗರಿಗೆ, ಮಾವಿನ ಮರಕ್ಕೆ ಕಲ್ಲು ತೂರುವ ಸಮಯ, ತೀರದ ಸೆಖೆಯಲ್ಲಿ ಮದುಮಕ್ಕಳಿಗೆ ಮದುವೆಯ ಗಮ್ಮತ್ತು.... ಹಳ್ಳಿಯವರಿಗೆ ಮಳೆಗಾಲಕ್ಕೆ ತಯಾರಾಗುವ ಅವಕಾಶ, ಇತ್ಯಾದಿ ಇತ್ಯಾದಿ...
ಮನೆಯ ಹೆಂಗಳೆಯರಿಗೆ, ಬೇಸಿಗೆ ಎಂದರೆ ಎದು ಹಪ್ಪಳ ಸೆಂಡಿಗೆಯ ಸಮಯ. ಮನೆಯಲ್ಲಿ ಮಕ್ಕಳಿದ್ದರಂತೂ ಹಪ್ಪಳ ತಯಾರಿಕೆಗೆ ಆನೆ ಬಲ. ಹಲಸಿನಕಾಯಿ ಬೆಳೆದಿದೆಯೋ ನೋಡಿ, ಕೊಯ್ದು, ತೊಳೆಗಳನ್ನೆಲ್ಲಾ ಬೇಯಿಸಿ ಗುದ್ದಿ ಹುಡಿಮಾಡಿದಲ್ಲಿಗೆ ಒಂದು ಹಂತದ ಕಾಯರ್ಾಚರಣೆ ಮುಗಿಯಿತು. ಅದನ್ನು ಸಣ್ಣ ಸಣ್ಣ ಉಂಡೆ ಮಾಡಿ ಮರದ ಹಪ್ಪಳ ಮಣೆಯಲ್ಲಿ ಒತ್ತಿ ಬಿಸಿಲಿಗಿಟ್ಟರೆ ಆಯಿತು. ಇದರಲ್ಲೇನು ಮಹಾ ಎಲ್ಲರ ಮನೆಯಲ್ಲೂ ಹಪ್ಪಳ ಮಾಡುವುದೇ.... ಅಂದರೆ, ಅದರಲ್ಲೇ ವಿಶೇಷ. ಈಗಿನ ಕಾಲದಲ್ಲಿ ಹಪ್ಪಳ ಎಂಬುದು ಒಂದು ರೆಡಿಮೇಡ್ ವಸ್ತುವಾಗಿ ಹೋಗಿದೆ. ಶಾಲೆಗೆ ಹೋಗುವ ಮಕ್ಕಳನ್ನು ಕೇಳಿ ನೋಡಿ... ಅದು ಅಂಗಡಿಯಲ್ಲಿ ಸಿಗುವುದು.. ಇನ್ನೇನೋ ಹೇಳುತ್ತಾರೆ. ಅಲ್ಲಿಗೆ ಹಪ್ಪಳದ ಬಗ್ಗೆ ಅವರ ಜ್ಞಾನ ಮುಗಿಯಿತು. ಆದರೆ ಹಳ್ಳಿಯಲ್ಲಿ ಕೆಲವೆಡೆ ಹಪ್ಪಳದ ಗಮ್ಮತ್ತು ಹಾಗೇ ಉಳಿದುಕೊಂಡಿದೆ. ನಾಳೆ ಒಂದೈನೂರು ಹಪ್ಪಳ ಮಾಡಬೇಕು ಎಂದು ಮನೆ ಹೆಂಗಸರು ಸ್ಕೆಚ್ ಹಾಕಿದ್ದಾರೆಂದರೆ ಮುಗಿದೇ ಹೋಯಿತು. ಮತ್ತೆ ಮರುದಿನ ಎಲ್ಲಾಕೆಲಸ ಅವರೇ ಬಹಳ ಮುತುವಜರ್ಿಯಿಂದ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು, ಅಜ್ಜಿ ಮನೆಗೆ ಬಂದವರು ಇದ್ದರೆ ಅದರ ಗಮ್ಮತ್ತೇ ಬೇರೆ. ಎಲ್ಲರಿಗೂ ಅದೊಂದು ಜಾತ್ರೆ. ಮಹಿಳೆಯರಿಗಂತೂ ಇದ್ದ ಊರಿನ ಸುದ್ದಿ, ಮದುವೆ, ಸೀಮಂತ, ನಾಮಕರಣ... ಓಡಿಹೋದ ಸುದ್ದಿಗಳೆಲ್ಲ ಹಪ್ಪಳ ಮಾಡುತ್ತಿದ್ದಂತೇ ಹಪ್ಪಳದ ಮಣೆಯೊಳಗೆ ಸಿಕ್ಕು ಚಪ್ಪಟೆ... ಮಕ್ಕಳು ಹಪ್ಪಳದ ಹಿಟ್ಟನ್ನು ಕದ್ದು ತಿಂದು ಚಡ್ಡಿಗೆವರೆಸಿ ಮುಸು ಮುಸು ನಗುವಿನೊಂದಿಗೆ, ಮತ್ತೆ ಕೆಲವರಿಗೆ ಹಪ್ಪಳ ಒತ್ತುವ ತವಕ. ಅದೇನೋ ದೊಡ್ಡ ಕೆಲಸವೆಂಬ ಭಾವನೆ! ಅಂಗಳದಲ್ಲಿ ಒಣಗಲು ಇಟ್ಟ ಹಪ್ಪಳ ಹಾಗೆಯೇ ಕರುಂ ಕರುಂ ಎಂದು ತಿಂದರೆ ಮಕ್ಕಳ ಜೀವನ ಪಾವನ! ಅಂತೂ ಹಪ್ಪಳ ಮಾಡುವುದು ಎಂದರೆ ಅದು ಕೆಲಸವಲ್ಲ, ಮನರಂಜನೆ. ಹೆಂಗಸರಿಗೆ, ಇಡೀ ಪ್ರಪಂಚದ ಸಿದ್ದಿಯನ್ನು ಜಾಲಾಡಿದ ಹಾಗೆ, ಮಕ್ಕಳಿಗೆ ಗಮ್ಮತ್ತು... ಅಮ್ಮ ನನಗೆ ಎರಡು ಹಪ್ಪಳ ಹೆಚ್ಚು ಕೊಟ್ಟಾಳು ಎಂಬ ನಿರೀಕ್ಷೆ.
ಈ ಹಪ್ಪಳದ ಸಪ್ಪಳ ಇತ್ತೀಚೆಗೆ ಸ್ವಲ್ಪ ಕಡಮೆ. ಹಳ್ಳಿಯವರು ಇನ್ನೂ ಉಳಿಸಿಕೊಂಡಿದ್ದರೆ, ಕೆಲವರಿಗೆ ಅದರ ಕೆಲಸದ ಅಗಾಧತೆಗೆ ಕೈಕಾಲು ನೋವು ಮಾಡಿಸಿಕೊಳ್ಳೋದು ಯಾಕೆ ಎಂಬ ಭಾವ! ಮಕ್ಕಳಿಗೆ ಅಜ್ಜಿ ಮನೆಯ ಗಮ್ಮತ್ತೇ ಮರೆಯಾಗುತ್ತಿರುವ ಕಾಲ... ಟ್ಯೂಷನ್ ಭೂತ ರಜೇಲೆಲ್ಲಾ ಅವರನ್ನೇ ಕಾಡುತ್ತಿರುವುದರಿಂದ ಹಪ್ಪಳದ ರುಚಿ ಅವರಿಗೆ ತಿಳಿದಿಲ್ಲ. ಪೇಟೆಯ ತಮಿಳ ಮಾಡುವುದೇ ಹಪ್ಪಳ ಎಂಬುದಷ್ಟೇ ಅವರಿಗೆ ಗೊತ್ತಿರುವುದು. ಹಪ್ಪಳ ಎಂದರೆ ಅದು ಒಂದು ಟೀಮ್ ವಕರ್್. ಬರೋಬ್ಬರಿ ಜನ ಬೇಕು... ಅಂದರೇ ಅದರ ನಿಜವಾದ ಗಮ್ಮತ್ತು. ಇಬ್ಬರೇ ಒಬ್ಬರೇ ಮಾಡಿದರೆ ಹಪ್ಪಳ ಆಗುವುದಿಲ್ಲವೇ ಎಂದರೆ, ಅದರಲ್ಲಿ ಅಷ್ಟು ರುಚಿ ಇಲ್ಲ. ಒಂದು ನಗು, ಮಕ್ಕಳ ಕೇಕೆ... ಹೆಂಗಸರ... ಲೋಕಾಭಿರಾಮ... ಮನೆಹಿರಿಯರ/ಗಂಡುಮಕ್ಕಳ ಉಸ್ತುವಾರಿ, ಸೇರಿದರೆ ಹಪ್ಪಳದಲ್ಲಿ ಖುಷಿಯ ಸಪ್ಪಳ. ನೀವೂ ಒಂದ್ಸಲ ಟ್ರೈ ಮಾಡಿ ನೋಡಿ! ಹಲಸಿನಕಾಯಿ ಬೇಕಾದರೆ ಹೇಳಿ..!