Pages

ಸೋಮವಾರ, ಸೆಪ್ಟೆಂಬರ್ 13, 2010


ನಮ್ಮ `ಗೆಸ್ಟ್'..!

ಇನ್ನೇನು ಚಪ್ಪಲಿ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಸ್ನೇಹಿತನ ಆಗಮನ. ಅವಸರವಸರವಾಗಿ ಬಂದವನೇ ನಮ್ಮ ಬಾಡಿಗೆ ಮನೆಗೆ ಒಳಹೊಕ್ಕು ಕೇಳಿದ... ಈರೆಡ ಪರತ್ ಟೀಶರ್ಟ್ ಉಂಡೇ...(ನಿಮ್ಮಲ್ಲಿ ಹಳೆ ಟೀಶರ್ಟ್ಇದೆಯಾ) ಅಂತಾ ಕೇಳಿದ.. ಏನಪ್ಪಾ ಇವನು ಹಳೆ ಟೀಶರ್ಟ್ ಕೇಳ್ತಾನೆ... ಅಂಗಿ ಏನಾದ್ರೂ ಹರಿದುಹೋಯ್ತಾ... ಅಂತಾ ಅಡಿಯಿಂದ ಮುಡಿಯುವವರೆಗೆ ಆರ್ಶರ್ಯಕರ ರೀತಿಯಲ್ಲಿ ನೋಡಿದೆ... ಬಹುಶಃ ನನ್ನ ಅವನಿಗೆ ಭಾವನೆ ಕೂಡಲೇ ಅರ್ಥವಾಗಿರಬೇಕು..... ಎಂಕತ್ತ್ ಮಾರ್ರೆ... (ನನಗಲ್ಲ ಮಾರಾಯ್ರೆ) ಅಂದ.. ಪುನಃ ನನ್ನ ಪ್ರಶ್ನೆ.. ಮತ್ತೆ ಯಾರಿಗೆ....??  ಗೆಸ್ಟ್ ಬಂದಿದ್ದಾರೆ.. ಅವರಿಗೆ ಕೊಡಬೇಕು.. ಎಂದ.. ನಾನಂದೆ... ನನ್ನಲ್ಲಿ ಹಳೇ ಟೀಶರ್ಟ್ ಅಂತಾ ಯಾವುದೂ ಇಲ್ಲ... ಒಂದ್ಸಲ ಹಾಕೋದಾದ್ರೆ ಕೊಡೋಣ... ಅಲ್ಲ.. ಅದು ಅವ್ರಿಗೆ ಪರ್ಮನೆಂಟ್.. ಬೇಕು.... ಎಂದ ಸರಿ... ಎನ್ನುತ್ತಾ ನಾನು ಅಲ್ಲೇ ಇದ್ದ ನನ್ನ    ಟೀಶರ್ಟ್ ತೆಗೆದುಕೊಟ್ಟೆ... ಅದಕ್ಕಿಂತಲೂ ನನಗೆ ಸ್ನೇಹಿತ ಕರಕೊಂಡು ಬಂದ ಗೆಸ್ಟ್ ನೋಡೋ ಕುತೂಹಲ.. ಯಾರಪ್ಪ ಒಂದು ಬಟ್ಟೆಗೂ ಗತಿಯಿಲ್ಲದಿರೋನು  ಅಂತಾ ಆಶ್ಚರ್ಯವಾಗಿತ್ತು. ಮನೆಯಿಂದ ಹೊರಗೆ ಬಂದವನೇ...... ಎದುರಿಗೆ ಇವನ ಗೆಸ್ಟ್ ನಿಂತಿದ್ದಾನೆ.. ಖಾಕಿ ಅಂಗಿ, ಚಡ್ಡಿಯಲ್ಲಿ. ನಿರರ್ಗಳವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ......  ಅಸಹನೀಯ ಗಬ್ಬುನಾಥ ಬೇರೆ.. ವಾಕ್ ವಾಕ್.. ವಾಂತಿ ಬಂದತಾಯಿತು.. ಅಯ್ಯೋ... ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.

ಬಿಟ್ಟು ಬಿಡಿ ಪ್ಲೀಸ್....
ಅಂದಹಾಗೆ..ಗೆಸ್ಟ್ ಗೂ ಮೊನ್ನೆ ಮೊನ್ನೆ ಬೆಂಗಳೂರಿನ ಭಿಕ್ಷುಕರ ಕಾಲೊನಿಗೂ ಸಂಬಂಧವಿದೆ. ಕಾಲೊನಿಯದ್ದು ಹೇಳಲಾರದ... ಕರುಣಾಜನಕ ಕಥೆ.. ಇಡೀ ಮನವ ಸಮಾಜಕ್ಕೇ ನಾಚಿಕೆಗೇಡಿನ ವಿಚಾರ.  ಭಿಕ್ಷುಕರ ಕಾಲೊನಿ ಅನ್ನೋ ನರಕಸದೃಶ ವಾತಾವರಣದಲ್ಲಿ.. ಚಿಕಿತ್ಸೆ ಇಲ್ಲದೆ... ಬೀದಿ ನಾಯಿಗಿಂತಲೂ ತೀರ ನಿಕೃಷ್ಟ ಮಟ್ಟದಲ್ಲಿ ಒಂದೇ ತಿಂಗಳಿನಲ್ಲಿ ಸುಮಾರು 27 ಹೆಣಗಳುರುಳಿದ್ದವು.... ಅದಕ್ಕೂ ಮುನ್ನ ಮಲಗಿದ್ದಲ್ಲೇ ಹೆಣವಾದವರೆಷ್ಟೋ....? ಅಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡಿಕೊಳ್ಳುತ್ತಿಲ್ಲ ಅನ್ನೋದು ನನಗೆ ಅರಿವಾದದ್ದು ಸ್ನೇಹಿತ ಕರೆದುಕೊಂಡು ಬಂದಿದ್ದ `ಗೆಸ್ಟ್'ನ ಅವಸ್ಥೆ ನೋಡಿಯೇ...
ಮೈತುಂಬಾ ಕೊಳೆ, ಗಬ್ಬು ನಾರುವ ದೇಹ, ಬಟ್ಟೆಗಳು.... ಹಲ್ಲುಜ್ಜದೇ ವರ್ಷಗಳೇ ಕಳೆದುವೇನೋ ಅನ್ನೋ ಪರಿಸ್ಥಿತಿ.. ಆ ಮನುಷ್ಯನ ಹತ್ತಿರಕ್ಕೂ ಹೋಗಲಾಗುತ್ತಿರಲಿಲ್ಲ.. ಅಂತಾ ಮನುಷ್ಯನನ್ನು ಈ ಅಸಾಮಿ ಬೈಕ್ನಲ್ಲಿ ಕುಳ್ಳಿರಿಸಿ ಕರಕೊಂಡು ಬರಬೇಕಾದರೆ... ಅಬ್ಬಾ.. ಎಂದಿತ್ತು ಮನಸ್ಸು..
ಅವನ ಹೆಸರು ರಾಮಕೃಷ್ಣ... ವಯಸ್ಸು ಸುಮಾರು 55 ದಾಟಬಹುದು. ಶಿರಾ ಬಳಿಯ ಯಾವುದೋ ಒಂದು ಊರು.. ಪಾಶ್ರ್ವವಾಯು ಪೀಡಿತನಾಗಿದ್ದವನು ಚಿಕಿತ್ಸೆಗೆಂದು ಬೆಂಗಳೂರಿಗೆ  ಆಸ್ಪತ್ರೆಗೆ ಬಂದಿದ್ದ... ಬಟ್ಟೆಯೆಲ್ಲ ಕೊಳಕಾಗಿ ಭಿಕ್ಷುಕನಂತೆ ಕಾಣುತ್ತಿತ್ತೋ ಏನೋ.. ಆಸ್ಪತ್ರೆಯಲ್ಲಿ ಕುಳಿತಿದ್ದ ಇವನನ್ನು ಭಿಕ್ಷುಕರ ಕಾಲೊನಿಯ ಕಟುಕರು ನೋಡಿದವರೇ ಎತ್ತಾಕಿಕೊಂಡು ಹೋಗಿದ್ದರು.. ಇವನದೋ ಒಂದೇ ಸವನೆ ಬೊಬ್ಬೆ.. ಬಿಡಿ ನನ್ನ... ಊರಿಗೆ ಹೋಗ್ಬೇಕು.. ಉಹೂಂ... ಇವನ ರೋದನೆಗೆ ಅವ
ರಾರೂ ಜಗ್ಗಲಿಲ್ಲ.. ಎರಡೇಟು ಹಾಕಿ ಕಾಲೊನಿಯೊಳಕ್ಕೆ ದೂಡಿದ್ರೋ ಏನೋ...
2ವರ್ಷಗಳ ಹಿಂದೆ ಹಾಗೆ ಕಾಲೊನಿಯೊಳಕ್ಕೆ ಹೋದವನು... ಹೊರಕ್ಕೆ ಬಂದಿದ್ದು ಮೊನ್ನೆಯೇ.. ಅದಕ್ಕೂ ಹೆಚ್ಚಾಗಿ ಸುಲಲಿತವಾಗಿ ಇಂಗ್ಲಿಷ್ ಬರುತ್ತಿತ್ತು... ಸೋಪು, ಟವೆಲ್ ಕೊಟ್ಟು ಸ್ನಾನಕ್ಕೆ ಕಳುಹಿಸಿದಾಗಲೇ ಅಲ್ಪ ಸ್ವಲ್ಪ ಪ್ರವರ ತಿಳಿದುಕೊಂಡೆ.. ಅದು ನರಕ ಸ್ವಾಮಿ... ಅಲ್ಲಿ ಮನುಷ್ಯರಿಗೆ  ಬೆಲೆ ಇಲ್ಲ.. ಜೀವನವೇ ಬೇಡ ಅನಿಸುತ್ತಿತ್ತು.. ಹೋಗಲು ಬಿಡಿ ಎಂದರೆ.. ದನಕ್ಕೆ ಬಡಿಯುವಂತೆ ಬಡಿಯುತ್ತಾರೆ.. ಇನ್ನು.. ಊರಲ್ಲಿ ಮಗಳಿದ್ದಾಳೆ.. ಅವರನ್ನೆಲ್ಲಾ ನನಗೆ ನೋಡಬೇಕು.. ಮತ್ತೆ ಯಾವಾಗ ಮನೆ ಸೇರುತ್ತೇನೋ ಎಂಬಂತಿತ್ತು... ಅವನ ಮಾತು. ಹಲವು ಹೆಣಗುರುಳಿದ ಬಳಿಕ ಕಾಲೊನಿಯ ಗೇಟು ತೆಗೆದ ವೇಳೆ ಹಲವರು ಓಡಿ ಹೋದ್ರು.. ನನ್ನನ್ನು ನಿಮ್ಮವರು (ಸ್ನೇಹಿತನ ಬಗ್ಗೆ)  ಇಲ್ಲಿವರೆಗೆ ಕರಕೊಂಡು ಬಂದರು.. ಅಂತಾ ಎಲ್ಲವನ್ನೂ ಹೇಳಿದ.... ಬದುಕು ಹೀಗೂ ಉಂಟೇ ಎಂಬ ಪ್ರಶ್ನೆ ನಿಧಾನಕ್ಕೆ ನನ್ನನ್ನು ಸುಳಿಯತೊಡಗಿತು... ಅಲ್ಪ ಸ್ವಲ್ಪ ಕೊಳೆಯಾದ ಬಟ್ಟೆ ಹಾಕಿ ಬಸ್ಸ್ಟ್ಯಾಂಡ್... ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರೆ.. ಭಿಕ್ಷುಕರ ಕಾಲೊನಿಯವರು ಹಿಡಿದು ಕರಕೊಂಡುಹೋಗುತ್ತಾರೆಂದರೆ... ಅಬ್ಬಾ ಪರಿಸ್ಥಿತಿ ಎಷ್ಟು ಕಠೋರ ಬೆಚ್ಚಿ ಬಿದ್ದೆ....! ಕೊಡೋ ಊಟವನ್ನೂ ಸರಿಯಾಗಿ ಕೊಡದೇ.... ಬೀದಿನಾಯಿಗಿಂತಲೂ ಕಡೆಯಾಗಿ ಬದುಕುವ ಪರಿಸ್ಥಿಯಿದೆಯಲ್ಲ... ಅದು ಯಾರಿಗೂ ಬೇಡ.. ಇದು ರಾಮಕೃಷ್ಣನ ಕಥೆ ಮಾತ್ರವಲ್ಲ.. ಭಿಕ್ಷುಕರ ಕಾಲೊನಿಯ ಕಟುಕರು ಹೀಗೆ ಹಲವಾರು ಮಂದಿಯನ್ನು ವಿವಿಧೆಡೆಗಳಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡುಹೋಗಿದ್ದರು.. ಭಿಕ್ಷುಕರ ಕಾಲೊನಿಯ ದುರಂತ ಬಳಿಕ ಸತ್ಯಗಳು ಒಂದೊಂದಾಗಿ ಮೆಲ್ಲನೆ ಮಾಧ್ಯಮಗಳಲ್ಲಿ ಬರತೊಡಗಿದವು... ಆದರೆ ನನಗೆ ಭಿಕ್ಷುಕರ ಕಾಲೊನಿಯ `ವಿಶ್ವರೂಪ ದರ್ಶನ'ವಾದದ್ದು ರಾಮಕೃಷ್ಣನನ್ನು ನೋಡಿದ ಬಳಿಕವೇ....

ಇಂತಿಪ್ಪ ರಾಮಕೃಷ್ಣನನ್ನು ಬಟ್ಟೆಹಾಕಿಸಿ.. ಕೈಯಲ್ಲಿ ಒಂದಷ್ಟು ಕಾಸು ಕೊಟ್ಟು.... ಟಿಕೇಟ್ ತೆಗೆದು ರೈಲು ಹತ್ತಿಸಿ ಬಂದು ಸ್ನೇಹಿತ ನಿಜ ಮಾನವೀಯತೆ ಮೆರೆದ... ಒಂದರ್ಥದಲ್ಲಿ `ದೇವರೂ' ಆದ... ರಾಮಕೃಷ್ಣನ ಸನ್ನಿವೇಶದ ಬಳಿಕ 2 ದಿನ ನಾನು ಕೊಲೊನಿ ದುರಂತ ಬಗ್ಗೆ ಹೆಚ್ಚು ಅಲೋಚನೆ ಮಾಡುತ್ತಿದ್ದೆ.... ಅಲ್ಲಿ ಇಲ್ಲಿ ಪೇಟೆ ಸಂದುಗೊಂದುಗಳಲ್ಲಿದ್ದವರನ್ನೆಲ್ಲ ಎಳಕೊಂಡು ಹೋದರೆ... ಅವರ ಸಾವಿಗೆ ಮುನ್ನುಡಿ ಬರೆದಂತೆಯೇ.. ಭಿಕ್ಷುಕರ ಕಾಲೊನಿ ಕೊಲೆ ಕೇಂದ್ರವೇ ಅನ್ನೋ ಸಂಶಯವೂ ಮೂಡತೊಡಗಿತ್ತು. ಇಷ್ಟಕ್ಕೂ ದುರಂತ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಿ. ಸುಧಾಕರ್ ಸುವರ್ಣನ್ಯೂಸ್ನಲ್ಲಿ ಹೀಗೆ ಹೇಳಿದ್ದರು... `ಕಾಲೊನಿಲ್ಲಿ ಇದೆಲ್ಲ ಕಾಮನ್... ಆಶ್ಚರ್ಯವೇನೂ ಇಲ್ಲ... ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂಬಂತೆ.. ಆ ಬಳಿಕ ಸಚಿವರ ತಲೆದಂಡವಾಗಿ... ಭಿಕ್ಷುಕರ ಕಾಲೊನಿಗೆ ಮಂದಿಮಾಗಧರು ಬಂದು... ಕಾಲೊನಿಯ ಚಿತ್ರಣ ಅಲ್ಪಸ್ವಲ್ಪ ಬದಲಾಗಿದೆ. ಆದ್ರೆ... ದುರಂತದ ಬಗೆಗಿನ ಚಿತ್ರಣಗಳು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ.